ಜಿಲ್ಲೆಯಲ್ಲಿ 47 ಸಾವಿರ ರೈತರಿಗಿಲ್ಲ ಎಫ್‌ಐಡಿ ಸಂಖ್ಯೆ

KannadaprabhaNewsNetwork |  
Published : May 04, 2026, 01:15 AM IST
3ಕೆಆರ್ ಎಂಎನ್ 1.ಜೆಪಿಜಿಸಾದಂರ್ಭಿಕ ಚಿತ | Kannada Prabha

ಸಾರಾಂಶ

ರಾಮನಗರ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೃಷಿ ಇಲಾಖೆ ಫೂಟ್ಸ್(ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಅಥವಾ ಎಫ್‌ಐಡಿ(ಫಾರ್ಮರ್ ಐಡೆಂಟಿಫಿಕೇಷನ್ ನಂಬರ್) ಮೂಲಕ ರೈತರ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ರಸಗೊಬ್ಬರ ವಿತರಣೆಗೆ ಮುಂದಾಗಿದೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 47,537 ರೈತರಿಗೆ ಎಫ್‌ಐಡಿ ಸಂಖ್ಯೆಯೇ ಇಲ್ಲ

ರಾಮನಗರ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೃಷಿ ಇಲಾಖೆ ಫೂಟ್ಸ್(ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಅಥವಾ ಎಫ್‌ಐಡಿ(ಫಾರ್ಮರ್ ಐಡೆಂಟಿಫಿಕೇಷನ್ ನಂಬರ್) ಮೂಲಕ ರೈತರ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ರಸಗೊಬ್ಬರ ವಿತರಣೆಗೆ ಮುಂದಾಗಿದೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 47,537 ರೈತರಿಗೆ ಎಫ್‌ಐಡಿ ಸಂಖ್ಯೆಯೇ ಇಲ್ಲ.

ರೈತರಿಗೆ ಅಗತ್ಯವಾಗಿರುವ ರಸಗೊಬ್ಬರಗಳು ಕಡಿಮೆ ಬೆಲೆಗೆ ರೈತರಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡುತ್ತಿದೆ. ಆದರೆ, ಸಹಾಯಧನದ ರಸಗೊಬ್ಬರಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಲು ರೈತರ ಹೆಸರಿನಲ್ಲಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಎಫ್ ಐಡಿ ಸಂಖ್ಯೆಯನ್ನು ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಎಫ್‌ಐಡಿಯಲ್ಲಿ ರೈತರ ಸಂಪೂರ್ಣ ಮಾಹಿತಿ:

ಜಮೀನು ಹೊಂದಿರುವ ರೈತರಿಗೆ ಕೃಷಿ ಸೇರಿದಂತೆ ಇದಕ್ಕೆ ಪೂರಕವಾದ ಇಲಾಖೆಯಿಂದ ಎಫ್‌ಐಡಿ ಕೊಡಲಾಗಿದೆ. ಇದಕ್ಕೆ ಆರ್‌ಟಿಸಿ, ಆಧಾ‌ರ್, ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಮೊಬೈಲ್ ನಂಬ‌ರ್ ಲಿಂಕ್ ಆಗಿರಲಿದೆ. ಎಫ್‌ಐಡಿಯಲ್ಲಿ ರೈತರ ಜಮೀನಿನ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಅದರಂತೆ ಇದರ ಆಧಾರದಲ್ಲಿ ಅಂದರೆ ರೈತರಿಗೆ ಎಷ್ಟು ಪ್ರಮಾಣದ ಜಮೀನಿದೆ. ಯಾವ ಬೆಳೆ ಹಾಕುತ್ತಾರೆ ಎನ್ನುವ ಮಾಹಿತಿ ಮೇರೆಗೆ ರಸ ಗೊಬ್ಬರ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಮೊದಲೆಲ್ಲ ರೈತರು ಎಷ್ಟು ಬೇಕಾದರೂ ಖರೀದಿಸುತ್ತಿದ್ದರು. ಆದರೀಗ ಅಗತ್ಯಕ್ಕಿಂತ ಹೆಚ್ಚು ಖರೀದಿಸುವಂತಿಲ್ಲ.

ಎರಡು ಲಕ್ಷ ರೈತರು:

ಕೃಷಿ ಇಲಾಖೆ ಮಾಹಿತಿ ಪ್ರಕಾರ 2011ರ ಗಣತಿಯಂತೆ ಜಿಲ್ಲಾದ್ಯಂತ 2,00,460 ಮಂದಿ ರೈತರಿದ್ದಾರೆ. ಇದರಲ್ಲಿ 1,52,923 ಮಂದಿ ಮಾತ್ರ ಎಫ್‌ಐಡಿ ಸಂಖ್ಯೆ ಹೊಂದಿದ್ದಾರೆ. ಉಳಿದ 47,537 ಮಂದಿ ರೈತರು ಎಫ್‌ಐಡಿ ನೋಂದಣಿಯಾಗಿಲ್ಲ. ಇದರಿಂದ ನೋಂದಣಿಯಾಗದ ರೈತರಿಗೆ ರಸಗೊಬ್ಬರ ಸಿಗುವುದಿಲ್ಲ. ಆದ್ದರಿಂದ ರೈತರು ಆದಷ್ಟು ಶೀಘ್ರ ಅಗತ್ಯ ದಾಖಲಾತಿಗಳ ನೀಡಿ ಎಫ್‌ಐಡಿ ನೋಂದಾಯಿಸಿ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ.

ರಸಗೊಬ್ಬರ ಬೇಡಿಕೆ ವಿವರ:

ಪ್ರತಿ ವರ್ಷ ಜಿಲ್ಲೆಯಲ್ಲಿ 95,600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಇರಿಸಿಕೊಳ್ಳುತ್ತದೆ. 2026ರ ಮುಂಗಾರಿಗೆ 28,287 ಮೆಟ್ರಿಕ್ ಟನ್ ಗಳಷ್ಟು ರಸಗೊಬ್ಬರ ಅಗತ್ಯವಿದ್ದು, ಇದರಲ್ಲಿ ಏಪ್ರಿಲ್ ತಿಂಗಳಲ್ಲಿ 6302 ಮೆಟ್ರಿಕ್ ಟನ್ ನಷ್ಟು ರಸಗೊಬ್ಬರ ಸರಬರಾಜಾಗಿದೆ.

ಡಿಎಪಿ 1704 ಮೆಟ್ರಿಕ್ ಟನ್ ಪೈಕಿ 584, ಕಾಂಪ್ಲೆಕ್ಸ್ 5797 ಮೆಟ್ರಿಕ್ ಟನ್ ಪೈಕಿ 2046, ಎಂಒಪಿ 448 ಮೆಟ್ರಿಕ್ ಟನ್ ಪೈಕಿ 192, ಯೂರಿಯಾ 19,562 ಮೆಟ್ರಿಕ್ ಟನ್ ಪೈಕಿ 3204, ಎಸ್ ಎಸ್ ಪಿ 776 ಮೆಟ್ರಿಕ್ ಟನ್ ಪೈಕಿ 277 ಮೆಟ್ರಿಕ್ ಟನ್ ಪೂರೈಕೆಯಾಗಿದೆ.

ಬಾಕ್ಸ್ .............

ಎಲ್ಲೆಲ್ಲಿ ಎಫ್‌ಐಡಿ ಸಂಖ್ಯೆ ನೋಂದಣಿ:

ಇನ್ನು ರೈತರು ಎಫ್‌ಐಡಿ ಹೊಂದಿರದೇ ಇದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ/ ತೋಟಗಾರಿಕೆ ಇಲಾಖೆ / ಕಂದಾಯ ಇಲಾಖೆ / ರೇಷ್ಮೆ ಇಲಾಖೆ, ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಂಘಗಳಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು. ಎಫ್‌ಐಡಿ ಸಂಖ್ಯೆಯನ್ನು ಹೊಂದಲು ಅವಶ್ಯಕ ದಾಖಲಾತಿಗಳಾದ ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಚಾಲ್ತಿಯಿರುವ ಆರ್‌ಟಿಸಿ, ರೈತರ ಎಲ್ಲ ಜಮೀನಿನ ಪಹಣೆಯನ್ನು ಸಹ ಎಫ್‌ ಐಡಿಗೆ ಕಡ್ಡಾಯವಾಗಿ ಸೇರ್ಪಡೆಗೊಳಿಸಬೇಕಾಗಿದೆ.

ಬಾಕ್ಸ್ ..............

ಎಫ್‌ಐಡಿ ಪರಿಶೀಲಿಸಿ ವಿತರಿಸಲು ಮಾರಾಟಗಾರರಿಗೂ ಸೂಚನೆ:

ರಸಗೊಬ್ಬರ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರಿಗೂ ಕೆಲ ನಿಬಂಧನೆ ವಿಧಿಸಲಾಗಿದೆ. ಅದರಂತೆ ರೈತರ ಎಫ್‌ಐಡಿ ಪರಿಶೀಲಿಸಿ ನಿಗದಿತ ಪ್ರಮಾಣದಲ್ಲಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಬೇಕು. ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ರಸಗೊಬ್ಬರ ದರಪಟ್ಟಿ ಪ್ರದರ್ಶಿಸಬೇಕು. ಗರಿಷ್ಠ ಮಾರಾಟ ದರ ಮೀರದಂತೆ ರಸಗೊಬ್ಬರ ನಿಯಂತ್ರಣ ಆದೇಶ 1985ರ ವಿವಿಧ ಮಾನದಂಡಗಳನ್ವಯ ವಿತರಿಸುವಂತೆ ಸೂಚಿಸಲಾಗಿದೆ.

ಕೋಟ್ ...............

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಎಫ್‌ಐಡಿ ಸಂಖ್ಯೆಯ ಆಧಾರದ ಮೇಲೆ ವಿತರಣೆಗೆ ಕ್ರಮ ವಹಿಸಲಾಗಿದೆ. ಅದರಂತೆ ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯ. ಜಿಲ್ಲೆಯಲ್ಲಿ ಎಫ್‌ಐಡಿ ಇಲ್ಲದ ರೈತರು ಕೂಡಲೇ ಅಗತ್ಯ ದಾಖಲಾತಿಗಳನ್ನು ನೀಡಿ ಎಫ್‌ಐಡಿ ಸಂಖ್ಯೆ ಪಡೆಯಬೇಕು.

- ಅಂಬಿಕಾ, ಜಂಟಿ ಕೃಷಿ ನಿರ್ದೇಶಕ, ಬೆಂ.ದಕ್ಷಿಣ ಜಿಲ್ಲೆ

ಬಾಕ್ಸ್‌............

ಹಿಡುವಳಿದಾರರು ಮತ್ತು ಎಫ್‌ಐಡಿ ಹೊಂದಿರುವ ರೈತರ ವಿವರ

ತಾಲೂಕು2011ರ ಹಿಡುವಳಿದಾರರುಎಫ್‌ಐಡಿ ರೈತರುಎಫ್‌ಐಡಿ ಇಲ್ಲದ ರೈತರು

ಚನ್ನಪಟ್ಟಣ39,73836,7373,001

ಕನಕಪುರ53,75536,53817,217

ಹಾರೋಹಳ್ಳಿ27,87015,94711,923

ಮಾಗಡಿ41,58435,1276,457

ರಾಮನಗರ37,51328,5748,939

ಒಟ್ಟು2,00,4601,52,92347,537

3ಕೆಆರ್ ಎಂಎನ್ 1.ಜೆಪಿಜಿ

ಸಾದಂರ್ಭಿಕ ಚಿತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಿ: ಶಿವಸಿದ್ದೇಶ್ವರ ಶ್ರೀ
ಕಾಗದರಹಿತ ನೋಂದಣಿ ವ್ಯವಸ್ಥೆ ತಕ್ಷಣ ಸ್ಥಗಿತಗೊಳಿಸಿ