ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ನಿರಂತರ ಪರಿಶ್ರಮದಿಂದ ಕನಸು ಸಕಾರಗೊಳಿಸಿಕೊಳ್ಳಿ

KannadaprabhaNewsNetwork | Published : Jun 11, 2025 11:22 AM

ಬಡತನ, ಕೂಲಿಯ ಕಷ್ಟ ಮತ್ತು ಹಸಿವಿನ ಒತ್ತಡ ಇದ್ದವರಿಗೆ ಮಾತ್ರ ಸಾಧನೆ ಮಾಡಲು ಸಾಧ್ಯ. ಮನಸ್ಸು ಮಾಡಿದರೆ ಯಾರು ಏನು ಬೇಕಾದರೂ ಮತ್ತು ಯಾವ ಎತ್ತರಕ್ಕೆ ಬೇಕಾದರೂ ಏರಬಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಮನುಷ್ಯ ಕನಸು ಕಾಣಬೇಕು. ಹೇಗೆಂದರೆ ಗಾಢನಿದ್ರೆಯನ್ನು ಬಡಿದೆಬ್ಬಿಸುವ ಕನಸು ಅದಾಗಿರಬೇಕು. ಶ್ರದ್ಧೆ ಮತ್ತು ನಿರಂತರ ಪರಿಶ್ರಮದ ಮೂಲಕ ಆ ಕನಸನ್ನು ಸಕಾರಗೊಳಿಸಿಕೊಳ್ಳಬೇಕು ಎಂದು ಕರ್ನಾಟಕ ಗೃಹ ಮಂಡಳಿಯ ಆಯುಕ್ತ ಕೆ.ಎ. ದಯಾನಂದ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 50 ದಿನಗಳ ಐಎಎಸ್ ‌ಮತ್ತು ಕೆಎಎಸ್ ‌ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ಬಡತನ, ಕೂಲಿಯ ಕಷ್ಟ ಮತ್ತು ಹಸಿವಿನ ಒತ್ತಡ ಇದ್ದವರಿಗೆ ಮಾತ್ರ ಸಾಧನೆ ಮಾಡಲು ಸಾಧ್ಯ. ಮನಸ್ಸು ಮಾಡಿದರೆ ಯಾರು ಏನು ಬೇಕಾದರೂ ಮತ್ತು ಯಾವ ಎತ್ತರಕ್ಕೆ ಬೇಕಾದರೂ ಏರಬಲ್ಲ. ಗ್ರಾಮೀಣ ಬಡ ವಿದ್ಯಾರ್ಥಿಗಳಲ್ಲಿ ಅದ್ಭುತಗಳನ್ನು ಸಾಧಿಸುವ ಶಕ್ತಿ ಇರುತ್ತದೆ. ಕನ್ನಡ ಮಾಧ್ಯಮ, ಬಡತನ ಎಂದು ಅಂಜದಿರಿ ಮತ್ತು ಅಳುಕದಿರಿ ಎಂದು ಕಿವಿಮಾತು ಹೇಳಿದರು.ಗುರುವಿಗಾಗಿ ಹುಡಕಬೇಡಿ ಮತ್ತು ಅಲೆಯಬೇಡಿ. ಅಲ್ಲಮಪ್ರಭು ಹೇಳಿದ ಹಾಗೆ ತನ್ನನ್ನು ತಾನು ಅರಿತವನಿಗೆ ಗುರುವಿನ ಹಂಗು ಮತ್ತು ಅಗತ್ಯವಿಲ್ಲ. ಮನಸ್ಸು ನಮ್ಮನ್ನು ಆಳಬಾರದು ಬದಲಾಗಿ ಮನಸ್ಸನ್ನು ನಾವು ಆಳಬೇಕು. ಮನಸ್ಸಿಗೆ ಗುಲಾಮಗಿರಿ ಮಾಡಿದರೆ ನಾವು ಆಜೀವಪರ್ಯಂತ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದರು.ಇತ್ತೀಚೆಗೆ ಆದರ್ಶ ವ್ಯಕ್ತಿಗಳನ್ನು ಭೇಟಿಯಾಗಿ, ಸೆಲ್ಫಿ ಪಡೆದು ಸ್ಟೇಟಸ್‌ ಹಾಕಿಕೊಳ್ಳುವುದಕ್ಕೆ ನಮ್ಮ ಕನಸನ್ನು ಸೀಮಿತಗೊಳಿಸಿದ್ದೇವೆ. ಈ ಮನೋಭಾವನೆ ಬದಲಾಗಬೇಕು. ಆದರ್ಶ ವ್ಯಕ್ತಿಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ನಾವೂ ಇತರರಿಗೆ ಸೆಲ್ಫಿ ಕೊಡುವ ಮಟ್ಟಕ್ಕೆ ಬೆಲೆಯಬೇಕು. ಋಣಾತ್ಮಕ ವಿಚಾರಗಳನ್ನಷ್ಟೇ ಯೋಚಿಸಿ ಸಾಧಕನಾಗುವ ಅವಕಾಶದಿಂದ ವಂಚಿತರಾಗಬಾರದು ಎಂದು ಕಿವಿಮಾತು ಹೇಳಿದರು.ಇಂದಿನ ಮಕ್ಕಳು ನಮಗಿಂತ ಹೆಚ್ಚು ಬುದ್ಧಿವಂತರಿದ್ದಾರೆ. ಆದರೆ ಅವರಿಗೆ ಉನ್ನತ ಸ್ಥಾನ ಪಡೆಯಲು ಆಗುತ್ತಿಲ್ಲ. ನಮ್ಮಲ್ಲಿದ್ಧ ಶ್ರದ್ಧೆ, ಪ್ರಯತ್ನವನ್ನು ಇಂದಿನ ವಿದ್ಯಾರ್ಥಿ ಮಾಡದೇ ಇರುವುದರಿಂದ ಅವರಿಗೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಕೆಲಸಕ್ಕೂ ನೆಪ ಹೇಳುವುದು ಹಾಗೂ ಅನಗತ್ಯ ಮೊಬೈಲ್‌ ಬಳಕೆ ನಮ್ಮನ್ನು ನಿಗದಿತ ಗುರಿಯಿಂದ ದೂರವಿಡುತ್ತಿದೆ. ಮೊಬೈಲ್‌ ಅನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಶಾಪವಾಗಿ ಪರಿಣಮಿಸುವುದು ಎಂದು ಎಚ್ಚರಿಸಿದರು.ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ‌ಐಶ್ವರ್ಯ ಮಾತನಾಡಿ, ಶಿಬಿರಾರ್ಥಿಗಳೊಂದಿಗೆ ಐಎಎಸ್ ‌ಮತ್ತು ಕೆಎಎಸ್ ‌ಪರೀಕ್ಷೆಯ ಕುರಿತಂತೆ ಆಸಕ್ತಿದಾಯಕ ಪ್ರಶ್ನೋತ್ತರದ ಸಂವಾದ ನಡೆಸಿ, ಪರೀಕ್ಷಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್. ‌ಆನಂದಕುಮಾರ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು. ----ಕೋಟ್...ನಮ್ಮ ರಾಜ್ಯ ಮುಕ್ತ ವಿವಿಯಿಂದ ಗ್ರಾಮೀಣ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ನಗರದ ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಪದವಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು.- ಪ್ರೊ. ಶರಣಪ್ಪ ವಿ. ಹಲಸೆ, ಕುಲಪತಿ, ರಾಜ್ಯ ಮುಕ್ತ ವಿವಿ----ಕೋಟ್‌

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿರಂತರವಾದ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ. ತಪಸ್ಸಿನಂತೆ ಗುರಿ ತಲುಪುವವರೆಗೂ ಮುಂದುವರಿಯಬೇಕು. ಮನೆಯ ಸಮಸ್ಯೆಗಳ ನೆಪ ಹೇಳಿ ಭವಿಷ್ಯದಲ್ಲಿ ದೊರಕುವ ಉತ್ತಮ ಅವಕಾಶದಿಂದ ವಂಚಿತರಾಗಬಾರದು.- ಕೆ.ಎ. ದಯಾನಂದ, ಆಯುಕ್ತ, ಕರ್ನಾಟಕ ಗೃಹ ಮಂಡಳಿ