ಡಿ.ಕೆ. ಶಿವಕುಮಾರ ನಾಯಕತ್ವದಲ್ಲಿ ಹೊಸ ಅಧ್ಯಾಯ ಆರಂಭ: ಶಾಸಕ ಮಾನೆ

KannadaprabhaNewsNetwork |  
Published : May 31, 2026, 02:30 AM IST
ಶಾಸಕ ಶ್ರೀನಿವಾಸ ಮಾನೆ | Kannada Prabha

ಸಾರಾಂಶ

. ತಳ ಹಂತದಿಂದ ಬೆಳೆದು ಬಂದಿರುವ ಕಾಂಗ್ರೆಸ್ ಪಕ್ಷದ ಕಟ್ಟಾಳು ಡಿ.ಕೆ. ಶಿವಕುಮಾರ ಅವರು ಸರ್ಕಾರದ ನಾಯಕತ್ವ ವಹಿಸಿಕೊಳ್ಳಲಿದ್ದು, ಇನ್ನು ಮುಂದೆ ನಾಡಿನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಸಂತಸ ವ್ಯಕ್ತಪಡಿಸಿದ್ದಾರೆ.

ಹಾನಗಲ್ಲ: ತಳ ಹಂತದಿಂದ ಬೆಳೆದು ಬಂದಿರುವ ಕಾಂಗ್ರೆಸ್ ಪಕ್ಷದ ಕಟ್ಟಾಳು ಡಿ.ಕೆ. ಶಿವಕುಮಾರ ಅವರು ಸರ್ಕಾರದ ನಾಯಕತ್ವ ವಹಿಸಿಕೊಳ್ಳಲಿದ್ದು, ಇನ್ನು ಮುಂದೆ ನಾಡಿನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಸಂತಸ ವ್ಯಕ್ತಪಡಿಸಿದ್ದಾರೆ. ಶನಿವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು ಸಂಘಟನೆ, ಹೋರಾಟ, ಪರಿಶ್ರಮ ಇವನ್ನೆಲ್ಲ ಒಳಗೊಂಡಂತೆ ಅಪರೂಪದ ನಾಯಕತ್ವದ ಗುಣ ಮೈಗೂಡಿಸಿಕೊಂಡಿರುವ ಡಿ.ಕೆ. ಶಿವಕುಮಾರ ಅವರಲ್ಲಿ ನಾಯಕರನ್ನು ತಯಾರು ಮಾಡುವಂಥ ಸಾಮರ್ಥ್ಯವಿದೆ. ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು, ಯುವ ಕಾಂಗ್ರೆಸ್ ಮೂಲಕ ಬೆಳೆದು ಬಂದಿರುವ ನಾಯಕ ಡಿ.ಕೆ. ಶಿವಕುಮಾರ ಅವರು ಕಳೆದ ೬ ವರ್ಷಗಳಿಂದ ಕೆಪಿಸಿಸಿ ನಾಯಕತ್ವ ವಹಿಸಿಕೊಂಡು ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭದ್ರವಾದ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಕರ್ತರನ್ನು ಬೆಳೆಸುವಂಥ ಒಬ್ಬ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವುದು ಖುಷಿ ತರುವ ವಿಷಯವಾಗಿದ್ದು, ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಲು ಕಾತರರಾಗಿದ್ದೇವೆ ಎಂದರು. ಹಾವೇರಿ ಜಿಲ್ಲೆಯಲ್ಲಿ ಎಲ್ಲ ಆರೂ ಸ್ಥಾನಗಳಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಜಿಲ್ಲೆ ಸಂಪೂರ್ಣವಾಗಿ ಬಿಜೆಪಿ ಮುಕ್ತವಾಗಿದೆ. ಕಳೆದ ೩ ವರ್ಷಗಳಿಂದ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಕೊರಗು ಕಾಡುತ್ತಿದೆ. ಉಳಿದಿರುವ ೨ ವರ್ಷಗಳ ಅವಧಿಗೆ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬೇಕು ಎಂದು ಎಲ್ಲ ಆರೂ ಜನ ಶಾಸಕರು ಪಕ್ಷದ ವರಿಷ್ಠರ ಎದುರು ಒಕ್ಕೊರಲಿನಿಂದ ಹಕ್ಕು ಮಂಡಿಸಿದ್ದೇವೆ. ಕಳೆದ ೩೦ ವರ್ಷಗಳಿಂದ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಜೀವನದಲ್ಲಿದ್ದು, ೧೭ ವರ್ಷಗಳಿಂದ ವಿಧಾನ ಪರಿಷತ್ ಮತ್ತು ವಿಧಾನಸಭೆ ಸದಸ್ಯನಾಗಿ ಸದನದಲ್ಲಿದ್ದೇನೆ. ಹಾಗಾಗಿ ನನಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಇರುವುದಾಗಿ ತಿಳಿಸಿದ ಅವರು, ಸಚಿವ ಸ್ಥಾನದ ಬಗ್ಗೆ ಇದುವರೆಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ, ಆದರೆ ಆಶಾಭಾವನೆಯಲ್ಲಿ ಇರುವುದಾಗಿ ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಕೊರತೆ ಇಲ್ಲ. ಅವಕಾಶ ಸಿಕ್ಕ ಸಂದರ್ಭದಲ್ಲೆಲ್ಲ ನಾಯಕತ್ವ ಪ್ರದರ್ಶಿಸಿದ್ದಾರೆ. ಬಹಳಷ್ಟು ನಾಯಕರು ಇಂದು ಬೆಳೆದಿದ್ದಾರೆ. ಕೆಲವು ಹೊಸ ಮುಖಗಳೂ ಕೂಡ ನಾಯಕತ್ವ ಸಾಬೀತು ಪಡಿಸಲು ಅವಕಾಶಕ್ಕೆ ಕಾಯುತ್ತಿದ್ದು, ಅವಕಾಶ ಸಿಕ್ಕರೆ ಪಕ್ಷಕ್ಕೆ ಆಸ್ತಿಯಾಗಲಿದ್ದಾರೆ ಎಂದು ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲನಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ
ಶಾಸಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನಕ್ಕೆ ಆಗ್ರಹ