ಹಿಂದೂ ಮಲಯಾಳಿ ಸಮಾಜದಿಂದ ಸಾಮರಸ್ಯದ ಜೀವನ: ವಿ.ಎಂ. ವಿಜಯ

KannadaprabhaNewsNetwork |  
Published : Nov 14, 2023, 01:15 AM ISTUpdated : Nov 14, 2023, 01:16 AM IST
ಸುಂಟಿ 13: ಚಿತ್ರ.: 1. ಕಾನ್‌ಬೈಲ್ ಸರ್ಕಾರಿ ಮಾದರಿ ಶಾಲೆಯಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಸಮಾರಂಭ ಉದ್ಘಾಟಿಸುತ್ತಿರುವುದು. ಸುಂಟಿ 2: ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಮಹಿಳೆಯರು ಪುಷ್ಪ ರಂಗೋಲಿ ಸ್ಪರ್ಧೆಯಲ್ಲಿ ನಿರ್ಮಿಸಿರುವ ಪುಷ್ಪಾ ರಂಗೋಲಿ. ಸುಂಟಿ3: ಮೊದಲಿಗೆ ಮೆರವಣಿಗೆಯ ಉದ್ಘಾಟನೆಯನ್ನು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯೆ ರಾಧಮಣಿ ನೀಡುತ್ತಿರುವುದು. | Kannada Prabha

ಸಾರಾಂಶ

ಕಾನ್‌ಬೈಲ್ ಸರ್ಕಾರಿ ಮಾದರಿ ಶಾಲೆಯಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಸಮಾರಂಭ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಒಂದು ಎಂಬ ಸಮಾನತೆ ಸೂತ್ರದಡಿಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಸಾಮರಸ್ಯ ಬದುಕನ್ನು ಬದುಕುವಲ್ಲಿ ಕೊಡಗಿನಲ್ಲಿ ಹಿಂದೂ ಮಲಯಾಳಿ ಸಮಾಜ ಅಗ್ರಸ್ಥಾನದಲ್ಲಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಮಲಯಾಳಿ ಸಮಾಜ ಅಧ್ಯಕ್ಷ ವಿ.ಎಂ.ವಿಜಯ ಹೇಳಿದರು.ಭಾನುವಾರ ಕಾನ್‌ಬೈಲ್ ಸರ್ಕಾರಿ ಮಾದರಿ ಶಾಲೆಯಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 14 ಕಡೆಗಳಲ್ಲಿ ಹಿಂದೂ ಮಲಯಾಳಿ ಸಮಾಜದ ಶಾಖೆಗಳು ಇದ್ದು, ಕೂಲಿ ಕಾರ್ಮಿಕರಿಂದ ಹಿಡಿದು ಅತ್ಯಲ್ಪ ಸಂಖ್ಯೆಯಲ್ಲಿ ಶ್ರೀಮಂತರು ನಮ್ಮ ಸಮಾಜದಲ್ಲಿದ್ದಾರೆ. ಆಚಾರ ವಿಚಾರಗಳು ಹಬ್ಬ ಹರಿದಿನಗಳನ್ನು ನಾವೆಲ್ಲರೂ ಒಂದಾಗಿ ಆಚರಿಸುತ್ತಿರುವುದು ವೈಶಿಷ್ಟ್ಯ ಪೂರ್ಣ ಅಂಶವೆಂದು ಅವರು ಬಣ್ಣಿಸಿದರು.

ಸಾಮಾನ್ಯವಾಗಿ ಹಬ್ಬ ಹರಿದಿನಗಳಿಗೆ ಶುಭಸಮಾರಂಭಗಳಿಗೆ ನಾವೆಲ್ಲರೂ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ. ಆದರೆ ಯಾರಿಗೂ ಸಾವು ಯಾವಾಗ ಸಂಭವಿಸುತ್ತದೆ ಎಂಬುದು ಗೊತ್ತಿರುವುದಿಲ್ಲ. ಇಲ್ಲಿನ ಸಮಾಜದ ಸದಸ್ಯರು ಸಮುದಾಯದಲ್ಲಿ ಸಾವು ಸಂಭವಿಸಿದಾಗ ಹತ್ತು ಸಾವಿರ ರು. ವರೆಗೆ ಧನಸಹಾಯ ಮಾಡುತ್ತಿರುವುದು ವಿಶೇಷವಾಗಿದೆ ಎಂದು ವಿ.ಎಂ.ವಿಜಯ ಶ್ಲಾಘಿಸಿದರು.

ಮಕ್ಕಳಿಗೆ ಪಿಯುಸಿ ಅಥವಾ ಪದವಿ ವಿದ್ಯಾಭ್ಯಾಸವನ್ನು ನೀಡಿ ಮೊಟಕುಗೊಳಿಸಬೇಡಿ, ಉನ್ನತ ಶಿಕ್ಷಣ ಕೊಡಿಸಲು ಮೊದಲ ಆದ್ಯತೆ ನೀಡಿ ಅದರಿಂದ ಸಮಾಜದ ಏಳಿಗೆ ಸುಲಭ ಸಾಧ್ಯವಾಗುತ್ತದೆ ಎಂದು ಕರೆ ನೀಡಿದ ಅವರು, ಮಕ್ಕಳಿಗೆ ಸಂಸ್ಕಾರ ಕಲಿಸಿ, ಮೊಬೈಲ್ ಗೀಳಿನಿಂದ ದೂರವಿಡಿ ಎಂದು ಸಲಹೆ ನೀಡಿದರು.

ನಾಕೂರು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಹಿಂದೂ ಮಲಯಾಳಿ ಸಂಘದವರು ಅವರ ಸಂಸ್ಕೃತಿ ಸಂಪ್ರಾದಾಯದ ವೈಭವನ್ನು ಅನಾವರಣಗೊಳಿಸಿದ್ದಾರೆ. ಇಂದು ಎಲ್ಲರೂ ಮೊಬೈಲ್ ದಾಸರಾಗಿದ್ದು, ಅದನ್ನು ಬಿಟ್ಟು ಧಾರ್ಮಿಕ ಆಚರಣೆ ಬಗ್ಗೆ ಹೆಚ್ಚು ಒಲವು ತೋರಬೇಕೆಂದರು.

ಭಾನುವಾರ ಬೆಳಗ್ಗೆ 9 ಗಂಟೆಗೆ ಕಲ್ಲೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಸದಸ್ಯೆ ರಾಧಾಮಣಿ ಹಳದಿ ಧ್ವಜವನ್ನು ಹಿಡಿದು ಚಾಲನೆ ನೀಡಿದರು. ಚಂಡೆ ಮೇಳದೊಂದಿಗೆ ಮಹಿಳೆಯರು ಕೇರಳ ಸೀರೆ, ಪುರುಷರು ಬಿಳಿ ಪಂಚೆ ಶರ್ಟ್ ಧರಿಸಿದ್ದರು. ತಾಲ ಹಿಡಿದು ಮಾವೇಲಿ ವೇಷಧಾರಿಯೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾನ್ ಬೈಲ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದರು.ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಮತ್ತು ಪ್ರಭಾರ ಬಿಇಓ ಎಂ.ವಿ.ಮಂಜೇಶ್ ಎಂ.ಎ. ಮಾತನಾಡಿ, ಮಲಯಾಳಿ ಸಮಾಜದವರು ಜೀವನೋಪಾಯಕ್ಕಾಗಿ ದೇಶವ್ಯಾಪಿ ನೆಲೆಸಿದ್ದಾರೆ. ಆದರೆ ತಾವು ಇದ್ದಲ್ಲೇ ತಮ್ಮ ಆಚಾರ ವಿಚಾರಗಳನ್ನು ಮರೆಯದೆ ಆಚರಿಸುತ್ತಿದ್ದಾರೆ. ಅವರ ಶ್ರದ್ಧೆ ದೃಢತೆ ಮತ್ತು ಶ್ರಮಜೀವನದಿಂದಾಗಿ ಇಂದು ಚಂದ್ರಲೋಕದ ವರೆಗೂ ಅವರೇ ಮೊದಲು ತಲುಪುತ್ತಾರೆ ಎಂಬ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ ಎಂದು ಹೇಳಿದರು.

ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ವಸಂತ್‌ ಕುಮಾರ್ ಮಾತನಾಡಿ, ಹಿಂದೂ ಮಲಯಾಳಿ ಸಮುದಾಯ ಎಲ್ಲ ಜಾತಿ ಸಮುದಾಯದ ಜನರೊಂದಿಗೆ ಒಂದಾಗಿ ಹೋಗುವವರು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಜಿ.ರಮೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ರಂಜನಿ ಕುಂಞಕೃಷ್ಣಇದ್ದರು.

ನಾಕೂರು ಶಿರಂಗಾಲ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಕೆ.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.

ಸೋಮವಾರಪೇಟೆ ತಾಲೂಕು ಮಲಯಾಳಿ ಸಮಾಜ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಇ.ಸತೀಶ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ, ನಾಕೂರು ಕೊಡವ ಕೂಟ ಉಪಾಧ್ಯಕ್ಷ ಕೆ.ಎ.ಕಾರ್ಯಪ್ಪ, ನಾಕೂರು ಶಿರಂಗಾಲ ಗೌಡ ಸಂಘ ಅಧ್ಯಕ್ಷ ಎಂ.ಎಂ.ಕಾರ್ಯಪ್ಪ, ಮಳೂರು ಬೆಳ್ಳರಿಕಮ್ಮ ದೇವಸ್ಥಾನ ಅಧ್ಯಕ್ಷ ಕೆ.ಪಿ.ಬೋಪಯ್ಯ, ಬೆಳ್ಳರಿಕಮ್ಮ ದೇವಸ್ಥಾನ ಕಾರ್ಯದರ್ಶಿ ಎಂ.ಎನ್.ಲೋಹಿತಾಶ್ವ, ನಾಕೂರು ಗಂಗಾಧರೇಶ್ವ ದೇವಸ್ಥಾನ ಅಧ್ಯಕ್ಷ ಎಲ್.ಎಂ.ರುದ್ರಪ್ಪ, ನಾಕೂರು ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಎ.ಬಿ.ಚಂದ್ರಶೇಖರ್, ಸುಂಟಿಕೊಪ್ಪ ಹೋಬಳಿ ಜೈಜವಾನ್ ಮಾಜಿ ಸೈನಿಕರ ಟ್ರಸ್ಟ್ ಅಧ್ಯಕ್ಷ ಪಿ.ಜಿ.ಶ್ರೀನಿವಾಸ್, ಪಂಚಾಯಿತಿ ಮಾಜಿ ಕಾರ್ಯದರ್ಶಿ ಸುರೇಶ್, ಗ್ರಾ.ಪಂ. ಮಾಜಿ ಸದಸ್ಯ ಚೋಮಣಿ, ಕಾಫಿ ಬೆಳೆಗಾರರಾದ ಕರವಂಡ ಕುಂಞಯಪ್ಪ, ಕುಶಾಲನಗರ ಕೇಂದ್ರ ಪೊಲೀಸ್ ಸಜಿ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಕಿಟ್ಟಣರೈ ಮತ್ತಿತರರು ಇದ್ದರು.ಓಣಂ ಹಬ್ಬದ ದಿನ ಮನೆಗಳಲ್ಲಿ ವಿಶೇಷ ರೀತಿಯ ಭೋಜನವನ್ನು ತಯಾರಿಸಲಾಗುತ್ತಿದ್ದು, ವಿವಿಧ ಬಗೆಯ ಭೋಜನವನ್ನು ನೆರೆದಿದ್ದ ಜನರಿಗೆ ನೀಡಲಾಯಿತು.

ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಮಹಿಳೆಯರು ಪುಷ್ಪ ರಂಗೋಲಿ ಸ್ಪರ್ಧೆಯಲ್ಲಿ ನಿರ್ಮಿಸಿದ್ದ ಪುಷ್ಪ ರಂಗೋಲಿಯು ನೆರೆದಿದ್ದ ಜನರ ಮನತಣ್ಣಿಸಿತು.

ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಬಾಂಧವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ