404 ಕೊಠಡಿ ದುರಸ್ತಿಗೆ ಬೇಕಿದೆ ₹579.40 ಲಕ್ಷ ಅನುದಾನ

KannadaprabhaNewsNetwork |  
Published : Jun 01, 2024, 12:48 AM IST

ಸಾರಾಂಶ

ಸರ್ಕಾರ ಈಗಾಗಲೇ ₹ 275.56 ಲಕ್ಷ ಅನುದಾನವನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಬಿಡುಗಡೆ ಮಾಡಿದೆ

ಶಿವಕುಮಾರ ಕುಷ್ಟಗಿ ಗದಗ

ಜಿಲ್ಲೆಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾಗಿವೆ. ಆದರೆ ಹಲವಾರು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕೊಠಡಿಗಳು ಮಾತ್ರ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕೆಳುತ್ತಿದ್ದಾರೆ.

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಶತಮಾನ ಕಂಡಿರುವ ನೂರಾರು ಶಾಲೆಗಳಿದ್ದು, ಅವುಗಳಲ್ಲಿನ ಕೆಲವು ಕೊಠಡಿಗಳು ದುರಸ್ತಿಗೆ ಕಾಯುತ್ತಿದ್ದರೆ, ಇನ್ನು ಕೆಲವೆಡೆ ಕೊಠಡಿಗಳನ್ನು ಸಂಪೂರ್ಣ ತೆರವು ಮಾಡಿ ಮರು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ.

404 ಕೊಠಡಿಗಳು ಶಿಥಿಲ: ಜಿಲ್ಲೆಯ 130 ಶಾಲೆಗಳ ವ್ಯಾಪ್ತಿಯಲ್ಲಿನ 404 ಕೊಠಡಿಗಳು ತರಗತಿ ನಡೆಸಲು ಯೋಗ್ಯವಾಗಿಲ್ಲ, ಅವುಗಳನ್ನು ದುರಸ್ತಿ ಮಾಡಿಸಲು ಒಟ್ಟು ₹ 579.40 ಲಕ್ಷ ಅನುದಾನದ ಅವಶ್ಯಕತೆ ಇದ್ದು, ಈ ಕುರಿತು ಗದಗ ಜಿಪಂನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಶೇಷ ನಿರ್ಣಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಗದಗ ಜಿಲ್ಲೆಯ ವಿವಿಧ ಶಾಲಾ ಕೊಠಡಿಗಳ ದುರಸ್ತಿಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಆಧಾರದಲ್ಲಿ ಸರ್ಕಾರ ಈಗಾಗಲೇ ₹ 275.56 ಲಕ್ಷ ಅನುದಾನವನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಬಿಡುಗಡೆ ಮಾಡಿದೆ. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಇದುವರೆಗೂ ನಿರ್ಮಾಣಕ್ಕೆ ಚಾಲನೆ ದೊರೆತಿಲ್ಲ.

ಸಣ್ಣ ಪುಟ್ಟ ರಿಪೇರಿ: ಜಿಲ್ಲೆಯಲ್ಲಿ ಒಟ್ಟು 616 ಪ್ರಾಥಮಿಕ ಹಾಗೂ 115 ಸರ್ಕಾರಿ ಪ್ರೌಢಶಾಲೆಗಳಿವೆ. ಜಿಲ್ಲೆಯ ಸರ್ಕಾರಿ ಶಾಲೆ ಕೊಠಡಿಗಳ ದುರಸ್ತಿಗೆ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ₹ 275.56 ಲಕ್ಷ ಅನುದಾನವನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ನೀಡಿ ಕಾಮಗಾರಿಯ ಹೊಣೆ ವಹಿಸಿದೆ. ಕೆಲ ಶಾಲೆಗಳಲ್ಲಿ ಸಣ್ಣಪುಟ್ಟ ರಿಪೇರಿ ಕಾರ್ಯವೂ ಆರಂಭವಾಗಿದೆ. ಆದರೆ ಟೆಂಡರ್ ಕರೆದು ಕೈಗೊಳ್ಳಬೇಕಾದ ದುರಸ್ತಿ ಕಾಮಗಾರಿಗಳು ಮಾತ್ರ ಇನ್ನೂ ಆರಂಭವಾಗಿಲ್ಲ.

ಜಿಲ್ಲೆಯಾದ್ಯಂತ 2019, 2020 ನೇ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದ ಶಾಲಾ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದೆ. ಅದರಲ್ಲಿಯೂ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳ ಅಕ್ಕಪಕ್ಕದ ಗ್ರಾಮಗಳ ವ್ಯಾಪ್ತಿಯಲ್ಲಿನ ಶಾಲಾ ಕೊಠಡಿಗಳು ಹಾಗೂ ಶತಮಾನ ಪೂರೈಸಿರುವ ಶಾಲಾ ಕೊಠಡಿಗಳಿಗೆ ವ್ಯಾಪಕ ಹಾನಿಯಾಗಿದ್ದು, ಅವುಗಳ ದುರಸ್ತಿಗೆ ಜಿಲ್ಲಾಡಳಿತ ಹಲವಾರು ವರ್ಷಗಳಿಂದ ಪ್ರಯತ್ನಿಸಿದರೂ ಇದುವರೆಗೂ ಸಾಕಾರವಾಗಿಲ್ಲ.

ಅಡ್ಡಿಯಾದ ನೀತಿ ಸಂಹಿತೆ: ಮಾರ್ಚ್ ಅಂತ್ಯದೊಳಗೆ ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಕಾಮಗಾರಿ ವಿಳಂಬವಾಗಿದೆ. ಮತ್ತೊಂದೆಡೆ ಟೆಂಡರ್ ಕರೆಯಲೂ ನೀತಿ ಸಂಹಿತೆ ಅಡ್ಡಿಯಾಗಿರುವುದರಿಂದ ಬರುವ ಜೂ. 7ರ ವರೆಗೂ ಕೆಲ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಕೂಡಾ ವಾಸ್ತವ ಅಂಶವಾಗಿದೆ.

ಜಿಲ್ಲೆಯ ಶಾಲಾ ಕೊಠಡಿಗಳ ಸ್ಥಿತಿಗತಿ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗಳ ಜತೆಗೆ ಇನ್ನಿತರ ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ತೀವ್ರ ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಯಾವುದೇ ತರಗತಿ ನಡೆಸುತ್ತಿಲ್ಲ. ಜೂನ್ ಅಂತ್ಯದ ಒಳಗಾಗಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಡಿಡಿಪಿಐ ಎಂ.ಎ.ರಡ್ಡೇರ ತಿಳಿಸಿದ್ದಾರೆ.

ಬಾಕ್ಸ್

ತಾಲೂಕು.ಶಾಲೆ ಕೊಠಡಿ ನಿಗದಿಯಾದ ಅನುದಾನ. ಬಿಡುಗಡೆಯಾದ ಅನುದಾನ

ಗದಗ ಗ್ರಾಮೀಣ.1. 5. .₹101.10 ಲಕ್ಷ. ₹9.64 ಲಕ್ಷ

ನರಗುಂದ 2. 6.₹101.10 ಲಕ್ಷ.₹40.64 ಲಕ್ಷ

ರೋಣ. 3. 8.₹101.10 ಲಕ್ಷ. ₹40.64 ಲಕ್ಷ

ಮುಂಡರಗಿ 14. 6.₹101.10 ಲಕ್ಷ.₹9.64 ಲಕ್ಷ

ಶಿರಹಟ್ಟಿ 39.13.₹175.00 ಲಕ್ಷ.₹175.00 ಲಕ್ಷ

ಒಟ್ಟು 130.40.₹579.40 ಲಕ್ಷ.₹275.56 ಲಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ