ದೊಡ್ಡಬಳ್ಳಾಪುರ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ದೊಡ್ಡಬಳ್ಳಾಪುರ ಪ್ರಖಂಡದ ನೇತೃತ್ವದಲ್ಲಿ ಭಾನುವಾರ ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಿತು.
ಇದೇ ಮೊದಲ ಬಾರಿಗೆ ಕೊಂಗಾಡಿಯಪ್ಪ ಬಸ್ನಿಲ್ದಾಣದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಶ್ರೀರಾಮ ಶೋಭಾ ಯಾತ್ರೆಯ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ನೆರೆದಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ದೇವಾನು ದೇವರೆಗಳ ಮೂರ್ತಿಗಳ ಮೇಲೆ ರಾಶಿಗಟ್ಟಲೆ ಹೂಗಳನ್ನು ಸುರಿಯಲಾಯಿತು.
ಇಲ್ಲಿನ ಪಿಎಲ್ಡಿ ಬ್ಯಾಂಕ್ ಮುಂಭಾಗದಿಂದ ಮಧ್ಯಾಹ್ನ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಭಾರತ ಮಾತೆ, ಭಗವಾನ್ ಶ್ರೀರಾಮ, ಈಶ್ವರ, ವೀರಹನುಮಾನ್, ಶಿವಾಜಿ ಮಹಾರಾಜ್, ಇಮ್ಮಡಿ ಪುಲಿಕೇಶಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಕರ್ಷಕ ಪ್ರತಿಮೆಗಳು ಮತ್ತು ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಉದ್ಘೋಷದೊಂದಿಗೆ ಹಿಂದೂ ಕಾರ್ಯಕರ್ತರು ಭಕ್ತಿ ಭಾವ, ರಾಷ್ಟ್ರ ಭಕ್ತಿ ಮೆರೆದರು. ಶೋಭಾ ಯಾತ್ರೆಯಲ್ಲಿ ಸಾವಿರಾರು ಯುವಕರು ಶ್ರೀ ರಾಮನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕ್ಷೇತ್ರೀಯ ಬಜರಂಗ ದಳ ಸಂಯೋಜಕ ಕುಮಾರಸ್ವಾಮಿ ಮಾತನಾಡಿ, ಹಿಂದುತ್ವದ ಚಿಂತನೆಗಳ ಮೂಲಕ ಸಮಾಜ ಒಗ್ಗೂಡಬೇಕು. ಹಿಂದುತ್ವದ ಧೀಶಕ್ತಿ ಎಲ್ಲರಿಗೂ ಅರ್ಥವಾಗುವಂತೆ ಮಾಡಬೇಕು. ರಾಷ್ಟ್ರೀಯ ಭಾವನೆಯನ್ನು ಪ್ರಚೋದಿಸಿ ಉತ್ತಮ ಭವಿಷ್ಯವನ್ನು ಸಾಕಾರಗೊಳಿಸುವುದು ಅತ್ಯಗತ್ಯ ಎಂದರು.
ಶೋಭಾಯಾತ್ರೆ ಬಳಿಕ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಪ್ರದರ್ಶನ, ಬೃಹತ್ ರಾವಣ ಪ್ರತಿಕೃತಿ ದಹನ, ಆಕರ್ಷಕ ಸಿಡಿ ಮದ್ದು ಪ್ರದರ್ಶನ ಕಾರ್ಯಕ್ರಮ ನಡೆಯಿತು. 3 ದಿನಗಳಿಂದ ನಡೆದ ಶ್ರೀರಾಮೋತ್ಸವ ಇದೇ ವೇಳೆ ಸಮಾಪನಗೊಂಡಿತು.
ಬೃಹತ್ ಶ್ರೀರಾಮ ಶೋಭಾಯಾತ್ರೆ ತಾಲೂಕು ಕಚೇರಿ ರಸ್ತೆ, ವಿಠೋಬಾ ರಸ್ತೆ, ಸೌಂದರ್ಯಮಹಲ್ ವೃತ್ತ, ಬಸ್ನಿಲ್ದಾಣ, ಕೋಟೆ ರಸ್ತೆ, ಚೌಡೇಶ್ವರಿ ಗುಡಿ ಬೀದಿ, ಕೊಂಗಾಡಿಯಪ್ಪ ಮುಖ್ಯರಸ್ತೆ, ಮುಕ್ತಾಂಬಿಕಾ ರಸ್ತೆ, ಕುಚ್ಚಪ್ಪನಪೇಟೆ, ಅ.ನ.ಕೃ ರಸ್ತೆ, ಇಸ್ಲಾಂಪುರ, ಮುಗುವಾಳಪ್ಪ ವೃತ್ತ, ತಾಲೂಕು ಕಚೇರಿ ವೃತ್ತದ ಮೂಲಕ ಭಗತ್ಸಿಂಗ್ ಕ್ರೀಡಾಂಗಣ ತಲುಪಿತು. ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು.(ಒಂದು ಫೋಟೊ ಪ್ಯಾನಲ್ನಲ್ಲಿ ಬಳಸಿ)
29ಕೆಡಿಬಿಪಿ7- ದೊಡ್ಡಬಳ್ಳಾಪುರದಲ್ಲಿ ಶ್ರೀರಾಮ ಶೋಭಾಯಾತ್ರೆ, ಕೇಸರಿ ಹಬ್ಬದ ಸಂಭ್ರಮ.
29ಕೆಡಿಬಿಪಿ8- ದೊಡ್ಡಬಳ್ಳಾಪುರದ ಶ್ರೀರಾಮ ಶೋಭಾ ಯಾತ್ರೆಯಲ್ಲಿ ಗಮನ ಸೆಳೆದ ಶ್ರೀರಾಮ, ಹನುಮ ಮತ್ತು ಈಶ್ವರ ದೇವರುಗಳ ಬೃಹತ್ ಪ್ರತಿಮೆಗಳು.