ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡ ಗಾಣಿಗ ಸಮುದಾಯ

KannadaprabhaNewsNetwork |  
Published : Jun 10, 2024, 12:47 AM IST
ಕೂಡ್ಲಿಗಿ  ತಾಲೂಕಿನ ಕಾನಹೊಸಹಳ್ಳಿಯ ಗಾಣಿಗ ಸಮುದಾಯ ಭವನದಲ್ಲಿ ಅಖಿಲ ಭಾರತ ಗಾಣಿಗರ ಸಂಘದ ಕೂಡ್ಲಿಗಿ  ತಾಲೂಕು ಘಟಕದಿಂದ  ಆಯೋಜಿಸಿದ್ದ  ವನಶ್ರೀ  ಸಂಸ್ಥಾನಮಠದ  ಶ್ರೀ ಜಯದೇವ ಜಗದ್ಗುರು ಪುಣ್ಯಸ್ಮರಣೆ ಹಾಗೂ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ವಿಜಯಪುರ ಗಾಣಿಗ ಸಮುದಾಯದ ವನಶ್ರೀ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಜಯಬಸವ ಕುಮಾರ ಸ್ವಾಮೀಜಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.   | Kannada Prabha

ಸಾರಾಂಶ

ಗಾಣಿಗ ಸಮುದಾಯ ಜಾತಿಯಿಂದ ಗುರುತಿಸಿಕೊಂಡಿಲ್ಲ. ಬದಲಾಗಿ ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ.

ಕೂಡ್ಲಿಗಿ: ಗಾಣಿಗ ಸಮುದಾಯ ಜಾತಿಯಿಂದ ಗುರುತಿಸಿಕೊಂಡಿಲ್ಲ. ಬದಲಾಗಿ ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದು ವಿಜಯಪುರ ಗಾಣಿಗ ಸಮುದಾಯದ ವನಶ್ರೀ ಸಂಸ್ಥಾನದ ಪೀಠಾಧ್ಯಕ್ಷ ಡಾ.ಜಯಬಸವ ಕುಮಾರ ಸ್ವಾಮೀಜಿ ತಿಳಿಸಿದರು.

ಅವರು ಶನಿವಾರ ತಾಲೂಕಿನ ಕಾನಹೊಸಹಳ್ಳಿಯ ಗಾಣಿಗ ಸಮುದಾಯ ಭವನದಲ್ಲಿ ಅಖಿಲ ಭಾರತ ಗಾಣಿಗರ ಸಂಘದ ಕೂಡ್ಲಿಗಿ ತಾಲೂಕು ಘಟಕದಿಂದ ಆಯೋಜಿಸಿದ್ದ ವನಶ್ರೀ ಸಂಸ್ಥಾನಮಠದ ಶ್ರೀ ಜಯದೇವ ಜಗದ್ಗುರು ಪುಣ್ಯಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದುಡಿಯುವ ವ್ಯಕ್ತಿಗಳನ್ನು ದೇವರು ಎಂದು ಕರೆದ ಬಸವಣ್ಣ ನಮಗೆ ದೊಡ್ಡವರಾಗಿ ಕಾಣುತ್ತಾರೆ. ಸಮಾಜದಲ್ಲಿ ದುಡಿಯದೇ ಇರುವವರು ಶ್ರೇಷ್ಠ, ದುಡಿಯುವವರು ಕನಿಷ್ಠ ಎಂಬುದನ್ನು ತೊಡೆದು ಹಾಕಿದವರು ಬಸವಣ್ಣನವರು ಎಂದರು.

ಮನೆಯಲ್ಲಿ ಕೂಡಿ ಬಾಳುವ ಸಂಸ್ಕೃತಿಯಿಂದ ವಿಮುಖರಾಗಿರುವುದು ನಮ್ಮಲ್ಲಿರುವ ಅಜ್ಞಾನವೇ ಕಾರಣ. ತಮ್ಮ ಮಕ್ಕಳಿಗೆ ಆಸಕ್ತಿಯಂತೆ ಶಿಕ್ಷಣ ಕೊಡಿಸಿ, ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿದ್ದ ಸಂಬಂಧಗಳ ಮೌಲ್ಯಗಳು ಇಂದು ನಾಟಕೀಯವಾಗುತ್ತಿರುವುದು ದುರಂತವೇ ಸರಿ. ಇಂದು ಹಣದ ಹಿಂದೆ ಜಗುತ್ತು ಓಡುತ್ತಿದೆ. ಈ ಮಾಯೆಯಲ್ಲಿ ತಂದೆ, ತಾಯಿ, ಮಕ್ಕಳ ಪ್ರೀತಿ, ಬಾಂಧವ್ಯ ಮರೆಯಾಗುತ್ತಿದೆ. ಇಳಿವಯಸ್ಸಿನಲ್ಲಿ ಮಕ್ಕಳು ಸಹ ಜೊತೆಯಲ್ಲಿ ಇಲ್ಲದಿರುವುದು ಯಾವ ಸಾಧನೆ ಮಾಡಿದಂತೆ? ಇದನ್ನು ಪೋಷಕರು, ಯುವಕರು ಆತ್ಮವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ಕೂಡ್ಲಿಗಿ ತಾಲೂಕು ಗಾಣಿಗರ ಸಂಘದ ಸಹ ಕಾರ್ಯದರ್ಶಿ ಎ.ಎಸ್. ಕೊಟ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೯ರಲ್ಲಿ ಸಂಘವನ್ನು ಸ್ಥಾಪಿಸಿದ್ದು, ಈವರೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ಗಾಣಿಗ ಸಮುದಾಯದ ಮುಖಂಡರಾದ ಹಾರಕಬಾವಿ ಎಸ್.ಶೇಖರಪ್ಪ, ಮಹದೇವಪುರ ದಿನ್ನೆ ಮಲ್ಲಿಕಾರ್ಜುನ, ಜೆ.ಸಿ. ಧನಂಜಯ, ಚಿತ್ರದುರ್ಗ ಸೈಟ್ ಬಾಬಣ್ಣ, ಟಿ.ರೇಚಣ್ಣ, ಯಜಮಾನಪ್ಪ, ಹುಲಿಕೆರೆ ಮಲ್ಲಪ್ಪ, ಬಣವಿಕಲ್ಲು ಕೆ.ಬಸವರಾಜ, ನಿವೃತ್ತ ಶಿಕ್ಷಕ ಕೊಟ್ರಪ್ಪ, ಚಿರತಗುಂಡು ಈಶ್ವರಪ್ಪ, ಹಾರಕಬಾವಿ ಕೊಟ್ರೇಶ್, ಕೆ.ಸುಭಾಶ್ಚಂದ್ರ, ಆಲೂರು ಕೆ.ಗುರುಮೂರ್ತಿ, ಹರ್ಷ ಮೆಡಿಕಲ್ಸ್ ಮಂಜುನಾಥ ಉಪಸ್ಥಿತರಿದ್ದರು.

ಎಸ್.ಕೆ. ಕೀರ್ತಿ, ಎಸ್.ಕೆ. ಸ್ಫೂರ್ತಿ ಪ್ರಾರ್ಥಿಸಿದರು. ಹಾರಕಬಾವಿ ಎಸ್. ಕೊಟ್ರೇಶ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!