ಕೊಪ್ಪಳದಲ್ಲಿ ಗುಜರಿಯಲ್ಲಿ 99 ಕೆಜಿ ಶಾಲಾ ಪುಸ್ತಕಗಳು ಪತ್ತೆ

KannadaprabhaNewsNetwork |  
Published : Jul 14, 2026, 02:15 AM IST
ಪೋಟೊಗಳು: ಕೊಪ್ಪಳ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಇರುವ ಪಠ್ಯಪುಸ್ತಕಗಳು. | Kannada Prabha

ಸಾರಾಂಶ

ಕೊಪ್ಪಳ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಎಂಟನೇ ಹಾಗೂ ಒಂಬತ್ತನೇ ತರಗತಿಯ 99ಕೆಜಿ ಪಠ್ಯಪುಸ್ತಕಗಳು ಪತ್ತೆಯಾಗಿವೆ. ಶಾಲಾ–ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್ ಹಾಗೂ ಗೌರವಾಧ್ಯಕ್ಷ ಬಸವರಾಜ ಶೀಲವಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೊಪ್ಪಳ: ಒಂದು ಪುಸ್ತಕ ಎಂದರೆ ಕೇವಲ ಕಾಗದದ ಕಟ್ಟಲ್ಲ, ಅದು ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಜ್ಞಾನದ ಬಾಗಿಲು. ಸರ್ಕಾರವೂ ಇದೇ ಉದ್ದೇಶದಿಂದ ಪ್ರತಿವರ್ಷ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸುತ್ತದೆ.

ಆದರೆ ವಿದ್ಯಾರ್ಥಿಗಳ ಕೈ ಸೇರಬೇಕಾದ ಇದೇ ಪುಸ್ತಕಗಳು ಗುಜರಿ ಅಂಗಡಿಯಲ್ಲಿ ಕಿಲೋ ಲೆಕ್ಕದಲ್ಲಿ ಮಾರಾಟವಾಗಿರುವುದು ಶಿಕ್ಷಣ ಇಲಾಖೆಯ ಕಾರ್ಯವೈಖರಿ ಮತ್ತು ಮೇಲ್ವಿಚಾರಣೆ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ.

ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಎಂಟನೇ ಹಾಗೂ ಒಂಬತ್ತನೇ ತರಗತಿಯ ಪಠ್ಯಪುಸ್ತಕಗಳು ಇರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಾಲಾ–ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್ ಹಾಗೂ ಗೌರವಾಧ್ಯಕ್ಷ ಬಸವರಾಜ ಶೀಲವಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಹಿತಿ ನಿಜವೆಂದು ಖಚಿತವಾದ ಆನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಿಇಒ ಸೂಚನೆಯಂತೆ ಇಲಾಖೆಯ ಸಿಬ್ಬಂದಿ ವೈಶಂಪಾಯನ ಮತ್ತು ಸದಾನಂದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಗುಜರಿ ಅಂಗಡಿಯಲ್ಲಿದ್ದ ಪುಸ್ತಕಗಳನ್ನು ತೂಕ ಮಾಡಿದಾಗ ಒಟ್ಟು 99 ಕೆ.ಜಿ. ಪಠ್ಯಪುಸ್ತಕಗಳು ಪತ್ತೆಯಾಗಿದ್ದು, ಅವುಗಳನ್ನು ಇಲಾಖೆಯ ವಶಕ್ಕೆ ಪಡೆದುಕೊಳ್ಳಲಾಯಿತು.

ಗುಜರಿಗೆ ಬಂದಿದ್ದು ಹೇಗೆ?: ಇಷ್ಟೊಂದು ಪುಸ್ತಕಗಳು ಯಾವ ಶಾಲೆಯಿಂದ ಬಂದವು? ಉಳಿಕೆ ಪುಸ್ತಕಗಳೇ ಅಥವಾ ವಿತರಣೆಗೂ ಮುನ್ನವೇ ಹೊರಹೋಗಿವೆಯೇ? ಯಾರಾದರೂ ಉದ್ದೇಶಪೂರ್ವಕವಾಗಿ ಮಾರಾಟ ಮಾಡಿದ್ದಾರೆಯೇ? ಎಂಬ ಅನುಮಾನಗಳು ವ್ಯಕ್ತವಾಗಿವೆ.

ಸರ್ಕಾರಿ ಶಾಲೆಗಳಿಗೆ ಬರುವ ಪ್ರತಿಯೊಂದು ಪುಸ್ತಕಕ್ಕೂ ಲೆಕ್ಕವಿರುತ್ತದೆ. ಎಷ್ಟು ಪುಸ್ತಕಗಳು ಬಂದವು? ಎಷ್ಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು? ಎಷ್ಟು ಉಳಿದಿವೆ ಎಂಬ ವಿವರಗಳು ಶಾಲೆ ಮತ್ತು ಶಿಕ್ಷಣ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿರುತ್ತವೆ. ಆದರೂ ಇಷ್ಟೊಂದು ಪ್ರಮಾಣದ ಪುಸ್ತಕಗಳು ಗುಜರಿ ಅಂಗಡಿಗೆ ತಲುಪಿರುವುದು ಅಚ್ಚರಿ ಮೂಡಿಸಿದೆ.

ಪುಸ್ತಕಗಳು ಹಳೆಯ ಶೈಕ್ಷಣಿಕ ವರ್ಷದ್ದಾಗಿದ್ದರೂ ಅವುಗಳನ್ನು ವಿಲೇವಾರಿ ಮಾಡುವುದಕ್ಕೂ ಸರ್ಕಾರದ ನಿಯಮಗಳಿವೆ. ಅವುಗಳನ್ನು ನೇರವಾಗಿ ಗುಜರಿಗೆ ಮಾರಾಟ ಮಾಡುವಂತಿಲ್ಲ. ಹೀಗಿರುವಾಗ ಪುಸ್ತಕಗಳು ಗುಜರಿ ಅಂಗಡಿಗೆ ಹೇಗೆ ತಲುಪಿದವು ಎಂಬುದನ್ನು ಇಲಾಖೆ ಪತ್ತೆಹಚ್ಚಬೇಕಿದೆ.

ಈ ಪ್ರಕರಣದಲ್ಲಿ ಕೇವಲ ಪುಸ್ತಕಗಳನ್ನು ವಶಪಡಿಸಿಕೊಳ್ಳುವುದರಿಂದ ಕೆಲಸ ಮುಗಿಯುವುದಿಲ್ಲ, ಅವು ಯಾವ ಶಾಲೆಯವು? ಯಾವ ಶೈಕ್ಷಣಿಕ ವರ್ಷದವು? ಯಾರಿಂದ ಗುಜರಿಗೆ ಮಾರಾಟವಾಗಿವೆ? ಇದರಲ್ಲಿ ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿಯ ಪಾತ್ರ ಇದೆಯೇ? ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಂಡರೆ ಮಾತ್ರ ಇಂತಹ ಘಟನೆಗಳಿಗೆ ತಡೆ ಬೀಳಲಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಎಗಳು ಎಚ್ಚರಿಕೆಯಿಂದ ಕೆಲಸ ಮಾಡಿ: ಸಿ.ಸಿ. ಪಾಟೀಲ
ಜುಲೈ 16ರಂದು ವೀರಭದ್ರಯ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆ