ಕೊಪ್ಪಳ: ದೇಶದ ಆರ್ಥಿಕತೆ ದುಡಿಯುವ ವರ್ಗಗಳ ಮೇಲೆ ನಿಂತಿದೆ. ಅಸಂಘಟಿತ ವರ್ಗಗಳಿಗೆ ಸಾಕಷ್ಟು ದುಡಿಮೆ ಇದ್ದಲ್ಲಿ ಉತ್ತಮವಾಗಿ ಕುಟುಂಬ ನಿರ್ವಹಣೆಯಾಗುತ್ತದೆ. ದೇಶ ಅಭಿವೃದ್ಧಿಯತ್ತ ಸಾಗಿದರೆ ಅದರಲ್ಲಿ ಅಸಂಘಟಿತ ವರ್ಗಗಳ ಪಾತ್ರವು ಬಹು ಮುಖ್ಯವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್. ದರಗದ ಹೇಳಿದರು.
ತಾಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದನಕನದೊಡ್ಡಿ ಗ್ರಾಮದ ಕೆರೆಯ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಅಸಂಘಟಿತ ವರ್ಗಗಳಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಸಂಘಟಿತ ವರ್ಗದವರಿಗೆ ಸರ್ಕಾರದಿಂದ ಅನೇಕ ಸೌಲಭ್ಯ ಕಲ್ಪಿಸಲಾಗಿದ್ದು, ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವಂತೆ ಕರೆ ನೀಡಿದರು.
ದುಡಿಮೆ ದೇವರು ಎನ್ನುವ ಕಲ್ಪನೆ ಹೊಂದಿರುವ ಶ್ರಮಿಕ ವರ್ಗ, ಕೆಲಸಕ್ಕೆ ಸೀಮಿತವಾಗಿರದೇ ಕೆಲಸದ ಜತೆಗೆ ಸರ್ಕಾರಿ ಸೌಲಭ್ಯ ಪಡೆಯುವುದು ಹಕ್ಕಾಗಿದೆ ಎಂದರು.
ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಕೂಲಿಕಾರರು ಸಾಮೂಹಿಕ ಕಾಮಗಾರಿಯೊಂದಿಗೆ ವೈಯಕ್ತಿಕ ಕಾಮಗಾರಿಗಳಾದ ದನದ ಶೆಡ್, ಮೆಕೆ ಶೆಡ್, ಕೋಳಿ ಶೆಡ್, ಹಂದಿ ಶೆಡ್ ಮತ್ತು ತೋಟಗಾರಿಕೆ, ರೇಷ್ಮೆ ಕಾಮಗಾರಿ ಅನುಷ್ಠಾನಿಸಲು ಅವಕಾಶವಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ನಿರೀಕ್ಷಕಿ ಮಂಜುಳಾ ಮಾತನಾಡಿ, ಎಲ್ಲ ನರೇಗಾ ಕೂಲಿಕಾರರು ಕಟ್ಟಡ ಕಾರ್ಮಿಕರಲ್ಲ. ಗೌಂಡಿ ಕೆಲಸ, ಟೆಲರಿಂಗ್, ಎಲೆಕ್ಟ್ರಿಶನ್ ಸೇರಿದಂತೆ 91 ವರ್ಗದ ಕೆಲಸ ನಿರ್ವಹಿಸುವವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡರೆ ಅವರಿಗೆ ಅಪಘಾತವಾಗಿ ಶಾಶ್ವತ ಅಂಗವಿಕಲತೆ ಹೊಂದಿದಲ್ಲಿ ಮತ್ತು ಮರಣ ಹೊಂದಿದರೆ ಪರಿಹಾರ ಧನ ಒದಗಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗಿರುವ ವಿದ್ಯಾರ್ಥಿ ವೇತನ, ವಸತಿ ನಿಲಯ ಸೌಲಭ್ಯ ಮತ್ತು ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಮೂಲಭೂತ ಸೌಕರ್ಯದ ಕುರಿತು ತಿಳಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಗಂಗಪ್ಪ ನಾಯಕ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ, ಗ್ರಾಪಂ ಸದಸ್ಯರಾದ ರವಿಕುಮಾರ ಒಂಟಿಗಾರ, ಪಾರಮ್ಮ ಕೊಳ್ಳಿ, ಶಾಂತಮ್ಮ ಬಸವರಾಜ, ಪಿಡಿಒ ಯಮನೂರಪ್ಪ ಕಬ್ಬಣನವರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಫಾಮಿದಾ, ಶಬ್ಬೀರ್, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ ಮತ್ತು ಕರವಸೂಲಿಗಾರ ನಾಗರಾಜ ಇದ್ದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.