ನರಗುಂದ: ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರ ಪಟ್ಟಿಯಿಂದ ಹೊರಹೋದ ವ್ಯಕ್ತಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳೂ ಸ್ಪಷ್ಟತೆ ನೀಡಿದ್ದಾರೆ. ಹೀಗಾಗಿ ಬಿಎಲ್ಓ, ಬಿಎಲ್ಎ-2 ಮತ್ತು ಮತದಾರರು ಬಹಳ ಎಚ್ಚರಿಕೆಯಿಂದ ಎಸ್ಐಆರ್ ಪ್ರಕ್ರಿಯೆಯ ಕೆಲಸ ಮಾಡಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿನ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಸೋಮವಾರ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರಾರಂಭವಾದ ಎಸ್ಐಆರ್ ಅಭಿಯಾನದಲ್ಲಿ ಬಿಎಲ್ಒಗಳು ಬಹುತೇಕ ಭಾಗಿಯಾಗಿದ್ದು ಅಭಿನಾರ್ಹ. ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರ ಹೊರ ಹೋಗದಂತೆ ಬಿಎಲ್ಓಗಳು ನೋಡಿಕೊಳ್ಳಬೇಕು. ಬಿಎಲ್ಎ-2ಗಳೂ ಮನೆ ಮನೆಗೆ ಹೋಗಿ ನೋಂದಣಿ ಪತ್ರ ನೀಡುತ್ತಿದ್ದಾರೆ. ಊರು ಬಿಟ್ಟು ಹೊರಗೆ ಇರುವ ವ್ಯಕ್ತಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ರಾಜ್ಯ ಸರ್ಕಾರ 10 ವರ್ಷ ಮೇಲ್ಪಟ್ಟು ರಹವಾಸಿ ಹೊಂದಿದ ವ್ಯಕ್ತಿಗೆ (ಪಿಆರ್‌ಸಿ) ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುತ್ತಿದೆ. ಅರ್ಹ ದಾಖಲೆ ಹೊಂದಿದ್ದಲ್ಲಿ ನಮ್ಮದೇನು ಅಭ್ಯಂತರವಿಲ್ಲ. ಸರ್ಕಾರ ಸೂಚಿಸುವ ಮಾರ್ಗಸೂಚಿಯಲ್ಲಿ ದಾಖಲೆಗಳು ಇಲ್ಲದೇ ಇದ್ದ ಪಕ್ಷದಲ್ಲಿ ವಿಚಾರ ವಿನಿಮಯ ಮಾಡಿ ಖಾಯಂ ರಹವಾಸಿ ಪತ್ರ ನೀಡಲು ತಹಸೀಲ್ದಾರ್, ಶಿರಸ್ತೇದಾರರಿಗೆ ರಾಜ್ಯ ಸರ್ಕಾರ ಅಧಿಕಾರ ಕೊಟ್ಟಿದೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪಿಆರ್‌ಸಿ ಪತ್ರ ನೀಡಿದರೆ ನೌಕರಿ ಕಳೆದುಕೊಳ್ಳುವ ಸಂಭವವಿದೆ. ಹೀಗಾಗಿ. ಅಧಿಕಾರಿಗಳು ಪಿಆರ್‌ಸಿ ಪತ್ರ ನೀಡುವಲ್ಲಿ ಬಹಳ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ರೈತರು ತೀವ್ರ ಮಳೆ ಕೊರತೆ ಅನುಭವಿಸುತ್ತಿದ್ದಾರೆ. ಮಲಪ್ರಭಾ ನದಿ ನೀರಿನ ಹರಿವನ್ನು ಹೊಂದಿರುವ ನರಗುಂದ ಮತಕ್ಷೇತ್ರವೂ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಿಎಂ ಅವರು ₹1 ಕೋಟಿ ನೀಡುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಬರ ಅಧ್ಯಯನ ನಡೆದಿಲ್ಲ. ಕೃಷಿ ಸಚಿವರಿಲ್ಲ. ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರ ಯಾವುದೇ ಆಶಾಭಾವನೆ ಇಲ್ಲ. ಗ್ಯಾರಂಟಿ ಹೆಸರಲ್ಲಿ ತಾಲೂಕಾಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ರಾಜ್ಯಮಟ್ಟದ ಇನ್ನೀತರೆ ಹುದ್ದೆಗಳ ಹೆಸರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಗಂಭೀರವಾದ ಆರೋಪ ಮಾಡಿದರು.


ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಪವಾಡೆಪ್ಪ ವಡ್ಡಿಗೇರಿ, ವಸಂತ ಜೋಗಣ್ಣವರ, ಮಲ್ಲಪ್ಪ ಮೇಟಿ, ಎಸ್.ಆರ್. ಪಾಟೀಲ, ಸಂಗನಗೌಡ ಹಾಲಗೌಡ್ರ, ರಾಜುಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಹಸನ ನವಲೆ, ಅನೀಲ ಧರಿಯಣ್ಣವರ, ರಿಯಾಜ ಕೊಣ್ಣೂರ, ಶರಣು ಪಿಡ್ಡನಾಯ್ಕರ, ಸಂತೋಷ ಹಂಚಿನಾಳ, ಸೇರಿದಂತೆ ಮುಂತಾದವರು ಇದ್ದರು.