ಇಪಿಎಫ್‌ಒನಲ್ಲಿ 23.73 ಕೋಟಿ ಹೊಸ ಅಭ್ಯರ್ಥಿಗಳ ನೋಂದಣಿ: ಜೋಶಿ

KannadaprabhaNewsNetwork |  
Published : Jul 13, 2025, 01:18 AM IST
ರೋಜಗಾರ್‌ ಮೇಳದಲ್ಲಿ ನೂತನವಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. | Kannada Prabha

ಸಾರಾಂಶ

ಇಪಿಎಫ್‌ಒನಲ್ಲಿ ಇಷ್ಟು ಜನ ನೋಂದಣಿಯಾಗಿದ್ದಾರೆ ಎಂದರೆ ಅದರ ಅರ್ಥ ಇಷ್ಟು ಜನರಿಗೆ ಉದ್ಯೋಗ ಲಭಿಸಿದೆ ಎಂದರ್ಥ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದೆ ಎನ್ನುವವರು ಈ ಅಂಕಿ-ಸಂಖ್ಯೆ ಗಮನಿಸಲಿ. ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ರೋಜಗಾರ್ ಮೇಳದ ಮೂಲಕ ವಿತರಿಸಲಾಗುತ್ತಿದೆ.

ಹುಬ್ಬಳ್ಳಿ: ರೋಜಗಾರ ಮೇಳದ ಮೂಲಕ 10 ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡುವ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಂದಿದ್ದರು. ಅವರ ಆಶಯದಂತೆ ಇಲ್ಲಿಯ ವರೆಗೆ 7.72 ಲಕ್ಷ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಇಪಿಎಫ್‌ಒನಲ್ಲಿ ಕಳೆದ ಹತ್ತು ವರ್ಷಗಳಲ್ಲಿ 23.73 ಕೋಟಿ ಹೊಸ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕೇಶ್ವಾಪುರದ ಆಫೀಸರ್ಸ್ ಕ್ಲಬ್‌ನಲ್ಲಿ ನೈಋತ್ಯ ರೈಲ್ವೆ ಸಹಯೋಗದಲ್ಲಿ ಆಯೋಜಿಸಿದ್ದ 16ನೇ ರೋಜಗಾರ್ ಮೇಳ ಉದ್ಘಾಟಿಸಿ ಮಾತನಾಡಿದರು.

ಇಪಿಎಫ್‌ಒನಲ್ಲಿ ಇಷ್ಟು ಜನ ನೋಂದಣಿಯಾಗಿದ್ದಾರೆ ಎಂದರೆ ಅದರ ಅರ್ಥ ಇಷ್ಟು ಜನರಿಗೆ ಉದ್ಯೋಗ ಲಭಿಸಿದೆ ಎಂದರ್ಥ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದೆ ಎನ್ನುವವರು ಈ ಅಂಕಿ-ಸಂಖ್ಯೆ ಗಮನಿಸಲಿ. ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ರೋಜಗಾರ್ ಮೇಳದ ಮೂಲಕ ವಿತರಿಸಲಾಗುತ್ತಿದೆ. ಮತ್ತಷ್ಟು ಹೊಸ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಆ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲಾಗುವುದು ಎಂದು ತಿಳಿಸಿದರು.

ಭಾರತದಲ್ಲಿ ಯುವ ಸಮುದಾಯ ಹೆಚ್ಚಿದೆ. ದೇಶ ಶೇ. 65ರಷ್ಟು 35 ವಯೋಮಿತಿ ಒಳಗಿನ ಯುವ ಸಮುದಾಯ ಹೊಂದಿದೆ. ಹೊಸ ಉದ್ಯಮಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಉದ್ಯೋಗಿಗಳಾಗುವ ಬದಲು ಉದ್ಯೋಗದಾತರಾಗಲು ಮುಂದೆ ಬರಬೇಕು. ಉದ್ಯಮಗಳ ಸ್ಥಾಪನೆಗೆ ಆಸಕ್ತಿ ಹೊಂದಿದವರನ್ನು ಪ್ರೋತ್ಸಾಹಿಸುವಂತೆ ಅವರು ತಿಳಿಸಿದರು.

ಕಳೆದ 10 ವರ್ಷದಲ್ಲಿ ಸುಮಾರು 40 ಸಾವಿರ ಕಿ.ಮೀ. ರೈಲ್ವೆ ವಿದ್ಯುದ್ಧೀಕರಣ ಮಾಡಲಾಗಿದೆ. 10 ವರ್ಷಗಳ ಹಿಂದೆ ಸುಮಾರು 23 ಸಾವಿರ ಕಿ.ಮೀ. ವಿದ್ಯುದ್ಧೀಕರಣ ಮಾಡಲಾಗಿತ್ತು. ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ರಾಷ್ಟ್ರದಲ್ಲಿ ಮೂಲಸೌಕರ್ಯ ಸುಧಾರಣೆಯಾಗಿದೆ. ಮಹಿಳೆಯರೂ ವಿವಿಧ ರಂಗಗಳಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2015ರಲ್ಲಿ ಶೇ 32ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದರು. ಇದೀಗ ಶೇ. 40ರಷ್ಟು ಮಹಿಳ‍ೆಯರು ಉದ್ಯೋಗಿಗಳಾಗಿದ್ದಾರೆ. ವಿವಿಧ ಇಲಾಖೆಗಳಿಗೆ ಹೊಸದಾಗಿ ನೇಮಕವಾದ ಅಭ್ಯರ್ಥಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ತಿಳಿಸಿದರು.

2014ರ ಪೂರ್ವದಲ್ಲಿ ದೇಶದಲ್ಲಿ ಪ್ರತಿವರ್ಷ ಪ್ರತಿ ದಿನ 2.5 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣವಾಗುತ್ತಿತ್ತು. ಈಗ ಪ್ರತಿದಿನ 12 ಕಿಮೀ ಹೊಸ ಮಾರ್ಗ ನಿರ್ಮಾಣವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಖುಲ್ ಶರಣ ಮಾಥುರ್, ಡಿಆರ್‌ಎಂ ಬೀಲಾ ಮೀನಾ, ಪಿಸಿಪಿಒ ಸೂರ್ಯ ಪ್ರಕಾಶ ಸೇರಿದಂತೆ ವಿವಿಧ ರೈಲ್ವೆ ಅಧಿಕಾರಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು