ಕನಕರಿಂದ 4 ಪುಸ್ತಕ, 316 ಕೀರ್ತನೆ ರಚನೆ

KannadaprabhaNewsNetwork | Published : Nov 19, 2024 12:46 AM

ಸಾರಾಂಶ

ಕನಕದಾಸರು 4 ಪುಸ್ತಕ ಹಾಗೂ 316 ಕೀರ್ತನೆಗಳನ್ನು ರಚನೆ ಮಾಡಿದ್ದರು ಎಂದು ಕರ್ನಾಟಕ ಪಬ್ಲಿಕ್‌ ಸ್ಕೂಲಿನ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ಪ ಚೆಲುವಾದಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕನಕದಾಸರು 4 ಪುಸ್ತಕ ಹಾಗೂ 316 ಕೀರ್ತನೆಗಳನ್ನು ರಚನೆ ಮಾಡಿದ್ದರು ಎಂದು ಕರ್ನಾಟಕ ಪಬ್ಲಿಕ್‌ ಸ್ಕೂಲಿನ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ಪ ಚೆಲುವಾದಿ ತಿಳಿಸಿದರು.

ಅವರು ಸೋಮವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಹಾಗೂ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕನಕದಾಸರ ಮೊದಲು ಮೋಹನ ತರಂಗ ಎಂಬ ಕೃತಿ ರಚಿಸಿದ್ದರು. ನಂತರ ನಳ ಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿ ಭಕ್ತಸಾರ ಎಂಬ ಕೃತಿಗಳನ್ನು ರಚಿಸಿದರು. ಕನಕದಾಸರ ಮೊದಲ ಹೆಸರು ತಿಮ್ಮಪ್ಪ ಆಗಿತ್ತು. ತಿಮ್ಮಪ್ಪ ಅವರು ದೇವಸ್ಥಾನ ಕಟ್ಟುವಾಗ ಬಂಗಾರದ ನಿಧಿ ಸಿಕ್ಕಿತ್ತು. ಅದನ್ನು ಸ್ವಂತಕ್ಕೆ ಉಪಯೋಗಿಸದೆ ಅವರು ದಾನ ಮಾಡಿದರು. ನಂತರ ಅವರ ಹೆಸರು ಕನಕದಾಸ ಎಂದು ಬದಲಾಯಿತು ಎಂದರು.

ಕನಕದಾಸರು ಹುಟ್ಟಿದ ಊರು ಕಾಗಿನೆಲೆಯಲ್ಲಿ ಈಗಲೂ ಕನಕದಾಸರ ಕಂಬಳಿ, ಚಪ್ಪಲಿ ಇದೆ. ಉಡುಪಿಯ ಶ್ರೀ ಕೃಷ್ಣನ ದರ್ಶನಕ್ಕೆ ವಿಜಯನಗರದಿಂದ ಕಾಲ್ನೆಡೆಗೆಯಲ್ಲಿ ಉಡುಪಿಗೆ ಕನಕರು ಬಂದಿದ್ದರು. ಆದರೆ, ಅವರು ಕೀಳು ಜಾತಿ ಎಂದು ಕೃಷ್ಣ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಶ್ರೀ ಕೃಷ್ಣನೇ ಪಶ್ಚಿಮಕ್ಕೆ ತಿರುಗಿ ನಿಂತಾಗ ಗೋಡೆ ಉರುಳಿ ಕನಕದಾಸರಿಗೆ ದರ್ಶನ ನೀಡಿದ್ದರು. ಇದು ಮುಂದೆ ಕನಕನ ಕಿಂಡಿಯಾಯಿತು ಎಂದರು.

ತಹಸೀಲ್ದಾರ್ ತನುಜ ಟಿ. ಸವದತ್ತಿ ಮಾತನಾಡಿ, ಚಿತ್ರದುರ್ಗದ ಕೋಟೆಯ ಮೇಲೆ ಹೈದರಾಲಿ ದಾಳಿ ಮಾಡಿದಾಗ ಒನಕೆಯನ್ನೇ ಆಯುಧ ಮಾಡಿಕೊಂಡು ಶತ್ರು ಸೈನ್ಯವನ್ನು ಸದೆ ಪಡೆದ ಒನಕೆ ಓಬವ್ವನ ಕಿಂಡಿ ಈಗಲೂ ಇದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಭಾನು ವಹಿಸಿದ್ದರು. ಎ.ಪಿ.ಎಂ.ಸಿ.ಸದಸ್ಯ ಎಚ್‌.ಎಂ. ಶಿವಣ್ಣ, ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಸದಸ್ಯ ಮುಕಂದ, ಶೃಂಗೇರಿ ಕ್ಷೇತ್ರದ ಚೆಲುವಾದಿ ಮಹಾ ಸಭಾದ ಅಧ್ಯಕ್ಷ ಡಿ.ರಾಮು, ತಾ. ಕುರುಬ ಸಮಾಜದ ಅಧ್ಯಕ್ಷ ಪುರುಶೋತ್ತಮ್ ಇತರರು ಇದ್ದರು.

Share this article