ಮೇಳದಿಂದ ಸ್ಥಳೀಯ ವ್ಯಾಪಾರಸ್ಥರು, ರೈತರಿಗೆ ಉತ್ಪನ್ನ ಮಾರಾಟ ಮಾಡಲು ಅನುಕೂಲ
ಪಟ್ಟಣದ ಮಾರುತಿ ನಗರದ ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಸ್ಪಂದನ ಸಂಸ್ಥೆ, ರಂಜನ್ ಇಂಡೇನ್ ಎಜೆನ್ಸಿ ಭಟ್ಕಳ ಹಾಗೂ ಬೆನಕ ಇವೆಂಟ್ಸ ಕುಂದಾಪುರ ಇವರ ಸಹಯೋಗದಲ್ಲಿ ಏರ್ಪಡಿಸಲಾದ 4 ದಿನಗಳ ಬೃಹತ್ ಹಲಸು ಮತ್ತು ಹಣ್ಣಿನ ಮೇಳಕ್ಕೆ ಹಿರಿಯ ಮುಖಂಡ ಎಂ.ಆರ್. ನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಇಂತಹ ಮೇಳಗಳಿಂದ ಸ್ಥಳೀಯ ಹಾಗೂ ದೂರದ ವ್ಯಾಪಾರಿಗಳು ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಮೇಳದಲ್ಲಿನ ಬಹುತೇಕ ಉತ್ಪನ್ನಗಳು ಸ್ವದೇಶಿಯಾಗಿದ್ದು, ಆಹಾರ ಪದಾರ್ಥಗಳ ಜೊತೆಗೆ ಆರೋಗ್ಯ ವೃದ್ಧಿ ಹಾಗೂ ರಕ್ಷಣೆಗೆ ಸಂಬಂಧಿಸಿದ ಪೂರಕ ಉಪಕರಣಗಳ ಮಳಿಗೆಗಳೂ ಇವೆ. ದಾವಣಗೆರೆ, ರಾಮನಗರದಂತಹ ದೂರದ ಪ್ರದೇಶಗಳಿಂದಲೂ ವ್ಯಾಪಾರಿಗಳು ಆಗಮಿಸಿರುವುದು ವಿಶೇಷ. ಇಂತಹ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದರು.ರಂಜನ್ ಇಂಡೇನ್ ಮಾಲಕಿ ಶಿವಾನಿ ಶಾಂತಾರಾಮ ಮಾತನಾಡಿ, ಕಳೆದ ಬಾರಿ ಮೂರು ದಿನಗಳ ಕಾಲ ಮೇಳ ಆಯೋಜಿಸಲಾಗಿದ್ದು ಗ್ರಾಹಕರಿಗೆ ಸ್ವಲ್ಪ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆ ಈ ಬಾರಿ ನಾಲ್ಕು ದಿನಗಳ ಕಾಲ ಮೇಳ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಖಾದಿ ಉತ್ಪನ್ನಗಳು, ಚೆನ್ನಪಟ್ಟಣ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ವಿವಿಧ ತಳಿಯ ಹಲಸುಗಳು, ಆಯುರ್ವೇದ ಗಿಡಮೂಲಿಕೆಗಳು, ತಂಪು ಪಾನೀಯಗಳು, ಕೃಷಿ ಹೂವಿನ ಹಾಗೂ ಹಣ್ಣಿನ ಗಿಡಗಳು, ವಿದ್ವಾಂಸರ ಭಾವಚಿತ್ರಗಳು ಹಾಗೂ ಹಲಸಿನ ವಿವಿಧ ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ಮೊದಲ ದಿನವೇ ಜನರು ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮಗಿಷ್ಟವಾದ ವಸ್ತು ಖರೀದಿಸಿದರು.