- ಪ್ರಕರಣಗಳಿಗೆ ಕಡಿವಾಣ ಹಾಕಲು ಇಲಾಖೆಗಳು ಶ್ರಮಿಸಬೇಕು: ಮಕ್ಕಳ ಆಯೋಗ ಸದಸ್ಯೆ ಅಪರ್ಣಾ ಕೊಳ್ಳಾ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಏಪ್ರಿಲ್ನಿಂದ ಆಗಸ್ಟ್ವರೆಗೆ ಜಿಲ್ಲೆಯಲ್ಲಿ 35 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಶಾಲೆ ಬಿಟ್ಟ ಮಕ್ಕಳ ವಿವರ ಸಂಗ್ರಹಿಸಿ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ನಿಯಂತ್ರಣ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಹೇಳಿದರು.
ಶನಿವಾರ ವಿವಿಧ ಅಂಗನವಾಡಿ ಕೇಂದ್ರಗಳು, ಹಾಸ್ಟೆಲ್ಗಳಿಗೆ ಭೇಟಿ ನೀಡಿ ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.35 ಬಾಲ್ಯ ವಿವಾಹ ಪ್ರಕರಣ ವರದಿಯಾಗಿದ್ದು, ಇದರಲ್ಲಿ ಮಕ್ಕಳ ರಕ್ಷಣಾ ಘಟಕದಿಂದ 32 ವಿವಾಹಗಳನ್ನು ತಡೆಗಟ್ಟಲಾಗಿದೆ. 2 ಪ್ರಕರಣಗಳಿಗೆ ತಡೆ ತರಲಾಗಿದ್ದು, ಇನ್ನು 3 ಬಾಲ್ಯ ವಿವಾಹಗಳು ನಡೆದಿದ್ದು ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಸದಸ್ಯರು ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜೊತೆಗೆ ಇತರೆ 10 ಇಲಾಖೆಗಳ ಪಾತ್ರ ಇದೆ. ಶಿಕ್ಷಣ ಇಲಾಖೆಯಲ್ಲಿ ನಿಖರ ಮಾಹಿತಿ ಲಭ್ಯವಾಗಬೇಕು. ಶಾಲೆ ಬಿಟ್ಟ ಮಕ್ಕಳ ವಿವರವನ್ನು ವರದಿ ಮಾಡದ ಶಾಲಾ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲು ಮಾಡುವ ಎಚ್ಚರಿಕೆಯನ್ನು ನೀಡಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.ಆರ್.ಸಿ.ಎಚ್. ಪೋರ್ಟಲ್ ಅನ್ವಯ ಹದಿಹರೆಯದ ಗರ್ಭಿಣಿಯರ ವಿವರದ ಅನ್ವಯ ಜಿಲ್ಲೆಯಲ್ಲಿ 254 ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಮನೆ ಸಮೀಕ್ಷೆಯ ನಂತರ ಸಂಖ್ಯೆ 231ಕ್ಕೆ ಇಳಿಕೆಯಾಗಿದೆ. ಇದರಲ್ಲಿ 23 ತಾಯಂದಿರು 18 ವರ್ಷ ದಾಟಿದ್ದಾರೆ ಎಂದಾಗ ವಯಸ್ಸನ್ನು ತಿಳಿಯಲು ಆಧಾರ್ ಪರಿಗಣಿಸದೇ ಅವರ ಜನನ ಪ್ರಮಾಣ ಪತ್ರ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ತಪಾಸಣೆ ಮಾಡಲು ತಿಳಿಸಿ, ಇಲ್ಲಿ ಪೋಷಕರೇ ಹೇಳಿದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹದಿಹರೆಯದವರು ಗರ್ಭಿಣಿ ಆಗದಂತೆ ತಡೆಗಟ್ಟಬೇಕಾಗಿದೆ. ಇದಕ್ಕೆ ಬೇಕಾದ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.
ಮೂಲ ಸೌಕರ್ಯಕ್ಕೆ ಸೂಚನೆ:ಹಾಸ್ಟೆಲ್ನಲ್ಲಿ ಮಕ್ಕಳಿಗೆ ಬೇಕಾದ ಸೋಪ್ ಕಿಟ್, ನ್ಯಾಪ್ಕಿನ್ ಸೇರಿದಂತೆ ಗುಣಮಟ್ಟದ ಆಹಾರ ಒದಗಿಸಬೇಕು ಮತ್ತು ತರಕಾರಿ, ಗುಣಮಟ್ಟದ ಬೇಳೆಕಾಳು ಒದಗಿಸಬೇಕು. ಭೇಟಿ ನೀಡಿದ ಕೆಲವು ಹಾಸ್ಟೆಲ್ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ. ಮಕ್ಕಳ ಆರೋಗ್ಯದ ಕಾರ್ಡ್ ಸರಿಯಾಗಿ ದಾಖಲು ಮಾಡಬೇಕು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹಾಸ್ಟೆಲ್, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಎಲ್ಲ ವಿವರ ದಾಖಲು ಮಾಡಬೇಕು. ಹಾಸ್ಟೆಲ್, ಅಂಗನವಾಡಿಗಳಿಗೆ ವೈದ್ಯರು ಭೇಟಿ ನೀಡಿದ ಬಗ್ಗೆ ಸಹಿ ಮಾಡಲಾಗಿದೆ. ಆದರೆ, ತಪಾಸಣೆ ಮಾಡಿದ ವಿವರಗಳ ದಾಖಲು ಮಾಡಿಲ್ಲ. ಆರೋಗ್ಯ ಇಲಾಖೆಯಿಂದ ಎಬಿಆರ್ಕೆಯಡಿ 300 ಶಾಲೆಗಳ ಭೇಟಿ ಇದೆ, ಶಿಕ್ಷಣ ಇಲಾಖೆ ಅಂಕಿ ಅಂಶದಡಿ 2015 ಶಾಲೆಗಳಿದ್ದು ಒಂದೊಕ್ಕೊಂದು ತಾಳೆಯಾಗುತ್ತಿಲ್ಲ. ಇದಾಗದಂತೆ ಎಲ್ಲ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ತಿಳಿಸಿ ಹಾಸ್ಟೆಲ್ಗಳಲ್ಲಿನ ಮಕ್ಕಳ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕೆಂದಿದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ ಮಾತನಾಡಿ, ಕೆಲವು ಶಾಲೆಗಳಲ್ಲಿ ಮಕ್ಕಳ ವರ್ಗಾವಣೆ ಪತ್ರ (ಟಿ.ಸಿ) ಕೊಡಲು ಸತಾಯಿಸುತ್ತಿದ್ದಾರೆ ಎಂಬ ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ಆನಗೋಡು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಕ್ಕೆ ಮಕ್ಕಳು ಶಾಲೆಗೆ ಹೋಗುವ ಹಾಗೂ ಬರುವ ಸಮಯಕ್ಕೆ ಕೆಎಸ್ಆರ್ಟಿಸಿಯಿಂದ ಬಸ್ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
- - -ಬಾಕ್ಸ್ * ಪೋಕ್ಸೋ ಕಾಯ್ದೆಯಡಿ 731 ಪ್ರಕರಣ ದಾಖಲು ಪೋಕ್ಸೋ ಕಾಯ್ದೆಯಡಿ 2013 ರಿಂದ 2024 ರವರೆಗೆ 731 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 86 ರಲ್ಲಿ ಶಿಕ್ಷೆಯಾಗಿದ್ದು, 368 ಖುಲಾಸೆಯಾಗಿವೆ. 14 ಪ್ರಕರಣಗಳು ವರ್ಗಾವಣೆಗೊಂಡಿದ್ದು 11 ಸುಳ್ಳು ಪ್ರಕರಣಗಳಾಗಿವೆ. 252 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಬಾಲನ್ಯಾಯ ಮಂಡಳಿಯಲ್ಲಿ 2024ರ ಏಪ್ರಿಲ್ನಿಂದ ಜುಲೈವರೆಗೆ 60 ಬಾಕಿ ಸೇರಿ 8 ಹೊಸದಾಗಿ ಸೇರಿದಂತೆ 68 ಪ್ರಕರಣಗಳಿವೆ. ಇದರಲ್ಲಿ 15 ಇತ್ಯರ್ಥವಾಗಿದ್ದು, 1 ವರ್ಷ ಮೇಲ್ಪಟ್ಟ 7 ಗಂಭೀರ ಹಾಗೂ 9 ಘೋರ ಪ್ರಕರಣಗಳಿವೆ. ವರ್ಷದೊಳಗೆ 7 ಸಣ್ಣ ಸ್ವರೂಪ, 4 ಗಂಭೀರ, 26 ಘೋರ ಸೇರಿ ಒಟ್ಟು 53 ಪ್ರಕರಣಗಳಿವೆ. ಬಾಲನ್ಯಾಯ ಮಂಡಳಿಯಲ್ಲಿ ಇದೇ ಅವಧಿಯಲ್ಲಿ ಬಾಕಿ 10 ಹಾಗೂ 5 ಹೊಸ ಪ್ರಕರಣ ಸೇರಿ 15 ಇದ್ದು ಇತ್ಯರ್ಥವಾಗಬೇಕಾಗಿದೆ. ಈ ವೇಳೆ ಸದಸ್ಯರು ಮಾತನಾಡಿ ಪ್ರಕರಣಗಳಲ್ಲಿ ತಪ್ಪಿತಸ್ಥರು ಖುಲಾಸೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.
- - - -31ಕೆಡಿವಿಜಿ42, 43ಃ:ದಾವಣಗೆರೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ. ಕೊಳ್ಳಾ ವಿವಿಧ ಇಲಾಖೆಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.