ಅಕ್ಟೋಬರ್‌ನಲ್ಲಿ ಅದ್ಧೂರಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ

KannadaprabhaNewsNetwork | Published : Sep 3, 2024 1:37 AM

ಸಾರಾಂಶ

ಮೈಸೂರು ದಸರಾ ಮಾದರಿಯಲ್ಲೇ ಪ್ರತಿ ವರ್ಷ ಶ್ರೀರಂಗಪಟ್ಟಣ ದಸರಾವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬಹಳ ಅದ್ಧೂರಿ, ಸಂಪ್ರದಾಯಿಕವಾಗಿ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸೋಣ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ದಸರಾವನ್ನು ಅಕ್ಟೋಬರ್ ತಿಂಗಳಲ್ಲಿ ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ದಸರಾ- 2024 ಆಚರಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಿದರು.

ಮೈಸೂರು ದಸರಾ ಮಾದರಿಯಲ್ಲೇ ಪ್ರತಿ ವರ್ಷ ಶ್ರೀರಂಗಪಟ್ಟಣ ದಸರಾವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬಹಳ ಅದ್ಧೂರಿ, ಸಂಪ್ರದಾಯಿಕವಾಗಿ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸೋಣ ಎಂದರು.

ಅಕ್ಟೋಬರ್ 4 ರಿಂದ 6 ರವರೆಗೆ 3 ದಿನಗಳ ಕಾಲ ಅಥವಾ ಅಕ್ಟೋಬರ್ 4 ರಿಂದ 8 ರವರೆಗೆ 5 ದಿನಗಳ ಕಾಲ ದಸರಾ ಆಚರಿಸಬೇಕು ಎಂದು ಚರ್ಚಿಸಲಾಗಿದೆ. ಇದರಲ್ಲಿ ಎಷ್ಟು ದಿನ ಆಚರಣೆ ಮಾಡಬೇಕು ಎಂದು ಶೀಘ್ರವೇ ನಿರ್ಧರಿಸಲಾಗುವುದು ಎಂದರು.

ಈಗಾಗಲೇ ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧಿಸಿದಂತೆ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಮಿತಿ, ಆಹಾರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ವಸ್ತು ಪ್ರದರ್ಶನ ಸಮಿತಿ, ಸ್ವಚ್ಛತಾ ಮತ್ತು ನೈರ್ಮಲ್ಯ ಸಮಿತಿ, ಕ್ರೀಡಾ ಸಮಿತಿ, ಅಲಂಕಾರ ಸಮಿತಿ, ಹಣಕಾಸು ಸಮಿತಿ, ಆಹಾರ ಸಮಿತಿ ಒಳಗೊಂಡಂತೆ ಮುಂತಾದ ಸಮಿತಿ ರಚಿಸಲಾಗಿದೆ ಎಂದರು.

ಎಲ್ಲಾ ಸಮಿತಿಯು ತಮಗೆ ನೀಡಿರುವ ಜವಾಬ್ದಾರಿಗಳನ್ನು ವಿಳಂಬ ಮಾಡದೆ ಇಂದಿನಿಂದಲೇ ಯೋಜನೆ ಸಿದ್ಧಪಡಿಸಿಕೊಂಡು ಕೆಲಸ ಆರಂಭಿಸಬೇಕು. ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.

ಸಾಂಸ್ಕೃತಿಕ ಸಮಿತಿಯು ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಸಮಿತಿಯಲ್ಲಿ ಅನುಮೋದನೆಗೊಳ್ಳದಿರುವವರಿಗೆ ಸಾಂಸ್ಕೃತಿಕ ಪಾಲ್ಗೊಳ್ಳಲು ಅವಕಾಶವಿಲ್ಲ ಎಂಬ ನಿರ್ದೇಶನದಂತೆ ಕೆಲಸ ಮಾಡಿ ಎಂದರು.

ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವೇದಿಕೆ ಸಮಿತಿಯು ಬನ್ನಿ ಮಂಟಪದಲ್ಲಿ ಆಯೋಜಿಸುವ ಜಂಬೂಸವಾರಿ ಕಾರ್ಯಕ್ರಮಕ್ಕೂ ವೇದಿಕೆ ನಿರ್ಮಾಣ ಮಾಡಬೇಕು ಎಂದರು.

ಮಕ್ಕಳ ಚಲನಚಿತ್ರೋತ್ಸವ:

ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸಂಬಂಧಿಸಿದಂತೆ ಮಕ್ಕಳ ಚಲನಚಿತ್ರೋತ್ಸವ ಏರ್ಪಡಿಸಬೇಕು. ಮಕ್ಕಳಿಗೂ ಸಹ ಉತ್ತಮ ಸಂದೇಶ ನೀಡುವಂತಹ ಚಲನಚಿತ್ರಗಳು ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳಬೇಕು ಎಂದರು.

ಹಣಕಾಸು ಸಮಿತಿ ಕಾರ್ಯಕ್ರಮವು ಮುಗಿದ ಒಂದು ವಾರದೊಳಗೆ ಕಲಾವಿದರ ಸಂಭಾವನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನೀಡಬೇಕಾದ ಬಿಲ್‌ಗಳ ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸಬಾರದು ಎಂದರು.

ಮೆರವಣಿಗೆ ಸಮಿತಿಯು ಮೆರವಣಿಗೆ ಹೋಗುವ ಮಾರ್ಗದ ರೂಟ್ ಮ್ಯಾಪ್ ಸಿದ್ಧಪಡಿಸಬೇಕು. ಗುಂಡಿ ಬಿದ್ದ ರಸ್ತೆ ಸರಿಪಡಿಸಬೇಕು. ವಿದ್ಯುತ್ ತಂತಿಗಳು ಹಾದುಹೋಗಿರುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯಬೇಕು ಎಂದರು.

ವಸ್ತು ಪ್ರದರ್ಶನ ಸಮಿತಿಯಲ್ಲಿ ಕಳೆದ ವರ್ಷ ಕಾರ್ಯ ನಿರ್ವಹಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನೇ ಈ ವರ್ಷವೂ ನೇಮಕ ಮಾಡಲಾಗಿದೆ. ಆದಷ್ಟು ಬೇಗ ನಿಮಗೆ ನೀಡಿರುವ ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಿಸಬೇಕು. ವಸ್ತು ಪ್ರದರ್ಶನದಲ್ಲಿ ಒಟ್ಟು 200 ಮಳಿಗೆಗಳನ್ನು ಹಾಕಲಾಗುವುದು. ಅದರಲ್ಲಿ 50 ಮಳಿಗೆಗಳು ಆಹಾರಕ್ಕೆ ಸೀಮಿತವಾಗಿದೆ. ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಆಯಾ ಜಿಲ್ಲೆಯ ವಿಶೇಷ ಖಾದ್ಯಗಳು, ತಿಂಡಿ ತಿನಿಸು ತಯಾರಿಸಬೇಕು. ಇನ್ನುಳಿದ 150 ಮಳಿಗೆಗಳನ್ನು ವಿಭಿನ್ನ ರೀತಿಯ ವಸ್ತು ಪ್ರದರ್ಶನಕ್ಕೆ ಮೀಸಲಿಡಿ. ಆಹಾರ ಮಳಿಗೆಗಳ ಬಳಿ ಕಡ್ಡಾಯವಾಗಿ ಕಸದ ಬುಟ್ಟಿಗಳನ್ನು ಇಡಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಮಿತಿಯು ಆರೋಗ್ಯ ಸೇವೆಗೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿಯು ಪ್ರತಿ ಮಳಿಗೆಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯ ಎಂದರು.

ನಗರ ವಿದ್ಯುತ್ ಮತ್ತು ಅಲಂಕಾರ ಸಮಿತಿ ಉತ್ತಮ ಮಟ್ಟದ ವಿದ್ಯುತ್ ದೀಪಾಲಂಕಾರಕ್ಕೆ ಆದ್ಯತೆ ನೀಡಬೇಕು. ಕ್ರೀಡಾ ಮತ್ತು ಯೋಗ ದಸರಾ ಸಮಿತಿಯು ಯಾವ ಆಟಗಳನ್ನು ಆಡಿಸಬೇಕು ಎಂದು ವರದಿ ತಯಾರಿಸಬೇಕು. ದಸರಾದಲ್ಲಿ ನಡೆಯುವ ಕವಿಗೋಷ್ಠಿ, ಮಕ್ಕಳ ಚಲನಚಿತ್ರೋತ್ಸವ, ಯೋಗ, ಮ್ಯಾರಥಾನ್ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸುವಂತೆ ಸೂಚಿಸಿದರು.

ಸಭೆಯಲ್ಲಿ ಡಿವೈಎಸ್ಪಿ ಪಿ ಮುರಳಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article