ಹಾನಗಲ್ಲ: ಮಾದಕ ವ್ಯಸನ ಹಸನಾದ ಬದುಕನ್ನು ಅಸ್ತವ್ಯಸ್ಥಗೊಳಿಸಿ ಕುಟುಂಬವನ್ನೂ ಆತಂಕಕ್ಕೆ ಈಡು ಮಾಡುವ ಮಹಾ ಮಾರಕ ಹವ್ಯಾಸ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಸಂಚಾಲಕ ಕಲ್ಯಾಣಕುಮಾರ ಶೆಟ್ಟರ ತಿಳಿಸಿದರು.

ಹಾನಗಲ್ಲಿನ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕುಮಾರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆಯವರು ಇಡೀ ರಾಜ್ಯದಲ್ಲಿ ಮಹಿಳಾ ಸಬಲೀಕರಣ ಹಾಗೂ ಯುವಕರ ಹಿತಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಸೌಖ್ಯ ಕಾಪಾಡಲು ಮುಂದಾಗಿದ್ದಾರೆ. ಇದು ಧರ್ಮಸ್ಥಳ ಸಂಘದ ಜಾಗೃತಿಯ ಕಾರ್ಯಕ್ರಮ. ಇದಕ್ಕೆ ಸ್ಪಂದಿಸಿದ ಯುವಕರು ದುಶ್ಚಟಗಳಿಂದ ದೂರವಾಗಿ ಬದುಕು ರೂಪಿಸಿಕೊಳ್ಳಬೇಕು. ವ್ಯಸನಗಳು ಕೌಟುಂಬಿಕ ಸೌಖ್ಯವನ್ನು ಹದಗೆಡಿಸುತ್ತವೆ. ಇಂಥ ಸಂದರ್ಭದಲ್ಲಿ ಶಾಲೆ ಕಾಲೇಜುಗಳು ಹಾಗೂ ಸಾರ್ವಜನಿಕರ ಸಂಘ ಸಂಸ್ಥೆಗಳು ಕಾಳಜಿಯಿಂದ ಕೆಲಸ ನಡೆಯಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಮಾದಕಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಇಡೀ ಪ್ರಪಂಚವೇ ಈಗ ಮಾದಕದ ವಿಷಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ದೈಹಿಕ ಮಾನಸಿಕ ಅಪಾಯಕಾರಿ ಮಾದಕಗಳು ಅಮಲಿನಿಂದ ಈಗ ಹತ್ತು ಹಲವು ಅಪರಾಧ ಕೃತ್ಯಗಳಿಗೆ ದಾರಿಯಾಗುತ್ತಿವೆ. ವೈಯಕ್ತಿಕ ಆರೋಗ್ಯದ ಹಾನಿಯ ಜೊತೆಗೆ ಸಾಮಾಜಿಕ ಆರೋಗ್ಯವೂ ಹದಗೆಡುತ್ತಿದೆ. ಮೌಲ್ಯಗಳನ್ನು ಬಿತ್ತಿದರೆ ಮಾದಕಗಳಿಂದ ದೂರ ಉಳಿಯಲು ಸಾಧ್ಯ ಎಂದರು.

ಹಾವೇರಿ ವಿಶ್ವವಿದ್ಯಾಲಯದ ಡೀನ ಡಾ.ಎನ್. ಸದಾಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಡಾ. ಆರ್.ದಿನೇಶ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಿರಂಜೀವಿ ಆಡೂರ, ಡಾ. ಜಿ.ವಿ. ಪ್ರಕಾಶ, ಡಾ.ಪ್ರಕಾಶ ಹುಲ್ಲೂರ, ಡಾ. ವಿಶ್ವನಾಥ ಬೋಂದಾಡೆ, ಡಾ. ಜಿ.ಟಿ. ಜಿತೇಂದ್ರ, ಡಾ. ರಾಘವೇಂದ್ರ ಮಾಡಳ್ಳಿ, ಡಾ.ಸಿ.ಎಸ್. ರುದ್ರೇಶ, ಎಂ.ಎಂ.ನಿಂಗೋಜಿ, ರಾಜು ಮಾಸ್ತೇರ, ರೂಪಾ ದೊಡ್ಡಮನಿ, ಚೇತನ ಗೊಂದಿ, ಶಶಿಕಲಾ ಬಿದರಕೊಪ್ಪ, ಶ್ವೇತಾ ಶಕುನವಳ್ಳಿ, ಉಮೇಶ ನಂದೀಕೊಪ್ಪ, ಗೋಪಾಲ ಗುನಗನಹಳ್ಳಿ, ಶಂಭುಲಿಂಗ ಶಾಂತಪೂರಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಪೂಜಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಮೇಘನಾ ಶೇಟ್ ಸ್ವಾಗತಿಸಿದರು. ಸುಪ್ರಿಯಾ ಸಂಸಿ, ರೋಜಾ ಯಂಕನವರ ಕಾರ್ಯಕ್ರಮ ನಿರೂಪಿಸಿದರು.