23 ರಂದು ಸಂಜೆ 5.30 ಕ್ಕೆ ಉದ್ಘಾಟನಾ ಸಮಾರಂಭ
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆ. 24 ಮತ್ತು 25 ರಂದು ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ- 2024 ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ವರ್ಷಾ ಅಭಿಷೇಕ್ ತಿಳಿಸಿದರು.
ಕೆಂಪನಹಳ್ಳಿ ಆಶಾಕಿರಣ ಚಾರಿಟಬಲ್ ಟ್ರಸ್ಟ್, ಹಾಗೂ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಮೈಕೋಶ ಸಂಸ್ಥೆ ಸಹಯೋಗದಲ್ಲಿ ನಡೆಯುವ ಮಲೆನಾಡು ಮಹೋತ್ಸವಕ್ಕೆ ಸುಮಾರು 100 ಮಳಿಗೆಗಳು ಪಾಲ್ಗೊಳ್ಳುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಆ. 23 ರಂದು ಸಂಜೆ 5.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಚಿವರು ಮತ್ತು ಶಾಸಕರು ಆಗಮಿಸಲಿದ್ದಾರೆ. ಆ.24 ಮತ್ತು 25 ರಂದು ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ ನಡೆಯಲಿದೆ, ಇದಕ್ಕೆ ಆಗಮಿಸುವವರು 50 ರು. ನೀಡಿ ಪಾಸ್ ಪಡೆಯಬೇಕಾಗಿದೆ. ಇದರಿಂದ ಸಂಗ್ರಹವಾಗುವ ಹಣದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿಗೆ 8-10 ವಸತಿ ಗೃಹ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಆಶಾಕಿರಣ ಚಾರಿಟಬಲ್ ಟ್ರಸ್ಟ್ ಕರ್ನಾಟಕ ಅಂಧರ ಒಕ್ಕೂಟದ ಸಂಸ್ಥೆ ಪೂರಕ ಸಂಸ್ಥೆಯಾಗಿದೆ. 1990 ರಲ್ಲಿ ನಗರದ ಕೆಂಪನಹಳ್ಳಿಯಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆ ಸ್ಥಾಪಿಸಲಾಯಿತು. 34 ವರ್ಷದಿಂದ ಸರ್ಕಾರದ ಭಾಗಶಃ ಅನುದಾನ ಮತ್ತು ನೆರವಿನಿಂದ ಅಂಧ ಬಾಲಕ, ಬಾಲಕಿಯರಿಗೆ ಬ್ರೈ ಲ್ ಲಿಪಿಯಲ್ಲಿ ಶಿಕ್ಷಣ ನೀಡುವುದರೊಂದಿಗೆ ಸಂಗೀತ, ತಾಳವಾದ್ಯ, ಕಂಪ್ಯೂಟರ್, ಕೈ ಕಸುಬು, ಆಟೋಟ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಔಷಧೋಪಚಾರ ನೀಡಲಾಗುತ್ತಿದೆ ಎಂದು ಹೇಳಿದರು.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ನಾಗವೇಣಿ ಮಾತನಾಡಿ, ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೇಳ ನಡೆಸಲಾಗುವುದು ಎಂದು ತಿಳಿಸಿದರು.