ಬಸವರಾಜ ಸರೂರ
ತಂತ್ರಜ್ಞಾನದ ಬೆಳವಣಿಗೆ, ಹೆಚ್ಚುತ್ತಿರುವ ಕಾರ್ಪೊರೇಟ್ ವಲಯ ಮತ್ತು ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಮೂಡುತ್ತಿರುವ ಜಾಗೃತಿಯಿಂದಾಗಿ ಯುವ ಪೀಳಿಗೆಯು ಕಾನೂನು ಕ್ಷೇತ್ರವನ್ನು ಶ್ರೇಷ್ಠ ವೃತ್ತಿಜೀವನವಾಗಿ ಆಯ್ಕೆ ಮಾಡಿಕೊಳ್ಳುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ನಗರದಲ್ಲಿ ಗುಣಮಟ್ಟದ ಕಾನೂನು ಶಿಕ್ಷಣ ಸಂಸ್ಥೆಗಳು ಮುಂಚೂಣಿಗೆ ಬರುತ್ತಿವೆ.
ಪ್ರಮುಖ ಕಾನೂನು ಕಾಲೇಜುಗಳು: ನಗರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕಾನೂನು ಜ್ಞಾನ ಒದಗಿಸುವಲ್ಲಿ ಪ್ರಮುಖ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ: ನಗರದಲ್ಲಿ ಮೊಟ್ಟ ಮೊದಲಿಗೆ 1985ರಲ್ಲಿ ಆರ್.ಟಿ.ಇ.ಎಸ್. ಕಾನೂನು ಮಹಾವಿದ್ಯಾಲಯ ಸ್ಥಾಪನೆಯಾಯಿತು. ಇದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು), ಹುಬ್ಬಳ್ಳಿಗೆ ಸಂಯೋಜನೆಗೊಂಡಿದ್ದು, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ)ದಿಂದ ಮಾನ್ಯತೆ ಪಡೆದಿದೆ. ಇಲ್ಲಿ 3 ವರ್ಷಗಳ ಎಲ್ಎಲ್ಬಿ ಪದವಿ ನೀಡಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಓಂ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಾವುಕಾರ ಕಾನೂನು ಕಾಲೇಜು (ಸಾವುಕಾರ ಲಾ ಕಾಲೇಜ್), ಬಿಎಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ನಗರದ ಹಲಗೇರಿ ರಸ್ತೆಯ ಸಂಸ್ಥೆಯ ಪದವಿ ಕಾಲೇಜಿನ ಆವರಣದಲ್ಲಿ ಲಾ ಕಾಲೇಜ್ ಹಾಗೂ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ದೇವಿಕಾ ಕಾಲೇಜಿನ ಆವರಣದಲ್ಲಿ ಕಾನೂನು ಪದವಿ ಕಾಲೇಜು ಪ್ರಾರಂಭವಾಗಿದೆ.
ಸ್ಪರ್ಧಾತ್ಮಕತೆಗ ಅನುಕೂಲ: ನ್ಯಾಯಾಧೀಶರ (ಜ್ಯೂಡಿಸಿಯರಿ) ಹುದ್ದೆಗಳು, ಸಿವಿಲ್ ಸರ್ವೀಸಸ್ (ಐಎಎಸ್, ಕೆಎಎಸ್) ಮತ್ತು ಪೊಲೀಸ್ ಇಲಾಖೆಯ ಪರೀಕ್ಷೆಗಳಿಗೆ ಕಾನೂನು ಪದವಿ ಅತ್ಯುತ್ತಮ ಅಡಿಪಾಯ ಒದಗಿಸುತ್ತದೆ.
ಪ್ರಾಯೋಗಿಕ ಸೌಲಭ್ಯಗಳು: ಇತ್ತೀಚಿನ ದಿನಗಳಲ್ಲಿ ರಾಣಿಬೆನ್ನೂರಿನ ಕಾನೂನು ಕಾಲೇಜುಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗಿಲ್ಲ. ಬದಲಾಗಿ ವಿದ್ಯಾರ್ಥಿಗಳ ವೃತ್ತಿಪರ ನೈಪುಣ್ಯ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ.
ಸವಾಲುಗಳು-ಮುಂದಿನ ಹಾದಿ: ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಜಾಗತಿಕ ಮಟ್ಟದ ಸ್ಪರ್ಧೆಗೆ ತಕ್ಕಂತೆ ಕಾರ್ಪೊರೇಟ್ ಕಾನೂನು ಮತ್ತು ಸೈಬರ್ ಕ್ರೈಮ್ ತನಿಖೆಯಂತಹ ಆಧುನಿಕ ವಿಷಯಗಳಲ್ಲಿ ವಿಶೇಷ ತರಬೇತಿ ಹೆಚ್ಚಿಸಬೇಕಾದ ಅಗತ್ಯವಿದೆ. ಸ್ಥಳೀಯ ನ್ಯಾಯಾಲಯಗಳೊಂದಿಗೆ ಹೆಚ್ಚಿನ ಸಂವಾದ ಮತ್ತು ಹಿರಿಯ ವಕೀಲರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಸಿಗುವಂತಾಗಬೇಕು.