ಪುಟ...2ಕ್ಕೆ...ನಿರ್ವಹಣೆ ಇಲ್ಲದೇ ಪಾಳುಬಿದ್ದ ರೈತ ಭವನ

KannadaprabhaNewsNetwork | Published : Jun 25, 2025 11:47 PM

ಕನ್ನಡಪ್ರಭ ವಾರ್ತೆ ಇಂಡಿ ಹಳ್ಳಿಗಳಿಂದ ಕೃಷಿ ಮಾರುಕಟ್ಟೆಗೆ ಬರುವ ರೈತರಿಗೆ ವಾಸದ ಮನೆಯಾಗಿರಬೇಕಿದ್ದ ಇಂಡಿ ರೈತ ಭವನ ನಿರ್ವಹಣೆಯ ಕೊರತೆಯಿಂದಾಗಿ ಅನ್ನದಾತರಿಂದ ದೂರವಾಗುತ್ತಿದೆ. ದುರಸ್ತಿ ಹೆಸರಿನಲ್ಲಿ ಹಣ ಖರ್ಚು ಮಾಡಿದರೂ ರೈತರಿಗೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಮುರಿದ ಕಿಟಕಿ, ಬಾಗಿಲು, ತುಕ್ಕು ಹಿಡಿದ ಮುಖ್ಯಬಾಗಿಲು, ಭವನದ ಒಳಗಡೆ ಮಣ್ಣು, ಕಸದ ರಾಶಿಯೇ ತುಂಬಿಕೊಂಡಿದೆ.. ತುಂಬಿಕೊಂಡಿದೆ. ರೈತರ ವಾಸಸ್ಥಾನವಾಗಬೇಕಿದ್ದ ಈ ಭವನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆಯಿಂದ ತುಂಬಿಕೊಂಡು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಹಳ್ಳಿಗಳಿಂದ ಕೃಷಿ ಮಾರುಕಟ್ಟೆಗೆ ಬರುವ ರೈತರಿಗೆ ವಾಸದ ಮನೆಯಾಗಿರಬೇಕಿದ್ದ ಇಂಡಿ ರೈತ ಭವನ ನಿರ್ವಹಣೆಯ ಕೊರತೆಯಿಂದಾಗಿ ಅನ್ನದಾತರಿಂದ ದೂರವಾಗುತ್ತಿದೆ. ದುರಸ್ತಿ ಹೆಸರಿನಲ್ಲಿ ಹಣ ಖರ್ಚು ಮಾಡಿದರೂ ರೈತರಿಗೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಮುರಿದ ಕಿಟಕಿ, ಬಾಗಿಲು, ತುಕ್ಕು ಹಿಡಿದ ಮುಖ್ಯಬಾಗಿಲು, ಭವನದ ಒಳಗಡೆ ಮಣ್ಣು, ಕಸದ ರಾಶಿಯೇ ತುಂಬಿಕೊಂಡಿದೆ.. ತುಂಬಿಕೊಂಡಿದೆ. ರೈತರ ವಾಸಸ್ಥಾನವಾಗಬೇಕಿದ್ದ ಈ ಭವನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆಯಿಂದ ತುಂಬಿಕೊಂಡು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.

ಎಪಿಎಂಸಿಗೆ ದವಸ ಧಾನ್ಯ ಸೇರಿ ಕೃಷಿ ಉತ್ಪನ್ನಗಳ ಮಾರಾಟ, ಖರೀದಿ ಹಾಗೂ ಸಂತೆ ಮತ್ತಿತರ ಕಾರ್ಯಗಳಿಗೆ ನಿತ್ಯ ಗ್ರಾಮೀಣ ಭಾಗದಿಂದ ರೈತರು ಆಗಮಿಸುತ್ತಾರೆ. ಅವರು ಉಳಿದುಕೊಳ್ಳಲೆಂದೇ ಎಪಿಎಂಸಿಯಲ್ಲಿ ಸರ್ಕಾರ 40 ವರ್ಷಗಳ ಹಿಂದೆ ರೈತರ ಸಮುದಾಯ ಭವನ ನಿರ್ಮಾಣ ಮಾಡಿದೆ. ಇಂಡಿ ಪಟ್ಟಣದ ಎಪಿಎಂಸಿನಲ್ಲಿ ರೈತ ಭವನವಿದ್ದು, ನಿರ್ವಹಣೆ ಇಲ್ಲದೇ ದುಸ್ಥಿತಿಗೆ ತಲುಪಿದೆ. ಆದರೆ ಭವನದ ದುರಸ್ತಿ, ನಿರ್ವಹಣೆಯ ಹೆಸರಿನಲ್ಲಿ ಲಕ್ಷಾಂತರ ಅನುದಾನವನ್ನು ಖರ್ಚು ಮಾಡಲಾಗಿದೆ. ಪಾಳು‌ಬಿದ್ದ ರೈತ ಭವನ ಬಿಕೋ ಎನ್ನುತ್ತಿದ್ದು, ಕೋಣೆಗಳೂ ಇವೆ. ಶೌಚಾಲಯಗಳಿಗೆ ಬಾಗಿಲು ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದ್ದು, ಇಡೀ ಕಟ್ಟಡವೇ ಭೂತ ಬಂಗಲೆಯಂತೆ ಕಾಣುತ್ತದೆ.

ಎಪಿಎಂಸಿ ಆವರಣದಲ್ಲಿ ₹ 25 ಲಕ್ಷ ಖರ್ಚು ಮಾಡಿ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಅಧಿಕಾರಿಗಳ ಇಚ್ಚಾಸಕ್ತಿ ಕೊರತೆಯಿಂದ ಶುದ್ಧ ಕುಡಿಯುವ ನಿರೇ ಇಲ್ಲ. ರೈತ ಭವನ ಈಗ ಮೂತ್ರ ವಿಸರ್ಜನೆ ತಾಣ ಮಾರ್ಪಟ್ಟಿದೆ. ವಿದ್ಯುತ್‌ ಸಂಪರ್ಕದ ವೈರ್‌, ಬೋರ್ಡ್‌ಗಳು ಕೆಲವೆಡೆ ಕಿತ್ತು ಹೋಗಿವೆ. ಇರುವ ಕೋಣೆಗಳಿಗೆ ಬೀಗ ಹಾಕಲಾಗಿದ್ದು, ದೂಳಿನಿಂದ ತುಂಬಿಕೊಂಡಿದೆ. ಇಲ್ಲಿಗೆ ಬರುವ ರೈತರಿಗೆ ಕಡಿಮೆ ದರದಲ್ಲಿ ಕೇವಲ ₹ 30ರಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದರೆ, ರೈತ ಭವನ ಇದ್ದರೂ ಸದ್ಬಳಕೆಯಾಗುತ್ತಿಲ್ಲ. ಸುಮಾರು 10 ವರ್ಷಗಳಿಂದ ಬಹುತೇಕ ರೈತರೂ ಭವನದಲ್ಲಿ ಕಾಣುತ್ತಿಲ್ಲ.

ಸಿಸಿ ರಸ್ತೆ ಬಿಟ್ಟರೆ ಮತ್ತೇನು ಇಲ್ಲ:

ಎಪಿಎಂಸಿಯ ಕಾರ್ಯದರ್ಶಿಯ ಕಚೇರಿ ಕೂಡರೈತ ಭವನದ ಬಳಿಯೇ ಇದೆ. ಸಿಸಿ ರಸ್ತೆಯೊಂದನ್ನು ಬಿಟ್ಟರೆ ಎಪಿಎಂಸಿ ಆವರಣದಲ್ಲಿ ರೈತರಿಗೆ ಶುದ್ದ ನೀರು, ಉಳಿದುಕೊಳ್ಳಲು ಸ್ಥಳ, ಊಟ, ಉಪಹಾರಕ್ಕಾಗಿ ಉಪಹಾರ ಗೃಹ ಸೇರಿ ಭೂತ ಸೌಕರ್ಯಗಳು ಇಲ್ಲ. ಈ ಹಿಂದೆ ಹಳ್ಳಿಗಳಿಂದ ಬರುವ ರೈತರು ರಾತ್ರಿ ಬಸ್‌ ತಪ್ಪಿ ಊರಿಗೆ ಹೋಗಲು ಸಾಧ್ಯವಾಗದಿದ್ದಾಗ ರೈತರು ಇಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಇಂತಹ ರೈತರಿಗಾಗಿಯೇ ಈ ರೈತ ಭವನ ನಿರ್ಮಿಸಲಾಗಿದೆ. ಆದರೆ ಈಗ ವಾಹನ ಸೌಲಭ್ಯಗಳಿರುವುದರಿಂದ ರೈತರು ರಾತ್ರಿ ತಡವಾದರೂ ಮನೆ ಸೇರುತ್ತಾರೆ. ಉಳಿದುಕೊಳ್ಳುವ ರೈತರ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ, ಮಾರುಕಟ್ಟೆಗೆ ಬರುವ ರೈತರು ವಿಶ್ರಾಂತಿಗೆ ಈ ಭವನದ ಅವಶ್ಯಕತೆ ಇದೆ. ಹೀಗಾಗಿ, ರೈತ ಭವನದ ನವೀಕರಣ ಮಾಡಬೇಕಿದೆ. ಎಪಿಎಂಸಿ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಬರುತ್ತಿದ್ದರೂ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಗಮನ ಹರಿಸದಿರುವುದು ದುರ್ದೈವ.

---------

ಕೊಟ್ ೧

ರೈತ ಭವನ ದುರಸ್ತಿ ಮಾಡಬೇಕಾಗಿದೆ. ₹ 30 ಬಾಡಿಗೆ ಪಡೆದು ರೈತರಿಗೆ ರೈತ ಭವನದಲ್ಲಿ ಕೋಣೆ ನೀಡಬೇಕು ಎಂಬ ನಿಯಮವಿದೆ. ರೈತರು ಬರುತ್ತಿಲ್ಲ, ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತವಾಗಿರುವುದು ನಿಜ. ಇದೀಗ ನನಗೆ ವರ್ಗಾವಣೆ ಆಗಿದ್ದು, ಬರುವ ಅಧಿಕಾರಿಗಳ ಗಮನಕ್ಕೆ ತನ್ನಿ.

ಆನಂದ ರತ್ನಾಕರ, ಎಪಿಎಂಸಿ ಕಾರ್ಯದರ್ಶಿ

ಕೋಟ್ ೨

ಹೆಸರಿಗಷ್ಟೇ ರೈತ ಭವನವಿದೆ. ಯಾವೊಂದು ಸೌಲಭ್ಯಗಳು ಇಲ್ಲ. ಸ್ವಚ್ಛತೆಯಿಲ್ಲ. ಸೂಕ್ತ ನಿರ್ವಹಣೆ ಇಲ್ಲದೇ ಇರುವುದರಿಂದ ಇರುವ ಕಟ್ಟಡ ಹಾಳಾಗುತ್ತಿದೆ. ಶೀಘ್ರವೇ ದುರಸ್ತಿ ಮಾಡಿಸಿ, ಹಳ್ಳಿಗಳಿಂದ ಬರುವ ರೈತರಿಗೆ ಅನುಕೂಲ ಮಾಡಿಕೊಡಬೇಕು.

ಸಂತೋಷ ಕೆಂಬೋಗಿ, ರೈತ ಮುಖಂಡ