ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ದ್ಯಾಮಣ್ಣ ಬಸವರಾಜ ಭಜಂತ್ರಿ ಎಂಬುವವರು ತಮ್ಮ ಒಂದು ವರ್ಷದ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಿದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆ ಸಂಜೆ ಮಗುವಿನ ಪ್ರಾಣ ಹೋಗಿದೆ. ಊರಿಗೆ ತೆಗೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮಗುವಿನ ಅಂತ್ಯಸಂಸ್ಕಾರ ನೆರವೇರಿಸಲು ವಾಹನದಲ್ಲಿ ಇಳಕಲ್ಲಗೆ ಕರೆತರುವಾಗ ಮಾರ್ಗಮಧ್ಯೆ ಮಗು ಕೆಮ್ಮಿದ್ದು, ಅಚ್ಚರಿಗೊಂಡ ಮನೆಯವರು ಸಮೀಪದಲ್ಲಿಯೇ ಇದ್ದ ನಗರದ ಮುರ್ತುಜಾ ಖಾದ್ರಿ ದರ್ಗಾ ದರ್ಶನ ಪಡೆದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಗುವಿನ ಸ್ಥಿತಿ ಚಿಂತಾಜನಿಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.