ಕೊಪ್ಪಳ: ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಸಂವಿಧಾನ ತಿದ್ದುಪಡಿ ಮಾಡಿ ನೀಡಿರುವ 371 ಜೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಜು. 22ರಂದು ಕೊಪ್ಪಳ ನಗರದಲ್ಲಿ ಬೃಹತ್ ಹೋರಾಟ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನಿರ್ಧರಿಸಿದೆ.
ನಗರದ ಮಹಾಂತಯ್ಯನಮಠ ಕಲ್ಯಾಣಮಂಟಪದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜು. 22ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಹೋರಾಟಗಾರರು ಜಮಾವಣೆಯಾಗಿ, ಅಲ್ಲಿಂದ ಬಸವೇಶ್ವರ ವೃತ್ತದ ವರೆಗೂ ಪ್ರತಿಭಟನಾ ಮೆರವಣಿ ನಡೆಸಲು ನಿರ್ಧರಿಸಲಾಯಿತು.ಹಿರಿಯ ವಕೀಲರಾದ ಆರ್.ಬಿ. ಪಾನಘಂಟಿ, ಆಸಿಫ್ ಅಲಿ, ಪೀರಾಹುಸೇನ ಹೊಸಳ್ಳಿ, ವಿ.ಎಂ. ಭೂಸನೂರುಮಠ ಅವರು ಮಾತನಾಡಿ, ಹತ್ತು ವರ್ಷವಾದರೂ 371 ಜೆ ಉದ್ದೇಶ ಈಡೇರಿಲ್ಲ. ಈಗಲೂ ಅನ್ಯಾಯವಾಗುತ್ತಲೇ ಇದ್ದು, ಇದಕ್ಕೆ ಪಕ್ಷಾತೀತವಾಗಿ ಹೋರಾಟ ನಡೆಯಬೇಕು ಎಂದರು.
ಮುಖಂಡರಾದ ವೀರೇಶ ಮಹಾಂತಯ್ಯನಮಠ ಮಾತನಾಡಿ, ಇಷ್ಟು ವರ್ಷಗಳ ಕಾಲ ಆಗುತ್ತಿದ್ದ ಅನ್ಯಾಯ ಸರಿಯಾಗುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಈಗಲೂ ಅನ್ಯಾಯ ಮುಂದುವರಿದಿರುವುದರಿಂದ ಹೋರಾಟ ತೀವ್ರಗಳಿಸುವ ಅಗತ್ಯವಿದೆ ಎಂದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಇನ್ನು ಎಷ್ಟು ದಿನಗಳು ಅಂತಾ ಹೋರಾಟ ಮಾಡುವುದು ಎಂದು ಪ್ರಶ್ನೆ ಮಾಡಿದರು. ಒಂದಲ್ಲ, ಎರಡಲ್ಲ, ನೂರಾರು ಅನ್ಯಾಯಗಳು ಆಗುತ್ತವೆ. ಹೀಗಾಗಿ, ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಮಾಡಲು ಸಿದ್ಧರಾಗಬೇಕಾಗಿದೆ. ಸರ್ಕಾರ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಹಿಂಜರಿಯಬಾರದು ಎಂದರು.
ಪ್ರತಿಪಾದನೆ: 371 ಜೆ ಅನುಷ್ಠಾನದಲ್ಲಿ ಭಾರಿ ಅನ್ಯಾಯ ಮಾಡಲಾಗುತ್ತದೆ. ಇದನ್ನು ಸಹಿಸಿಕೊಂಡು ಇರಲು ಸಾಧ್ಯವೇ ಇಲ್ಲ. ಸಂವಿಧಾನದ ತಿದ್ದುಪಡಿ ಮೂಲಕ ನೀಡಿರುವ ವಿಶೇಷ ಸ್ಥಾನಮಾನದ ಮೀಸಲಾತಿಯನ್ನು ತಪ್ಪಾಗಿ ಅರ್ಥೈಸಿ, ಅನ್ಯಾಯ ಮಾಡಲಾಗುತ್ತದೆ. ಎಚ್ಕೆ ಮತ್ತು ನಾನ್ ಎಚ್ಕೆ ಎನ್ನುವುದೇ ತಪ್ಪು ಕಲ್ಪನೆ. ಎಚ್ಕೆ ಮತ್ತು ಕರ್ನಾಟಕ ಎಂದಷ್ಟೇ ಆಗಬೇಕು ಎನ್ನುವುದನ್ನು ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಲಾಯಿತು.ಪ್ರಹ್ಲಾದ ಅಗಳಿ, ಕಲ್ಯಾಣ ಕರ್ನಾಟಕ ಸಮಿತಿ ಯುವ ಘಟಕದ ಅಧ್ಯಕ್ಷ ರಮೇಶ ತುಪ್ಪದ, ಶರಣಪ್ಪ ಜಡಿ, ಶರಣಪ್ಪ ಬಾಚಲಾಪುರ, ಸಂತೋಷ ದೇಶಪಾಂಡೆ, ನಿರ್ಮಲಾ ಬಳ್ಳೊಳ್ಳಿ, ಶಿವಕುಮಾರ ಕುಕನೂರು, ಗಿರೀಶ ಪಾನಘಂಟಿ, ಹುಲಗಪ್ಪ ಕಟ್ಟಿಮನಿ, ಕೃಷ್ಣ ಕಬ್ಬೇರಿ, ಸೋಮನಗೌಡ, ರವೀಂದ್ರ, ಅನಿಲ ಬಾಚನಳ್ಳಿ, ಬಸವರಾಜ ತಳಕಲ್, ರಮೇಶ ಕವಲೂರು, ಬಸವರಾಜ ಕಮಲಾಪುರ, ಶರಣಪ್ಪ ಕಡ್ಡಿಪುಡಿ ಇದ್ದರು.