ಬಾಗಲಕೋಟೆ ಜಿಲ್ಲೆಯಲ್ಲಿ 8 ಸಿಎಲ್-2ಎ ಲೈಸನ್ಸ್ ಹರಾಜು ಪ್ರಕ್ರಿಯೆ

KannadaprabhaNewsNetwork |  
Published : Dec 24, 2025, 03:15 AM IST
ಪೊಟೋ 23ಬಿಕೆಟಿ6, ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಫಕೀರಪ್ಪ  ಅವರುನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,) | Kannada Prabha

ಸಾರಾಂಶ

ರಾಜ್ಯದಲ್ಲಿ ಖಾಲಿ ಅಥವಾ ಲಭ್ಯವಿರುವ 569 ಬಾರ್ ಲೈಸನ್ಸ್ ಹರಾಜಿಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಆ ಪೈಕಿ 8 ಸಿಎಲ್-2ಎ ಲೈಸನ್ಸ್ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಖಾಲಿ ಅಥವಾ ಲಭ್ಯವಿರುವ 569 ಬಾರ್ ಲೈಸನ್ಸ್ ಹರಾಜಿಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಆ ಪೈಕಿ 8 ಸಿಎಲ್-2ಎ ಲೈಸನ್ಸ್ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಅಸೂಚನೆ ಹೊರಡಿಸಿದ್ದು, ಡಿ.22 ರಿಂದ ನೋಂದಣಿಯೂ ಆರಂಭವಾಗಿದೆ. ಇದೇ ಮೊದಲ ಸಲ ಈ ರೀತಿ ಆನ್‌ಲೈನ್‌ ಮೂಲಕ ಹರಾಜು ಪ್ರಕ್ರಿಯೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಬಿಡ್ದಾರರಿಗೆ ಜನವರಿ 2 ರಂದು ಬಾಗಲಕೋಟೆ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಒಂದು ದಿನದ ತರಬೇತಿ ನಡೆಯಲಿದೆ. ಹಾಗೆಯೇ ಜಿಲ್ಲೆಯ 8 ಬಾರ್ ಲೈಸನ್ಸ್‌ಗಳಿಗೆ ಜನವರಿ 16 ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೂ ಆನ್‌ಲೈನ್‌ನಲ್ಲಿ ಬಿಡ್ಡಿಂಗ್ ನಡೆಯಲಿದೆ ಎಂದರು.ಬಾರ್‌ಲೈಸೆನ್ಸ್‌ಗಳಿಗೆ ಈಗಾಗಲೇ ಸರ್ಕಾರ ನಿಗದಿತ ಮೊತ್ತವನ್ನು ನಿಗದಿ ಪಡಿಸಿದ್ದು, ಬೀಳಗಿ ತಾಲೂಕಿನ ಒಂದು ಲೈಸೆನ್ಸ್‌ ₹70 ಲಕ್ಷ ನಿಗದಿ ಪಡಿಸಿದ್ದು, ಬಾದಾಮಿಯ ಎರಡು ಬಾರ್‌ಗಳಿಗೆ ₹80 ಲಕ್ಷ ಹಾಗೂ ಬಾಗಲಕೋಟೆ 1, ಹುನಗುಂದ 2, ಜಮಖಂಡಿ ಮತ್ತು ಮುಧೋಳ ತಲಾ ಒಂದು ಬಾರ್‌ಗಳಿಗೆ ₹90 ಲಕ್ಷ ಮೊತ್ತವನ್ನು ನಿಗದಿ ಪಡಿಸಲಾಗಿದೆ. ಹರಾಜು ಕೂಗುವವರು ಇದಕ್ಕಿಂತ ಹೆಚ್ಚು ಮೊತ್ತವನ್ನು ಬಿಡ್ ಮಾಡಬೇಕು. ಕನಿಷ್ಠ ₹2 ಲಕ್ಷ ಹೆಚ್ಚಿಗೆ ನಮೂದು ಮಾಡುತ್ತ ಹೋಗಬೇಕು ಎಂದು ತಿಳಿಸಿದರು.5 ವರ್ಷದ ಅವಧಿಗೆ ಈ ಪರವಾನಿಗೆ ಇದ್ದು, ಈಗಾಗಲೇ 6 ತಿಂಗಳು ಅವಧಿ ಮುಗಿದಿದ್ದು, ಬಾಕಿ ನಾಲ್ಕುವರೆ ವರ್ಷ ಅವಧಿ ಇರುತ್ತದೆ. ಮೊದಲು ವರ್ಷ ಬಿಟ್ಟು ಉಳಿದ ನಾಲ್ಕು ವರ್ಷ ಪ್ರತಿ ವರ್ಷ ಲೈಸನ್ಸ್ ನವೀಕರಣದ ನಿಗದಿತ ಮೊತ್ತವನ್ನು ಸಹ ಪಾವತಿಸಬೇಕು. ಬಾರ್ ಲೈಸನ್ಸ್ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಜಿಲ್ಲೆಯ 8 ಲೈಸೆನ್ಸ್‌ಗಳಲ್ಲಿ ಬಾದಾಮಿಯ ಒಂದು ಕಡೆ ಎಸ್ಟಿಗೆ ಮೀಸಲಿದ್ದು, ಉಳಿದ 7 ಬಾರ್‌ಗಳು ಸಾಮಾನ್ಯ ವರ್ಗಕ್ಕೆ ಇವೆ. ಈ ಹರಾಜು ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ಏಜನ್ಸಿ ಎಂಎಸ್ಡಿಸಿ ಮಾಡುತ್ತಿದ್ದು, ಅತ್ಯಂತ ಪಾರದರ್ಶಕತೆ ಇರುತ್ತದೆ. ಒಬ್ಬರು ಒಂದಕ್ಕಿಂತ ಹೆಚ್ಚು ಲೈಸನ್ಸ್ ಪಡೆಯಲು ಅವಕಾಶ ಇದೆ. ನಿಗದಿತ ಮೊತ್ತಕ್ಕೆ ಶೇ.2 ರಷ್ಟು ಹಣವನ್ನು ಜಿಎಸ್ಟಿ ಜೊತೆಗೆ ಇಎಂಡಿ ಕಟ್ಟಬೇಕು. ಹಾಗೆಯೇ ನೋಂದಣಿ ಶುಲ್ಕವೆಂದು ₹50 ಸಾವಿರ ತುಂಬಬೇಕು ಎಂದರು.ಜಿಲ್ಲಾ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳಾದ ತಿಪ್ಪೇಸ್ವಾಮಿ, ಹನಮಂತಪ್ಪ ಭಜಂತ್ರಿ ಇದ್ದರು.ಬಾರ್ ಓಪನ್, ಕ್ಲೋಸ್‌ಗೆ ಸಮಯ ನಿಗದಿ

ಇನ್ನು ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಬಾರ್‌ಗಳಿಗೆ ಸಮಯ ನಿಗದಿಯೇ ಇಲ್ಲವಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಫಕೀರಪ್ಪ ಚಲವಾದಿ ಅವರು, ಸಿಎಲ್-7 ಇದ್ದರೇ ಬೆಳಗ್ಗೆ 9 ರಿಂದ ರಾತ್ರಿ 12, ಸಿಎಲ್-9 ಗೆ ಬೆಳಗ್ಗೆ 10 ರಿಂದ ರಾತ್ರಿ 11.30, ಸಿಎಲ್-2 ಇದ್ದರೇ ಬೆಳಗ್ಗೆ 10 ರಿಂದ ರಾತ್ರಿ 10.30 ಹಾಗೂ ಎಂಎಸ್ಐಎಲ್‌ಗಳಿಗೆ ಬೆಳಗ್ಗೆ 11 ರಿಂದ ರಾತ್ರಿ 10 ಗಂಟೆವರೆಗೆ ಸಮಯ ನಿಗದಿ ಪಡಿಸಲಾಗಿದೆ. ಈ ಸಮಯ ಉಲ್ಲಂಘನೆ ಮಾಡುವ ಬಾರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ಸಿಎಲ್-2 ಗಳಲ್ಲಿ ಎಂಆರ್‌ಪಿಗಿಂತ ಹೆಚ್ಚು ಹಣ ಪಡೆಯಬಾರದು. ಈ ಬಗ್ಗೆ ದೂರುಗಳು ಬಂದರೇ ಕ್ರಮ ತೆಗೆದುಕೊಳ್ಳಲಾಗುವುದು. ದರ ಉಲ್ಲಂಘನೆ ಮಾಡಿರುವ ಬಗ್ಗೆ ಜಿಲ್ಲೆಯಲ್ಲಿ ಜುಲೈ ತಿಂಗಳಿಂದ ಸೆಪ್ಟಂಬರ್‌ವರೆಗೆ 138 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ, ಕಳ್ಳಭಟ್ಟಿ ಸೇರಿ ಈ ವರ್ಷ 377 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ