ಎರಡ್ಮೂರು ದಿನದಲ್ಲಿ ಕಾವೇರಿ ಆರತಿ ಸ್ವರೂಪ ಪ್ರಕಟ: ಡಿಸಿಎಂ ಡಿ.ಕೆ ಶಿವಕುಮಾರ್

KannadaprabhaNewsNetwork | Published : Jun 25, 2025 11:47 PM

ಎಷ್ಟು ಪ್ರವಾಸಿಗರು ಬರುವ ಅಂದಾಜಿದೆ ಎಂದು ಕೇಳಿದಾಗ, ಸದ್ಯಕ್ಕೆ ವಾರಕ್ಕೆ ಮೂರು ದಿನ ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಇನ್ನು ಕಾರ್ಯಕ್ರಮದ ಬಳಿ ೧೦ ಸಾವಿರ ಜನರಿಗೆ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂದಿನ ಎರಡು- ಮೂರು ದಿನಗಳಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ಸ್ವರೂಪ ಪ್ರಕಟಿಸಲಾಗುವುದು. ತಪ್ಪು ಗ್ರಹಿಕೆಯಿಂದ ಕೆಲವರು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಮ್ಮೆ ಎಲ್ಲರ ಜತೆ ಸಭೆ ಮಾಡುತ್ತೇನೆ. ಈ ಕಾರ್ಯಕ್ರಮ ಸುಗಮವಾಗಿ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮ ಸಂಬಂಧ ಮಂಡ್ಯ ಜಿಲ್ಲೆ ರೈತರು, ಇತರೆ ಸಂಘಟನೆಗಳ ಮುಖಂಡರು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಪ್ರಾರ್ಥನೆ ವಿಫಲವಾಗುವುದಿಲ್ಲ:

ಕಾವೇರಿ ನದಿ ಬೆಂಗಳೂರು ನಗರ, ಮಂಡ್ಯ, ತಮಿಳುನಾಡು, ಪುದುಚೇರಿ, ಕೇರಳ ರಾಜ್ಯದ ರೈತರಿಗೆ ಆಸರೆಯಾಗಿದೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನಮ್ಮ ನಂಬಿಕೆ. ಈ ದೇಶದಲ್ಲಿ ಗಂಗಾರತಿ, ನಮ್ಮ ರಾಜ್ಯದಲ್ಲಿ ತುಂಗಾ ಆರತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗ ಕಾವೇರಿ ಆರತಿ ಮಾಡಲು ನಾವು ತೀರ್ಮಾನ ಮಾಡಿದ್ದೇವೆ. ಕೆಆರ್‌ಎಸ್ ಬೃಂದಾವನ ಉದ್ಯಾನವನಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಬೇಕು. ಅದಕ್ಕಾಗಿ ನಾವು ಕೆಆರ್‌ಎಸ್ ಆಕರ್ಷಣೆಯನ್ನೂ ಇಮ್ಮಡಿಗೊಳಿಸಬೇಕಿದೆ. ಕಾವೇರಿ ಮಾತೆಗೆ ಪ್ರಾರ್ಥಿಸುವುದು, ಉದ್ಯೋಗ ಸೃಷ್ಟಿ, ಸಂಸ್ಕೃತಿ, ಪರಂಪರೆ ಉಳಿಸಲು, ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕೋರ್ಟ್ ಅನುಮತಿ ನೀಡಿತ್ತು:

ಚಾಮುಂಡಿ ಬೆಟ್ಟದಲ್ಲಿ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಟಿವಿಎಸ್ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಿಂದ ದೇವಾಲಯಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾವೇರಿ ಆರತಿಯ ಪ್ರಾಯೋಗಿಕ ಕಾರ್ಯಕ್ರಮವಾಗಿ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಇದರ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರೂ ಕೊನೆಗೆ ನ್ಯಾಯಾಲಯ ಕಾರ್ಯಕ್ರಮಕ್ಕೆ ಅನುಮತಿ ನೀಡಿತು. ಆ ಕಾರ್ಯಕ್ರಮದಲ್ಲಿ ಸುಮಾರು ೨೫ ಸಾವಿರ ಜನ ಬಂದು ವೀಕ್ಷಣೆ ಮಾಡಿದರು. ಇದು ಜನರ ಭಾವನೆಯಾಗಿದೆ. ತಾಯಿ ಕಾವೇರಿ ಎಲ್ಲಾ ವರ್ಗದ ಆಸ್ತಿ. ಕಾವೇರಿ ಇಲ್ಲವಾದರೆ ಬೆಂಗಳೂರಿಗೆ ನೀರಿಲ್ಲ, ಕೈಗಾರಿಕೆ, ಕೃಷಿಗೆ ನೀರಿರುವುದಿಲ್ಲ. ನಮ್ಮ ರಾಜ್ಯ ಹಾಗೂ ತಮಿಳುನಾಡಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಹೋರಾಟ ಮಾಡುತ್ತಿದ್ದೇವೆ ಎಂದರು.

ಈ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ, ಬಿಡಬ್ಲ್ಯೂಡಿ, ಪ್ರವಾಸೋದ್ಯಮ ಹಾಗೂ ಇಂಧನ ಇಲಾಖೆಗಳಿಂದ ಅನುದಾನ ನೀಡಲಾಗುವುದು. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ೨೦ ಶಾಸಕರು ಹಾಗೂ ಮುಖಂಡರ ತಂಡವನ್ನು ಉತ್ತರ ಭಾರತದ ಪ್ರವಾಸಕ್ಕೆ ಕಳುಹಿಸಿ ಎಂದು ಎಲ್ಲಾ ಕಡೆ ಆರತಿ ಕಾರ್ಯಕ್ರಮ ಅಧ್ಯಯನ ಮಾಡಿ ವರದಿ ನೀಡಿದ್ದು, ಆ ವರದಿ ಆಧಾರದ ಮೇಲೆ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಎಲ್ಲರ ಸಹಕಾರ ಅಗತ್ಯ:

ಈ ಕಾರ್ಯಕ್ರಮಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ ಎಂದು ನಮ್ಮ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ನನಗೆ ಮಾಹಿತಿ ನೀಡಿದರು. ಹೀಗಾಗಿ ನಾನು ಅವರಿಗೆ ಆಹ್ವಾನ ಕೊಟ್ಟು ಸಭೆ ಮಾಡಿದೆ. ರೈತರಿಗೆ ಅವರದೇ ಆದ ಆತಂಕಗಳಿರುತ್ತವೆ. ಇದರಲ್ಲಿ ತಪ್ಪಿಲ್ಲ. ನಾವು ಅದನ್ನು ಗೌರವಿಸುತ್ತೇವೆ. ಸಭೆಯಲ್ಲಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳು ಕೂಡ ಇದನ್ನು ಸ್ವಾಗತಿಸಿದರು. ಕೆಲವರು ತಪ್ಪು ಗ್ರಹಿಕೆಯಿಂದ ಇದಕ್ಕೆ ಅಪಸ್ವರ ಎತ್ತಿದ್ದಾರೆ. ಮತ್ತೊಮ್ಮೆ ಎಲ್ಲರನ್ನು ಕರೆದು ಮಾತನಾಡಲಾಗುವುದು. ಆದರೆ ಈ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಇಂದು ಇದರ ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ್ದೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಈ ಕಾರ್ಯಕ್ರಮದ ಸ್ವರೂಪ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಅಣೆಕಟ್ಟೆಗೆ ತೊಂದರೆಯಾಗುವುದಿಲ್ಲ: ಡಿಕೆಶಿ ವಿಶ್ವಾಸ

ರೈತರು ಯಾವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಕಾರ್ಯಕ್ರಮದಿಂದ ಅಣೆಕಟ್ಟೆಗೆ ಏನಾದರೂ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಅಪಸ್ವರ ಎತ್ತಿದ್ದಾರೆ. ಈ ಕಾರ್ಯಕ್ರಮ ನಡೆಯುವ ಜಾಗ ಅಣೆಕಟ್ಟಿನಿಂದ ಸಾಕಷ್ಟು ದೂರದಲ್ಲಿದೆ. ಬೆಂಗಳೂರಿಗೆ ನೀರು ಹರಿದು ಹೋಗುವ ಜಾಗದಲ್ಲಿ ಸ್ಥಳವನ್ನು ಸೌಂದರ್ಯೀಕರಣಗೊಳಿಸಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೆಲವರಿಗೆ ಈ ವಿಚಾರಗಳು ತಿಳಿದಿಲ್ಲ. ಹೀಗಾಗಿ ಅಣೆಕಟ್ಟೆಗೆ ಹೆಚ್ಚುಕಮ್ಮಿ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರ ತಪ್ಪಲ್ಲ. ಅಣೆಕಟ್ಟು ವಿಚಾರದಲ್ಲಿ ನಮಗೂ ಜವಾಬ್ದಾರಿ ಇದೆ. ಈ ಕಾರ್ಯಕ್ರಮ ಕಾವೇರಿ ತಾಯಿಗೆ ಪ್ರಾರ್ಥಿಸುವ ಕಾರ್ಯಕ್ರಮ. ಕೊಡಗು, ಮಂಗಳೂರು, ಮೈಸೂರು, ಮಂಡ್ಯ ಸಂಸ್ಕೃತಿ ಈ ಕಾರ್ಯಕ್ರಮದಲ್ಲಿರಲಿದೆ. ಸುಮಾರು ೨ ಸಾವಿರ ಜನರಿಗೆ ನೇರ ಉದ್ಯೋಗ ಸಿಗಲಿದೆ ಎಂದು ವಿವರಿಸಿದರು.

ಮಂಡ್ಯ- ಮೈಸೂರಿನವರಿಗೆ ಉದ್ಯೋಗಕ್ಕೆ ಸೂಚನೆ:

ಈ ಉದ್ಯೋಗ ಕೇವಲ ಮಂಡ್ಯ, ಮೈಸೂರು ಭಾಗದವರಿಗೆ ಸಿಗಬೇಕು ಎಂದು ಸೂಚನೆ ನೀಡಲಾಗಿದೆ. ಸ್ಥಳೀಯ ಪುರೋಹಿತರು, ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಆದಿ ಚುಂಚನಗಿರಿ ಮಠದಲ್ಲಿ ಪುರೋಹಿತರಿಗೆ ತರಬೇತಿ ನೀಡಲಾಗುವುದು. ೩೦೦ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಕಾವೇರಿ ಹುಟ್ಟುವ ಕೊಡಗಿನಿಂದ ಕಾವೇರಿ ಸಮುದ್ರಕ್ಕೆ ಸೇರುವವರೆಗೂ ಎಷ್ಟು ಪ್ರದೇಶಗಳಲ್ಲಿ ವಿಭಿನ್ನ ಸಂಸ್ಕೃತಿ ಇದೆಯೋ ಅವುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಳಗೊಳ್ಳಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ೯೮ ಕೋಟಿ ರು. ಅಗತ್ಯವಿದೆಯೇ ಎಂಬ ಕುಮಾರಸ್ವಾಮಿ ಅವರ ಆಕ್ಷೇಪದ ಬಗ್ಗೆ ಕೇಳಿದಾಗ, ಮೈತ್ರಿ ಸರ್ಕಾರದಲ್ಲಿ ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ಮಾಡಲು ಅವರು ಸಮ್ಮತಿ ನೀಡಿದ್ದರು ಎಂದರು.

ಈ ಕಾರ್ಯಕ್ರಮಕ್ಕೆ ಸಂಸದರ ಒಪ್ಪಿಗೆ ಇದೆಯೇ ಎಂದು ಕೇಳಿದಾಗ, ಒಂದು ಪಕ್ಷದಲ್ಲಿ ಒಬ್ಬ ಬೆಳೆಯುತ್ತಿದ್ದಾನೆ ಎಂದರೆ ಅವನ ವಿರುದ್ಧ ಅಪಸ್ವರ ಬರುತ್ತದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ತಿಳಿಸಿದರು.

೧೦ ಸಾವಿರ ಜನಕ್ಕೆ ಕೂರಲು ವ್ಯವಸ್ಥೆ:

ಎಷ್ಟು ಪ್ರವಾಸಿಗರು ಬರುವ ಅಂದಾಜಿದೆ ಎಂದು ಕೇಳಿದಾಗ, ಸದ್ಯಕ್ಕೆ ವಾರಕ್ಕೆ ಮೂರು ದಿನ ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಇನ್ನು ಕಾರ್ಯಕ್ರಮದ ಬಳಿ ೧೦ ಸಾವಿರ ಜನರಿಗೆ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಸುಮಾರು ಶೇ.೩೦ರಷ್ಟು ಪಾವತಿ ಪ್ರವೇಶವಿರುತ್ತದೆ. ಶೇ..೭೦ರಷ್ಟು ಮಂದಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದ ವೇಳೆ ವಾಹನ ನಿಲುಗಡೆಗಾಗಿ ೭೦-೮೦ ಎಕರೆ ಜಾಗವನ್ನು ಮೀಸಲಿಡಲಾಗಿದೆ. ರಸ್ತೆಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದು ವಿವರಿಸಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಜರಿದ್ದರು.