ರಾಮನಗರದ ಎಲ್ಲಾ ವಾರ್ಡುಗಳಿಗೆ 24 ಗಂಟೆ ನೀರು

KannadaprabhaNewsNetwork |  
Published : Jun 26, 2026, 01:15 AM IST
25ಕೆಆರ್ ಎಂಎನ್ 2.ಜೆಪಿಜಿರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ  ದಿನದ 24ಗಂಟೆ ಕುಡಿಯುವ ನೀರು ಪೂರೈಕೆಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಜಲಮಂಡಳಿ ಎಇಇ ಪುಟ್ಟಯ್ಯ ಪರಿವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ನೆಟ್ಕಲ್ ಯೋಜನೆ ಅಡಿಯಲ್ಲಿ ಎರಡು ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಮನೆಗಳಿಗೆ ದಿನದ 24 ಗಂಟೆಯೂ ಕಾವೇರಿ ನೀರು ಪೂರೈಸುವ ಕಾರ್ಯವನ್ನು ನಗರದ ಎಲ್ಲ ವಾರ್ಡುಗಳಿಗೂ ವಿಸ್ತರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು

ರಾಮನಗರ: ನೆಟ್ಕಲ್ ಯೋಜನೆ ಅಡಿಯಲ್ಲಿ ಎರಡು ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಮನೆಗಳಿಗೆ ದಿನದ 24 ಗಂಟೆಯೂ ಕಾವೇರಿ ನೀರು ಪೂರೈಸುವ ಕಾರ್ಯವನ್ನು ನಗರದ ಎಲ್ಲ ವಾರ್ಡುಗಳಿಗೂ ವಿಸ್ತರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ನಗರದ 25ನೇ ವಾರ್ಡಿನ ಮಂಜುನಾಥನಗರ ಮತ್ತು ಕೋಡಿಪುರದ ಮನೆಗಳಿಗೆ ಪ್ರಾಯೋಗಿಕವಾಗಿ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುತ್ತಿರುವ ಕಾರ್ಯವನ್ನು ಜಲಮಂಡಳಿ ಅಧಿಕಾರಿಗಳೊಂದಿಗೆ ಗುರುವಾರ ಪರಿವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ರಾಮನಗರದ ಪ್ರತಿ ಮನೆಗೂ ದಿನದ 24 ಗಂಟೆ ನೀರು ಪೂರೈಸುತ್ತಿರುವುದು ರಾಜ್ಯದಲ್ಲಿಯೇ ವಿನೂತನ ಪ್ರಯೋಗವಾಗಿದ್ದು, ಅದು ಯಶಸ್ವಿಯಾಗಿದೆ ಎಂದರು.

ನಗರದ 27ನೇ ವಾರ್ಡಿನ ವ್ಯಾಪ್ತಿಗೆ ಬರುವ ವಿವೇಕಾನಂದ ನಗರ ಮತ್ತು ರಾಯರದೊಡ್ಡಿ ಬಡಾವಣೆಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಅಲ್ಲಿ ಯಶಸ್ವಿಯಾದ ಬಳಿಕ 25ನೇ ವಾರ್ಡಿನ ಮಂಜುನಾಥನಗರ ಮತ್ತು ಕೋಡಿಪುರ ಬಡಾವಣೆಗಳಲ್ಲಿ ನಡೆಸಿದ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿದೆ ಎಂದರು.

ಕಡ್ಡಾಯ ನೀರಿನ ಬಿಲ್ ಪಾವತಿಸಿ:

ಎರಡು ವಾರ್ಡಿನ ಜನರು ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಎಲ್ಲ ವಾರ್ಡುಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದರ ಹಿಂದೆ ಜಲಮಂಡಳಿ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೆಟ್ಕಲ್ ಯೋಜನೆಗೆ ಸುಮಾರು 500 ಕೋಟಿ ರುಪಾಯಿಗಳಷ್ಟು ಖರ್ಚಾಗಿದ್ದು, ನಾಗರೀಕರು ಮಿತವಾಗಿ ನೀರು ಬಳಸಬೇಕು. ಬೇರೆಡೆ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀರು ಪೋಲಾಗುತ್ತಿದ್ದರೆ ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತರಬೇಕು. ಮಿತವಾಗಿ ನೀರು ಬಳಸಿ, ಕಡ್ಡಾಯವಾಗಿ ನೀರಿನ ಬಿಲ್ ಪಾವತಿಸಬೇಕು. ಆಗ ಮಾತ್ರ ಜಲಮಂಡಳಿ ನೀರು ಪೂರೈಸಲು ಸಾಧ್ಯವಾಗಲಿದೆ ಎಂದು ಶೇಷಾದ್ರಿ ಹೇಳಿದರು.

ಜಲ ಮಂಡಳಿ ಎಇಇ ಪುಟ್ಟಯ್ಯ ಮಾತನಾಡಿ, ಈ ಭಾಗದಲ್ಲಿ ಸುಮಾರು 2 ಸಾವಿರ ಮನೆಗಳಿದ್ದು, 1100 ಕೊಳಾಯಿ ಸಂಪರ್ಕಗಳಿದ್ದವು. ಇಲ್ಲಿಗೆ 40 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇತ್ತು. ಆದರೀಗ ನೆಟ್ಕಲ್ ಯೋಜನೆ ಅನುಷ್ಠಾನಗೊಂಡು ಪ್ರತಿ ಮನೆಗೆ ಕೊಳಾಯಿ ಸಂಪರ್ಕ ಕಲ್ಪಿಸಿದ ಬಳಿಕ 20 ಲಕ್ಷ ಲೀಟರ್ ನೀರು ಸಾಕಾಗಿದೆ. ಪೋಲಾಗುತ್ತಿದ್ದ ಸುಮಾರು 20 ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡಿದ್ದೇವೆ ಎಂದು ತಿಳಿಸಿದರು.

ಮಂಜುನಾಥ ನಗರ ಬಡಾವಣೆಯಲ್ಲಿ ಕೆ.ಶೇಷಾದ್ರಿ ಮತ್ತು ಪುಟ್ಟಯ್ಯನವರು ಕಾಲ್ನಡಿಗೆಯಲ್ಲಿ ಸಾಗಿ ನಿವಾಸಿಗಳಿಂದ ಕುಡಿಯುವ ನೀರು ಪೂರೈಕೆ ಸಂಬಂಧ ಸಮಾಲೋಚನೆ ನಡೆಸಿದರು. ಈ ವೇಳೆ ನಿವಾಸಿಗಳು ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿದೆ. ಕೆಲವೆಡೆ ನೀರು ಪೋಲಾಗುತ್ತಿದ್ದು, ಅದನ್ನು ತಡೆಯುವಂತೆ ಜಲಮಂಡಳಿ ಅಧಿಕಾರಿಗಳ ಗಮನ ಸೆಳೆದರು. ಎಂಜಿನಿಯರ್ ಗಳು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುತ್ತುರಾಜ್, ಆಯುಕ್ತ ಜಯಣ್ಣ, ಜಲಮಂಡಳಿ ಜೆಇ ಶಿವರಾಜ್ ಮತ್ತಿತರರು ಹಾಜರಿದ್ದರು.

25ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ದಿನದ 24ಗಂಟೆ ಕುಡಿಯುವ ನೀರು ಪೂರೈಕೆಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಜಲಮಂಡಳಿ ಎಇಇ ಪುಟ್ಟಯ್ಯ ಪರಿವೀಕ್ಷಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಎಸ್‌ಟಿ ಅಧಿಕಾರಿಗಳ ದಾಳಿಯಿಂದ ವ್ಯಾಪಾರ ವಾತಾವರಣಕ್ಕೆ ಧಕ್ಕೆ
ಎಸ್‌ಐಆರ್‌ ಪ್ರಕ್ರಿಯೆಗೆ ಎಲ್ಲರೂ ಕೈಜೋಡಿಸಿ ಎಂದ ಸಂತೋಷ್‌