ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟುಗಳಿಗೆ ಸಮಾಜವಾದಿ ಕ್ರಾಂತಿಯೊಂದೇ ಪರಿಹಾರ

KannadaprabhaNewsNetwork |  
Published : Oct 28, 2024, 12:58 AM IST
11 | Kannada Prabha

ಸಾರಾಂಶ

ಯಾವುದೇ ಚಳವಳಿಗಳಿರಲೀ, ಅದರಲ್ಲಿ ಉಬ್ಬು ತಗ್ಗುಗಳು ಇದ್ದೇ ಇರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟುಗಳಿಗೆ ಸಮಾಜವಾದಿ ಕ್ರಾಂತಿಯೊಂದೇ ಪರಿಹಾರ. ಇದಕ್ಕಾಗಿ ಕಾರ್ಮಿಕರು ಸಜ್ಜಾಗಬೇಕು ಎಂದು ಎಐಯುಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಕೆ. ರಾಧಾಕೃಷ್ಣ ಕರೆ ನೀಡಿದರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಎಐಯುಟಿಯುಸಿಯ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತಲೇ ಇವೆ. ಶ್ರಮಿಕರ ಹಿತವನ್ನು ಕಾಯಲು ವಿಫಲವಾಗಿರುವ ಸರ್ಕಾರಗಳು ಬಂಡವಾಳಶಾಹಿಗಳಿಗೆ ಆಗಾಧ ಪ್ರಮಾಣದಲ್ಲಿ ರಿಯಾಯಿತಿ ನೀಡುತ್ತಿವೆ. ಅಷ್ಟೇ ಅಲ್ಲದೆ ಬಂಡವಾಳಶಾಹಿ ವ್ಯವಸ್ಥೆ ಲಾಭಕ್ಕಾಗಿ ಯುದ್ಧಗಳನ್ನು ಪ್ರಚೋದಿಸುತ್ತದೆ. ಚುನಾವಣೆಗಳಲ್ಲಿ ಪಕ್ಷಗಳನ್ನು ಬದಲಾಯಿಸಿ, ಮತ್ತೊಂದು ಪಕ್ಷವನ್ನು ಚುನಾಯಿಸುವುದರಿಂದ, ಇಂತಹ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕ ವರ್ಗದ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿಯೊಂದೇ ಇದಕ್ಕೆ ಪರಿಹಾರ ಎಂದು ತಿಳಿಸಿದರು.

ಯಾವುದೇ ಚಳವಳಿಗಳಿರಲೀ, ಅದರಲ್ಲಿ ಉಬ್ಬು ತಗ್ಗುಗಳು ಇದ್ದೇ ಇರುತ್ತದೆ. ಚಳವಳಿಗಳಿಗೆ ತಾತ್ಕಾಲಿವಾಗಿ ಹಿನ್ನಡೆ ಆಗಬಹುದು ಆದರೆ ಅದು ತಾತ್ಕಾಲಿಕ. ಅಂತಿಮವಾಗಿ ಚಳವಳಿಗಳಿಗೆ ಅಂದರೆ ಕ್ರಾಂತಿಕಾರಿ ವಿಚಾರಗಳಿಗೆ ಜಯವಿದ್ದೇ ಇರುತ್ತದೆ. ಮೊಟ್ಟ ಮೊದಲು ಕಾರ್ಮಿಕವನ್ನು ಮುನ್ನಡೆಸುವ ನಾಯಕರು ಸರಿ ಇರಬೇಕು. ವ್ಯಕ್ತಿತ್ವ ಪಾರದರ್ಶಕವಾಗಿರಬೇಕು. ಎಲ್ಲವನ್ನೂ ಬಿಟ್ಟು ಬರಬೇಕು. ನಂತರ ಕಾರ್ಮಿಕರಿಗೆ ಬೋಧನೆ ಮಾಡಬೇಕು ಎಂದು ಅವರು ಹೇಳಿದರು.

ರೈತರಾಗಲೀ, ಕಾರ್ಮಿಕರಾಗಲೀ ನೈತಿಕೆಯನ್ನು ಕಳೆದುಕೊಂಡರೆ ಚಳವಳಿಯನ್ನು ಮುನ್ನಡೆಸಲಾಗುವುದಿಲ್ಲ. ನಾನು, ನನ್ನದು ಎಂಬ ಸಂಕುಚಿತ ಮನೋಭಾವವನ್ನು ಕಾರ್ಮಿಕ ಮುಖಂಡರು ತೊರೆಯಬೇಕು. ಹಾಗಾದಾಗ ಮಾತ್ರವೇ ಕಾರ್ಮಿಕ ಚಳವಳಿಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಮಿಕರು ಚಿಂತಿಸಬೇಕು ಎಂದು ಅವರು ಕರೆ ನೀಡಿದರು.

ಎಐಯುಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರ್‌ ದಾಸ್‌ಗುಪ್ತ ಮಾತನಾಡಿ, ಕಾರ್ಮಿಕರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ, ಶೋಷಕರ ಶೋಷಣೆ ದಬ್ಬಾಳಿಕೆ ಜಾಸ್ತಿಯಾಗುತ್ತಿರುವಂತೆಯೇ ಜನ ಜೀವನದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಈ ಬಂಡವಾಳಶಾಹಿ ‌ವ್ಯವಸ್ಥೆ ಕಾರಣ. ನಾವು ನಮ್ಮ ಹೋರಾಟಗಳನ್ನು ಆರ್ಥಿಕ ಬೇಡಿಕೆಗಳಿಗೆ ಮಾತ್ರ ಸಿಮೀತಗೊಳಿಸದೇ‌ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಗುರಿಯನ್ನಿಟ್ಟುಕೊಂಡು ಹೋರಾಟವನ್ನು ಕಟ್ಟಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ನಡೆದ ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ಉದ್ಘಾಟಿಸಿದ ಎಸ್‌.ಯು.ಸಿ.ಐ ಕಮ್ಯೂನಿಸ್ಟ್‌ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ಕಾರ್ಮಿಕರ ಕಠಿಣ ಪರಿಶ್ರಮದ ಫಲವಾಗಿ ಕಾರ್ಖಾನೆಯ ಮಾಲೀಕರ ಸಂಪತ್ತು ಹೆಚ್ಚಳವಾಗುತ್ತಿದೆ. ಆದರೆ, ನ್ಯಾಯಯುತವಾಗಿ ಕಾರ್ಮಿಕರಿಗೆ ಕೊಡಬೇಕಾದ ಪಾಲನ್ನು ವಂಚಿಸಲಾಗುತ್ತಿದೆ. ಎಐಯುಟಿಯುಸಿಯ ನೇತೃತ್ವದಲ್ಲಿ ಸರಿಯಾದ ವೈಚಾರಿಕ ತಿಳವಳಿಕೆಯನ್ನು ಪಡೆದುಕೊಂಡು, ತಮ್ಮ ಹಕ್ಕಿನ ಪಾಲನ್ನು ಪಡೆಯಲು ಬಲಿಷ್ಟವಾದ ಹೋರಾಟವನ್ನು ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.

----

ಬಾಕ್ಸ್...

ಎಐಯುಟಿಯುಸಿಯ ನೂತನ ರಾಜ್ಯ ಸಮಿತಿ ಆಯ್ಕೆ

ನೂತನ ಅಧ್ಯಕ್ಷರಾಗಿ ಕೆ. ಸೋಮಶೇಖರ್‌ಬಳ್ಳಾರಿ, ಉಪಾಧ್ಯಕ್ಷರಾಗಿ ಕೆ.ವಿ. ಭಟ್‌, ದೇವದಾಸ್‌,ಡಿ. ನಾಗಲಕ್ಷ್ಮಿ, ಎಂ. ಉಮಾದೇವಿ, ಎನ್.ಎಸ್. ‌ವಿರೇಶ್‌, ಚಂದ್ರಶೇಖರ ಮೇಟಿ, ಟಿ.ಸಿ. ರಮಾ, ಪಿ.ಎಸ್. ಷಣ್ಮುಗಂ, ತಾಯಿದಾಸ್, ಎಚ್.ಟಿ. ಮಲ್ಲಿಕಾರ್ಜುನ್‌, ಮಂಜುನಾಥ್‌ಕೈದಾಳೆ, ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್‌ಯಾದಗಿರಿ, ಸೆಕ್ರಟರಿಯೇಟ್‌ಸದಸ್ಯರಾಗಿ ಡಿ. ಉಮಾದೇವಿ, ವಿ.ಜಿ. ದೇಸಾಯಿ,ಎಸ್.ಎಂ. ಶರ್ಮಾ, ಜಿ. ಹನುಮೇಶ್, ಗಂಗಾಧರ್‌ಬಡಿಗೇರ್, ಡಾ. ಪ್ರಮೋದ್‌, ಪಿ.ಎಸ್. ಸಂಧ್ಯಾ, ಮಂಜುನಾಥ್‌ಕುಕ್ಕವಾಡ, ಮಹೇಶ್‌ನಾಡಗೌಡ ಮತ್ತು 33 ಕಾರ್ಯಕಾರಿ ಸದಸ್ಯರು ಹಾಗೂ ಕೌನ್ಸಿಲ್‌ಸದಸ್ಯರನ್ನು ಒಳಗೊಂಡ 171 ಮಂದಿಯ ಸಮಿತಿಯನ್ನು ಚುನಾಯಿಸಲಾಯಿತು.ಸಮ್ಮೇಳನದ ತೀರ್ಮಾನ

ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಹಾಲಿ ಇರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸ್ಕೀಂ ನೌಕರರನ್ನು ಸರ್ಕಾರಿ ನೌಕರರನ್ನು ಪರಿಗಣಿಸಬೇಕು. ದುಡಿಯುವ ಅವಧಿಯನ್ನು ಹೆಚ್ಚಳ ಮಾಡುವ ಸರ್ಕಾರದ ಪ್ರಸ್ತಾಪ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲು ಅನುಮೋದಿಸಿರುವ ನಿರ್ಧಾರವನ್ನು ಖಂಡಿಸಿದರು.

ಇಎಸ್ಐ ಆರ್ಹತೆಗೆ ಇರುವ ವೇತನದ ಮಿತಿಯನ್ನು ಹೆಚ್ಚಿಸಬೇಕು. ಪಿಎಫ್‌ಆರ್ಹತೆಗೆ ಇರುವ ವೇತನದ ಮಿತಿಯನ್ನು ಹೆಚ್ಚಿಸಬೇಕು. ಹಾಗೂ ಕನಿಷ್ಠ ಪಿಂಚಣಿಯನ್ನು 10000 ನಿಗದಿಗೊಳಿಸಬೇಕು. ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಲು ಮತ್ತು ಸೇವಾ ಭದ್ರತೆಯನ್ನು ಒದಗಿಸಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ