)
ಮಾಜಿ ಶಾಸಕ ಲಿಂಗೇಶ್ಗೆ ಉರುಳಾದ ಅಕ್ರಮ ಭೂ ಮಂಜೂರಾತಿ
ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರ ಅವಧಿಯಲ್ಲಿ ನಡೆದಿದ್ದ ಬಗರ್ ಹುಕ್ಕುಂ ಸಮಿತಿಯ ಮಂಜೂರಾತಿಯಲ್ಲಿ ಅಕ್ರಮವೆಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಿಂದ ಆಗಮಿಸಿದ್ದ ಸಿಐಡಿ ಪೊಲೀಸರ ತಂಡ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿದಂತೆ 30 ಮಂದಿ ಸಿಬ್ಬಂದಿಯನ್ನು ತಮ್ಮ ವಶಕ್ಕೆ ಪಡೆಯುವುದರೊಂದಿಗೆ ಸುಮಾರು ಐದು ವರ್ಷದ ಹಿಂದೆ ನಡೆದಿದ್ದ ಪ್ರಕರಣಕ್ಕೆ ಜೀವ ಬಂದಿದೆ.
2023 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಜಿಲ್ಲಾಧ್ಯಕ್ಷರು ಆಗಿರುವ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರು ಅಂದೇ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಅಂದೇ ಜಮೀನು ಅರ್ಜಿ ತಿರಸ್ಕಾರಿಸಿತ್ತು. ಅಂದಿನಿಂದ ಇಂದಿನವರೆಗೆ ಅಂದರೆ ಸರಿ ಸುಮಾರು 3 ವರ್ಷಗಳ ಕಾಲ ಈ ಪ್ರಕರಣ ಹಳ್ಳ ಹಿಡಿದಿದೆ ಎಂದೇ ಭಾವಿಸಲಾಗಿತ್ತು. ಆದರೆ ಇಂದು ಬೆಳಂ ಬೆಳಗ್ಗೆ ಸಿ.ಐ.ಡಿ. ಪೊಲೀ ಸರು ದಿಡೀರ್ ದಾಳಿ ನಡೆಸಿ ಸಿಕ್ಕ ಸಿಕ್ಕ ಕಡೆ ಮಾಜಿ ಶಾಸಕರನ್ನು ಒಳಗೊಂಡಂತೆ ಅಕ್ರಮವೆಸಗಿದ್ದ ಅವಧಿಯಲ್ಲಿ ಸಹಕರಿಸಿದ್ದ ವಿ.ಎ, ರೆವಿನ್ಯೂ ಇನ್ಸ್ಪೆಕ್ಟರ್ಗಳು, ಅಂದಿನ ತಹಸೀಲ್ದಾರ್ಗಳು ಸೇರಿ ಬರೋಬರಿ 30 ಮಂದಿಯನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆಂದು ಹೇಳಲಾಗಿದೆ.ಇಂದು ಬೆಳಗ್ಗೆ ಸುಮಾರು 5 ಗಂಟೆ ಸಮಯದಲ್ಲಿ ಲಿಂಗೇಶ್ ಅವರ ನಿವೇಶನಕ್ಕೆ ತೆರಳಿದ ಸಿ.ಐ.ಡಿ ಅಧಿಕಾರಿಗಳ ತಂಡ ಮೊದಲು ಅವರನ್ನು ತಮ್ಮ ವಶಕ್ಕೆ ಪಡೆದಿದೆ. ಬಳಿಕ 30 ಮಂದಿ ಸಿಬ್ಬಂದಿಗಳನ್ನು ತಲಾಷ್ ಮಾಡಿ ಅವರುಗಳನ್ನು ಸಹ ತಮ್ಮ ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಕೆಲ ಸಿಬ್ಬಂದಿಯಲ್ಲಿ ನಿವೃತ್ತ ಅಧಿಕಾರಿಗಳು ಸಹ ಸೇರ್ಪಡೆ ಯಾಗಿದ್ದಾರೆಂದು ಹೇಳಲಾಗಿದೆ.
ಸರ್ಕಾರದ ನಿಯಮಾನು ಸಾರ ಯಾವುದೇ ಪುರಸಭಾ ವ್ಯಾಪ್ತಿಯಿಂದ ಮೂರು ಕಿಲೋಮೀಟರ್ ವ್ಯಾಪ್ತಿ ಒಳಗೆ ಸರ್ಕಾರಿ ಜಮೀನನ್ನು ಯಾರಿಗೂ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ಕೆ.ಎಸ್. ಲಿಂಗೇಶ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬೇಲೂರು ಪುರಸಭಾ ವ್ಯಾಪ್ತಿಯಿಂದ ಕೂಗಳತೆಯಲ್ಲಿರುವ ಮಾವಿನಕೆರೆ, ಬಂಟೇನಹಳ್ಳಿ, ಡಣಾಯಕನಹಳ್ಳಿ, ಮುದಿಗೆರೆ, ರಾಯಪುರ, ಸೇರಿದಂತೆ ಸುತ್ತಮುತ್ತಲಿನ ಮೌಲ್ಯಯುತ ಸರ್ಕಾರಿ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿ ಮಾಡಿ ಸಾಗುವಳಿ ಚೀಟಿ ನೀಡಿ ಖಾತೆ ಸೃಷ್ಠಿಸಲಾಗಿತ್ತು.
ಡಿವೈಎಸ್ಪಿ ನೇತೃತ್ವದಲ್ಲಿ 9 ತಂಡ ಇಂದು ಬೆಳ್ಳಂ ಬೆಳಗ್ಗೆಯಿಂದ ಡಿವೈಎಸ್ಪಿ ನೇತೃತ್ವದ 9 ತಂಡಗಳು ರಚನೆ ಯಾಗಿದ್ದು 60 ಕ್ಕೂ ಹೆಚ್ಚು ಮಂದಿ ಪೊಲೀಸರು ಕಾರ್ಯಚರಣೆಯಲ್ಲಿ ಭಾಗಿಯಾಗಿ ದ್ದಾರೆಂದು ಹೇಳಲಾಗಿದೆ.
ಬಗರ್ ಹುಕುಂ ಸಮಿತಿಗೆ ಭೂಮಿ ಮಂಜೂರಾತಿ ಕೋರಿ ಹಲವರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಭೂಮಿ ಉಳ್ಳವರು, ಬಲಾಢ್ಯರು, ಶ್ರೀಮಂತರು ಸೇರಿದಂತೆ ಭೂಮಿಯೇ ಇಲ್ಲದೆ ಬದುಕು ಸಾಗಿಸುತ್ತಿದ್ದವರು, ಅಬಲರಾದಿಯಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಬಗರ್ ಹುಕುಂ ಸಮಿತಿಯಲ್ಲಿ ಉಳ್ಳವರಿಗೆ, ಬಲಾಢ್ಯರಿಗೆ ಮಾತ್ರ ಭೂ ಮಂಜೂರಾತಿ ದೊರೆಯುವಲ್ಲಿ ಸಮಿತಿ ಕಾರ್ಯನಿರ್ವಹಿಸಿ ಬೆಂಗಳೂರು ಮೂಲದವರಿಗೆ ಮಂಜೂರಾಗಿತ್ತು.