ದುಬೈನಲ್ಲಿ ಸಿಲುಕಿದ ಬಳ್ಳಾರಿಯ 32 ಪ್ರವಾಸಿಗರು

KannadaprabhaNewsNetwork |  
Published : Mar 02, 2026, 02:15 AM IST
ದುಬೈನಲ್ಲಿ ಸಿಲುಕಿಕೊಂಡಿರುವ ಬಳ್ಳಾರಿಯ ಪ್ರವಾಸಿಗರು | Kannada Prabha

ಸಾರಾಂಶ

ಇರಾನ್ ಮೇಲೆ ಅಮೆರಿಕ ದಾಳಿಯಿಂದ ವಿಮಾನಗಳ ಹಾರಾಟ ರದ್ದಾಗಿದೆ. ನಿಲ್ದಾಣ ಪ್ರವೇಶಕ್ಕೆ ನಿರಾಕರಿಸಲಾಗಿದೆ.

ಬಳ್ಳಾರಿ: ದುಬೈ ವೀಕ್ಷಿಸಲು ತೆರಳಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಸೇರಿದಂತೆ 32 ಪ್ರವಾಸಿಗರು ಇರಾನ್ ಮೇಲೆ ಅಮೆರಿಕ ಸಾರಿದ ಯುದ್ಧದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಫೆ. ೨೪ರಂದು ಬಳ್ಳಾರಿ ನಗರದಿಂದ 32 ಜನರು ಪ್ರವಾಸಿ ಏಜನ್ಸಿ ಮೂಲಕ ದುಬೈಗೆ ತೆರಳಿದ್ದರು. ಅವರಲ್ಲಿ ಮೂರು ವರ್ಷದ ಮಗು, ೧೬ ಮಹಿಳೆಯರು, ೧೫ ಪುರುಷರಿದ್ದರು. ಐದು ದಿನಗಳ ಪ್ರವಾಸ ಪೂರ್ಣಗೊಳಿಸಿ, ಫೆ. ೨೮ರಂದು ವಿಮಾನದ ಮೂಲಕ ಭಾರತಕ್ಕೆ ವಾಪಸ್ ಆಗಬೇಕಿತ್ತು. ಇನ್ನು ಅರ್ಧಗಂಟೆಯಲ್ಲಿ ದುಬೈ ವಿಮಾನ ನಿಲ್ದಾಣ ತಲುಪುತ್ತೇವೆ ಎಂದುಕೊಂಡಿದ್ದರು. ಅಷ್ಟರಲ್ಲಿಯೇ ಇರಾನ್ ಮೇಲೆ ಅಮೆರಿಕ ದಾಳಿಯಿಂದ ವಿಮಾನಗಳ ಹಾರಾಟ ರದ್ದಾಗಿದೆ. ನಿಲ್ದಾಣ ಪ್ರವೇಶಕ್ಕೆ ನಿರಾಕರಿಸಲಾಗಿದೆ.

ಯುದ್ಧ ನಡೆಯುತ್ತಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪ್ರವಾಸದಲ್ಲಿದ್ದ ಮಹಿಳೆಯರು ಅಳಲು ಶುರು ಮಾಡಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರವಾಸಿಗರನ್ನು ಸಂತೈಸಿದ್ದಾರಲ್ಲದೆ, ಭಾರತೀಯರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸುರಕ್ಷಿತವಾಗಿ ನೀವು ಭಾರತಕ್ಕೆ ತಲುಪುತ್ತೀರಿ ಎಂದು ವಿಶ್ವಾಸ ಮೂಡಿಸಿದ್ದಾರೆ.

ಕೆಲವರು ತಮ್ಮ ಕುಟುಂಬ ಸದಸ್ಯರ ಜತೆ ಮಾತನಾಡಿ, ನಾವು ಬಳ್ಳಾರಿಗೆ ವಾಪಸ್ ಬರುತ್ತಿದ್ದೇವೆ ಎಂಬ ಕಾರಣಕ್ಕಾಗಿ ಎಲ್ಲ ಹಣವನ್ನು ಖರ್ಚು ಮಾಡಿಕೊಂಡಿದ್ದೇವೆ. ಇನ್ನು ಇಲ್ಲಿ ಎಷ್ಟು ದಿನ ಉಳಿಯಬೇಕೋ ಗೊತ್ತಿಲ್ಲ. ನಮ್ಮ ಬಳಿ ಹಣವೂ ಇಲ್ಲ. ಅಮೆರಿಕ ಯುದ್ಧ ಶುರು ಮಾಡಿರುವುದರಿಂದ ಹೊಟೇಲ್ ಹಾಗೂ ಲಾಡ್ಜ್‌ಗಳ ದುಬಾರಿಯಾಗಿದ್ದು, ಮುಂದೇನು ಮಾಡಬೇಕು ಎಂಬುದು ತೋಚದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಭರತರೆಡ್ಡಿ, ನಾಗೇಂದ್ರ ಮಾತು:

ಇದೇ ವೇಳೆ ತಮ್ಮನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗ್ರಾಮೀಣ ಶಾಸಕ ನಾಗೇಂದ್ರ ಅವರ ಜತೆ ಮಾತನಾಡಿದ ಬಳ್ಳಾರಿಗರು, ಊರಿಗೆ ಬರಲು ನಮಗೆ ವ್ಯವಸ್ಥೆ ಮಾಡಿ. ನಾವು ತೀರಾ ಆತಂಕದಲ್ಲಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರಯಾಣಿಕರನ್ನು ಸಮಾಧಾನಪಡಿಸಿರುವ ಶಾಸಕ ನಾಗೇಂದ್ರ ಹಾಗೂ ಭರತ್ ರೆಡ್ಡಿ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿದ್ದೇವೆ. ರಾಜ್ಯದ ಯಾವುದೇ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಸುರಕ್ಷಿತವಾಗಿ ಕರೆದುಕೊಂಡು ಬರಲಿದ್ದಾರೆ. ಹೀಗಾಗಿ ನೀವು ಯಾವುದೇ ಆತಂಕಪಡಬೇಡಿ ಎಂದು ತಿಳಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಪ್ರವಾಸಿಗರನ್ನು ಸಂಪರ್ಕಿಸಿ, ಏರ್ ಸ್ಟ್ರೈಕ್ ಆರಂಭವಾಗಿದೆ. ಎಲ್ಲ ವಿಮಾನಗಳು ನಿಲುಗಡೆಯಾಗಿವೆ. ಹೀಗಾಗಿ, ಮಾ. 2ರ ವರೆಗೆ ಯಾವುದೇ ವಿಮಾನ‌ ಹಾರಾಟವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದುಬೈ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.ಈ ಪ್ರವಾಸಿಗರನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಪೂರಕ ಕ್ರಮಗಳನ್ನು ಕೈಗೊಂಡಿದ್ದು, ಪ್ರವಾಸಕ್ಕೆ ತೆರಳಿರುವವರ ಕುಟುಂಬ ಸದಸ್ಯರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಬಳ್ಳಾರಿಯ ಎಲ್ಲರೂ ಸುರಕ್ಷಿತವಾಗಿ ಬಳ್ಳಾರಿಗೆ ಮರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ''''''''ಕನ್ನಡಪ್ರಭ''''''''ಕ್ಕೆ ತಿಳಿಸಿದರಲ್ಲದೆ, ಹೆಲ್ಪ್‌ಲೈನ್ ಸಂಖ್ಯೆ 08392–277100 ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ದುಬೈನಲ್ಲಿ ಸಿಲುಕಿದ ರೆಡ್ಡಿ:

ಫೆ. ೨೫ರಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಪತ್ನಿ, ಮೂರು ವರ್ಷದ ಪುತ್ರಿ ಸೇರಿದಂತೆ ಕುಟುಂಬದ ಐವರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಫೆ. ೨೮ರಂದು ವಾಪಸ್ ಆಗುವಷ್ಟರಲ್ಲಿ ಯುದ್ಧದ ಕಾರ್ಮೋಡದಿಂದಾಗಿ ಕುಟುಂಬದ ಜತೆ ದುಬೈನಲ್ಲಿ ಉಳಿದುಕೊಂಡಿದ್ದಾರೆ.

''''''''ಕನ್ನಡಪ್ರಭ'''''''' ಜತೆ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿಯ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗುವುದು. ಈಗಾಗಲೇ ಅವರ ಜತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಶನಿವಾರ ರಾತ್ರಿ ನಾವಿರುವ ಹೋಟೆಲ್ ಬಳಿ ಶೆಲ್ ದಾಳಿಯಾಗಿದೆ. ಆದರೆ ಆತಂಕ ಪಡಬೇಕಾಗಿಲ್ಲ. ರಾಜ್ಯದ ಎಲ್ಲ ಪ್ರವಾಸಿಗರು ಭಾರತಕ್ಕೆ ಸುರಕ್ಷಿತವಾಗಿ ಮರಳುತ್ತೇವೆ ಎಂದು ಹೇಳಿದರು.

ಪ್ರವಾಸಕ್ಕೆ ಹೋಗಿದ್ದ ಬಳ್ಳಾರಿಯ 32 ಜನರು ದುಬೈನಲ್ಲಿ ಸಿಲುಕಿಕೊಂಡಿದ್ದು, ಎಲ್ಲರೂ ಸುರಕ್ಷಿತವಾಗಿ ಬರಲಿದ್ದಾರೆ. ಶಾಸಕ ಭರತ್ ರೆಡ್ಡಿ ಸೇರಿ ಎಲ್ಲ ಪ್ರವಾಸಿಗರನ್ನು ಸಂಪರ್ಕಿಸಲಾಗಿದೆ. ಸಂಸದ ತುಕಾರಾಂ ಸಹ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಎರಡು ದಿನದಲ್ಲಿ ವಾಪಸ್ ಆಗುವ ಸಾಧ್ಯತೆಗಳಿವೆ. ದೆಹಲಿ ರಾಯಭಾರಿ ಕಚೇರಿಯಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪ್ರವಾಸಿಗರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್.

ನಾನು ಸಹ ದುಬೈನಲ್ಲಿರುವೆ. ಬಳ್ಳಾರಿಯ ಜನರ ಜತೆ ಸಂಪರ್ಕದಲ್ಲಿದ್ದೇನೆ. ನಾವು ಸುರಕ್ಷಿತವಾಗಿದ್ದೇವೆ. ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸವಿದೆ. ಕುಟುಂಬ ಸದಸ್ಯರು ಧೈರ್ಯವಾಗಿ ಇರಬೇಕು. ಮುಖ್ಯಮಂತ್ರಿ, ಕೇಂದ್ರ ಸರ್ಕಾರದೊಂದಿಗೆ ಸಹ ಮಾತನಾಡಲಾಗಿದೆ ಎನ್ನುತ್ತಾರೆ ದುಬೈನಲ್ಲಿ ಸಿಲುಕಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಶ್ಚಿಮ ಘಟ್ಟ ಅವಲಂಬಿತ ಸಮುದಾಯಗಳ ಬಲವರ್ಧನೆಗೆ ಯೋಜನೆ: ನಾಗೇಶ
ಖಾಸಗಿ ಶಾಲಾ ಮಾನ್ಯತೆ ಮಾನದಂಡ ಇನ್ನಷ್ಟು ಸರಳ!