
ಕನ್ನಡಪ್ರಭ ವಾರ್ತೆ ತುಮಕೂರು
ಎಸ್ಐಟಿ ಆವರಣದಲ್ಲಿರುವ ಶಿವಪ್ಪನವರ ಸಮಾಧಿಗೆ ಪೂಜೆ ಸಲ್ಲಿಸಿ, ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳು, ದೇಶದಲ್ಲೇ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು ಆಗಿರುವ ಎಸ್ಐಟಿ ಕಾಲೇಜಿನ ಸ್ಥಳದಾನಿ ಎಂ.ಎ. ಶಿವಪ್ಪ ಅವರ ಆರಂಭಿಕ ಕೊಡುಗೆ ಶ್ಲಾಘನೀಯ. ಶಿವಪ್ಪ ಅವರು ಅಗಲಿ 50 ವರ್ಷವಾದರೂ ಅವರ ಸೇವಾ ಕಾರ್ಯ ಜೀವಂತವಾಗಿದೆ. ಅಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಗಳಿದ್ದರೂ ಸಹ ಅವರ ಅಚಲವಾದ ಭಕ್ತಿಯಿಂದಲೇ ಎಲ್ಲವನ್ನು ಸಾಧ್ಯವಾಗಿಸಿಕೊಂಡಿದ್ದರು ಎಂದರು.
ಶಂಕರ್ ಸಾಮೀಲ್ನ ಸ್ಥಾಪಕ ಎಂ.ಎ. ಶಿವಪ್ಪನವರ ಸಮಾಧಿ ಹಾಗೂ ಪುತ್ಥಳಿ ಎಸ್ಐಟಿಯ ಆವರಣದಲ್ಲಿ ಅವರ ಸೇವಾಕಾರ್ಯದ ಪ್ರತಿರೂಪವಾಗಿ ಶಾಶ್ವತವಾಗಿದೆ. ಇಂದಿಗೂ ಸಹ ಶಿವಪ್ಪ ಅವರ ದಾನದ ಪರಂಪರೆಯನ್ನು ಅವರ ಕುಟುಂಬಸ್ಥರು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.ಹುಟ್ಟು ಸಾವು ಪ್ರಕೃತಿಯಲ್ಲಿ ಸಹಜ. ಬದುಕಿರುವ ಅವಧಿಯಲ್ಲಿ ಮಾಡುವ ಒಳೆಯ ಕೆಲಸ ಶಾಶ್ವತ. ಶಿವಪ್ಪ ಅವರು ಈ ಶಾಶ್ವತ ಕಾರ್ಯ ಮಾಡುವ ವರ್ಗಕ್ಕೆ ಸೇರಿದವರು. ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗ್ರಾಮಾಂತರ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ದೊರೆಯುವ ಆಶಯಕ್ಕೆ ನೆರವಾದರು ಎಂದರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಾತನಾಡಿ, ನಾನು ಇದೇ ಎಸ್ಐಟಿ ಕಾಲೇಜಿನ ವಿದ್ಯಾರ್ಥಿ. ನನ್ನಂತಹ ಲಕ್ಷಾಂತರ ಮಂದಿಯನ್ನು ಈ ಕಾಲೇಜು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿ ಕೊಳ್ಳಲು ಅನುವು ಮಾಡಿಕೊಟ್ಟಿದೆ. ಅದರ ಹಿಂದಿನ ಶಕ್ತಿಗಳಾದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಎಂ.ವಿ.ಶಿವಪ್ಪ ಅವರು ಪ್ರಾತಃ ಸ್ಮರಣೀಯರಾಗಿದ್ದು ಎಂದರು.1900 ರಿಂದ 1976ರವರೆಗೆ ಸಾರ್ಥಕ ಜೀವನ ನಡೆಸಿದ ಶಿವಪ್ಪ ಅವರು ಮರದ ಉದ್ಯಮದ ಮೂಲಕ ಬಂದ ಆದಾಯವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು. ಸಿದ್ದರಾಮಣ್ಣ ಚಾರಿಟಬಲ್ ಟ್ರಸ್ಟ್ ಸಿದ್ದರಾಮಣ್ಣ, ಡಿ.ಕೆ. ಪಾರ್ಶ್ವನಾಥ, ಬಿ.ಸಿ. ನಂಜುಂಡಯ್ಯ, ದಿ. ಕೆಂಪಹೊನ್ನಯ್ಯ ಅವರಂತಹ ಮೇರು ವ್ಯಕ್ತಿತ್ವದ ಸಾಮಾಜಿಕ ಕಳಕಳಿಯರ ಸಹಪಾಠಿಗಳಾಗಿದ್ದರು ಎಂದು ಸ್ಮರಿಸಿದರು.
ಇದೇ ವೇಳೆ ಸುವರ್ಣ ಸ್ಮರಣೆ ಪ್ರಯುಕ್ತ ಮಠದ ವಿದ್ಯಾರ್ಥಿಗಳಿಗೆ ಒಂದು ದಿನ ಸಿಹಿಯೂಟ ದಾಸೋಹದ ಖರ್ಚು 2.5 ಲಕ್ಷರೂಗಳನ್ನು ಅಮೇರಿಕಾದಲ್ಲಿರುವ ಶಿವಪ್ಪ ಅವರ ಕುಟುಂಬಸ್ಥರಾದ ಮಮತಾ ದಿಲೀಪ್ ಕುಮಾರ್ ಅವರು ನೀಡಿದ್ದು ಶ್ರೀಗಳಿಂದ ಶ್ಲಾಘನೆ ವ್ಯಕ್ತಪಡಿಸಿದರು.