ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದ ಜನರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆವರಣದಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು ಬಸವ ಜಯಂತಿ ಆಚರಿಸುವ ಮೂಲಕ ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿದರು.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೆಲ ಕಾಲ ಧರಣಿ ನಡೆಸಿ ಬಸವ ಜಯಂತಿ ಸಂಬಂಧ ಪೂರ್ವಭಾವಿ ಸಭೆ ಕರೆಯದೆ ಸಮುದಾಯದ ಮುಖಂಡರನ್ನು ಅವಮಾನಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಸಿ.ಗೌರಿಶಂಕರ ಆರೋಪಿಸಿದರು.ಕೇವಲ ಇಂದು ನಡೆದ ಜಯಂತಿ ಮಾತ್ರವಲ್ಲದೇ, ಈ ಹಿಂದೆ ನಡೆದ ಜಯಂತಿಯ ಪೂರ್ವಭಾವಿ ಸಭೆಗಳಿಗೂ ಸಹ ಸಮುದಾಯದ ಜನರನ್ನು ಸಭೆಗೆ ಆಹ್ವಾನಿಸದೆ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ನಂತರ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಸತ್ತಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಸೇರಿದಂತೆ ಹಲವು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.
ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮುದಾಯದವರು 25 ಸಾವಿರ ಜನಸಂಖ್ಯೆ ಇದ್ದಾರೆ. ಆದರೆ, ತಾಲೂಕು ಆಡಳಿತ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು. ನಂತರ ತಹಸೀಲ್ದಾರ್ ಸತ್ತಿಗೇರಿ ಅವರು ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಂಜುನಾಥ್, ವೀರಶೈವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್, ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಿ.ರಾಜಶೇಖರ್, ಶರಣರ ಸಂಘದ ವೇದಿಕೆ ಕೆ.ಕೆ.ಹಳ್ಳಿ ನಂದೀಶ್, ಮುಖಂಡರಾದ ಎಚ್.ಪಿ.ಸ್ವಾಮಿ, ವೀರಭದ್ರಸ್ವಾಮಿ, ತ್ರಿವೇಣಿ, ಕವಿತಾ, ರಶ್ಮಿ, ಸಿದ್ದಮ್ಮ, ಬಸವರಾಜು, ಮಹದೇವ, ಸ್ವಾಮಿ ಇದ್ದರು.