ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿಎಡದಿಂದ ಬಲಕ್ಕೆ ಎಳೆಯಲಾಯಿತು.
ಇದಕ್ಕೂ ಮೊದಲು ಕಿರುರಥದಲ್ಲಿಗಣಫತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ದ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆತರಲಾಯಿತು.ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ೧೫ ಅರ್ಚಕರು ಮಂತ್ರಘೋಷ ಮಾಡಿದರು. ತಟ್ಟಿರಾಯ, ಅಪ್ಸರೆಯರು, ಕಳಶ ಹಿಡಿದ ಯುವತಿಯರು, ಹುಲಿರಾಯ, ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಬಿರುದಾವಳಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.
ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಅಧ್ಯಕ್ಷಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಗಣ್ಯರು ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಯಕ್ಷ ಪ್ರಯೋಗದ ಧೀಂಕಿಟ:ಭಾನುವಾರ ಆಳ್ವಾಸ್ ಸಾಂಸ್ಕೃತಿಕ ಹಾಗೂ ಕ್ರೀಡಾತಂಡದ ವಿದ್ಯಾರ್ಥಿಗಳು ರೋಚಕಅನುಭವ ನೀಡುವ ಪ್ರದರ್ಶನ ನೀಡಿ, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಸುಮಾರು ೧೩೦ ವಿದ್ಯಾರ್ಥಿಗಳು ಏಕಕಾಲದಲ್ಲಿ ಮಲ್ಲಕಂಬ ಸಾಹಸ ಪ್ರದರ್ಶನ ನೀಡಿದರು.
ನೃತ್ಯ ಸಂಯೋಜಕಿ ವಿದುಷಿ ಪ್ರವಿತಾಅಶೋಕ್ಅವರ ಶಿಷ್ಯಂದಿರು ಸೇಂಟ್ ಬಾನು ದಾಸ್ ಸಂಗೀತ ನಿರ್ದೇಶನದಲ್ಲಿ ಭರತನಾಟ್ಯದ ನೃತ್ಯರೂಪಕ ‘ಬೃಂದಾವನ ವೇಣು’ ಪ್ರಸ್ತುತಪಡಿಸಿದರು.ಬಿ.ವಿ. ಕಾರಂತರು ಬರೆದ ‘ಗಜವದನ ಹೇ ರಂಭಾ...’ ರಂಗಗೀತೆಯನ್ನುಖ್ಯಾತಗಾಯಕ ವಾಸುಕಿ ವೈಭವ್ ಹಾಡಿದ್ದು ಜನಪ್ರಿಯಗೊಂಡಿದೆ. ಈ ರಂಗಗೀತೆಗೆ ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಅರೆಹೊಳೆ ಪ್ರತಿಷ್ಠಾನ ತಂಡವು ‘ಶ್ರೀ ಗಣೇಶ ವೈಭವ’ ನೃತ್ಯಕಾರ್ಯಕ್ರಮ ಪ್ರಸ್ತುತ ಪಡಿಸಿತು. ಪೃಥ್ವಿಶ್ ಶೆಟ್ಟಿಗಾರ್ ಹಾಗೂ ಶಬರೀಶ್ ಮುನಿಯಾಲ್ ನಿರ್ದೇಶನದ ‘ಶಂಕರಾರ್ದ ಶರೀರಿಣಿ’ ಪ್ರಸಂಗವು ಬಡಗುಯಕ್ಷ ಪ್ರಯೋಗ ಗಮನ ಸೆಳೆಯಿತು. ನಿತೇಷ್ ಮಾರ್ನಾಡು ನಿರೂಪಿಸಿದರು.