ಕುಂದಗೋಳ: ತಾಲೂಕಿನ ಕೊಂಕಣಕುರಹಟ್ಟಿ ಗ್ರಾಮದಲ್ಲಿ ದೃಷ್ಟಿದೋಷದಿಂದ ನರಳುತ್ತಿದ್ದ ವಿಜಯಲಕ್ಷ್ಮೀ ಗೌಡಪ್ಪಗೌಡ ಎಂಬ ಯುವತಿ ಇದೀಗ ಪ್ರಪಂಚ ನೋಡುವಂತಾಗಿದ್ದಾಳೆ. ಅವಳ ಬದುಕಿನಲ್ಲಿ ತುಂಬಿದ್ದ ಅಂಧಕಾರ ತೊಲಗಿ ಹೊಸ ಬೆಳಕು ಮೂಡಿದೆ.
ಇದಕ್ಕೆಲ್ಲ ಕಾರಣ, ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ಸಹೋದರ ಷಣ್ಮುಖ ಶಿವಳ್ಳಿ ಅವರು. ಈ ಯುವತಿ ಮತ್ತು ಆಕೆಯ ತಂದೆ ಅನುಭವಿಸುತ್ತಿದ್ದ ಸಂಕಟಕ್ಕೆ ಸ್ಪಂದಿಸಿ ಎಲ್ಲ ವೆಚ್ಚವನ್ನು ತಾವೇ ಭರಿಸಿ ಆಪರೇಷನ್ ಮಾಡಿಸಿದ್ದಾರೆ.ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಅವರು ಕುಂದಗೋಳ ಮತಕ್ಷೇತ್ರದ ಬಡವರು ಅನಾರೋಗ್ಯಕ್ಕೀಡಾದಾಗ ಅವರಿಗೆ ಉಚಿತವಾಗಿ ಚಿಕಿತ್ಸೆ ದೊರೆಯುವಂತಾಗಲು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತಮ್ಮ ಓರ್ವ ಸಹಾಯಕನನ್ನು ಕಾಯಂ ಇರಿಸಿದ್ದರು. ಅದೇ ದಾರಿಯಲ್ಲಿ ಸಾಗುತ್ತಿರುವ ಅವರ ಸಹೋದರ ಷಣ್ಮುಖ ಶಿವಳ್ಳಿ ಇದೀಗ ವಿಜಯಲಕ್ಷ್ಮಿ ಅವರ ಬಾಳಿಗೆ ಬೆಳಕಾಗಿದ್ದಾರೆ.
ಆಗಿದ್ದು ಇಷ್ಟು: ತಾಲೂಕಿನ ಕೊಂಕಣ ಕುರಹಟ್ಟಿ ಗ್ರಾಮದ ವೆಂಕನಗೌಡ ಗೌಡಪ್ಪಗೌಡ ಅವರ ಮಗಳಾದ ವಿಜಯಲಕ್ಷ್ಮಿಗೆ ಹುಟ್ಟುತ್ತಲೆ ಅಲ್ಪ ಪ್ರಮಾಣದ ದೃಷ್ಟಿದೋಷ ಇತ್ತು. ಮುಂದೆ ಪ್ರಾಥಮಿಕ ಶಾಲೆ ಓದುವಾಗ ದೃಷ್ಟಿ ಬಹಳ ಕಡಿಮೆ ಆಗಿ, ಓದಲು, ಬರೆಯಲು ಕಷ್ಟವಾಯಿತು.ವೆಂಕನಗೌಡರು ಮಗಳ ದೃಷ್ಟಿ ಸರಿಪಡಿಸಲು ಸ್ಥಳೀಯ ಸರ್ಕಾರಿ ಆಸ್ಪತ್ರೆ, ಹುಬ್ಬಳ್ಳಿಯ ವಾಸನ್ ಐ ಕೇರ್, ಜಯಪ್ರಿಯ ಆಸ್ಪತ್ರೆ ಹಾಗೂ ಬೆಂಗಳೂರಿನ ಶಂಕರ ಐ ಹಾಸ್ಪಿಟಲ್ ಸೇರಿದಂತೆ ವಿವಿಧ ಕ್ಯಾಂಪಸ್ ಇರುವ ಕಡೆ ಕರೆದುಕೊಂಡು ಅಲೆದಾಡಿ ಲಕ್ಷಾಂತರ ದುಡ್ಡು ಖರ್ಚು ಮಾಡಿದರು. ಕೊನೆಗೆ ತಮ್ಮದೇ ಒಂದು ಕಣ್ಣನ್ನು ಮಗಳಿಗೆ ದಾನ ಮಾಡಲು ನಿರ್ಧರಿಸಿದರು.
ಆಗ ರೊಟ್ಟಿಗವಾಡದ ಕಾಂಗ್ರೆಸ್ ಮುಖಂಡ ಬಾಬಣ್ಣ ಬೆಟಗೇರಿ ಅವರ ಮುಂದೆ ಮಗಳ ವೃತ್ತಾಂತ ಹೇಳಿಕೊಂಡರು. ಬಾಬಣ್ಣ ಬೆಟಗೇರಿ ಇವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿಯವರಿಗೆ ಭೇಟಿ ಮಾಡಿಸಿದರು. ವಿಷಯ ತಿಳಿದು ಮಮ್ಮಲ ಮರುಗಿದ ಷಣ್ಮುಖ ಶಿವಳ್ಳಿ ಅವರು ತಕ್ಷಣ ಕಿಮ್ಸ್ ಆಸ್ಪತ್ರೆಯ ನೇತ್ರತಜ್ಞ ಡಾ. ರಾಜಶೇಖರ ದ್ಯಾಬೇರಿ ಅವರಲ್ಲಿಗೆ ಕಳಿಸಿಕೊಟ್ಟರು.ತಪಾಸಣೆ ನಡೆಸಿದ ಡಾ. ದ್ಯಾಬೇರಿ ತಮಗೆ ಗೊತ್ತಿರುವ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಮಿಂಟು ಹಾಸ್ಪಿಟಲ್ ಮುಖ್ಯಸ್ಥ ಡಾ. ಜಿ.ಸುರೇಶಬಾಬು ಎಂಬುವರಿಗೆ ಕರೆ ಮಾಡಿ ವಿಷಯ ಮನವರಿಕೆ ಮಾಡಿದರು. ಡಾ.ಸುರೇಶಬಾಬು ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮಿ ಆವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಆಪರೇಷನ್ ಮಾಡಿ ದೃಷ್ಟಿ ಸುಸ್ಥಿತಿಗೆ ಬರುವಂತೆ ಮಾಡಿದ್ದಾರೆ.
ಷಣ್ಮುಖ ಶಿವಳ್ಳಿ ಅವರ ಈ ಉಪಕಾರವನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುವ ವೆಂಕನಗೌಡರು, "ನಮ್ಮಿಂದ ಒಂದೇ ಒಂದು ರೂಪಾಯಿ ಪಡೆಯದೇ ಆಪರೇಷನ್ಗೆ ತಗಲುವ ಎಲ್ಲ ವೆಚ್ಚವನ್ನು ಭರಿಸಿ, ಕಣ್ಣಿನ ಕರಿಗುಡ್ಡೆ (ಕಾರ್ನಿಯಾ) ಬದಲಾವಣೆ ಮಾಡಿ, ಲೆನ್ಸ್ ಅಳವಡಿಸಿ ನಮ್ಮ ಮಗಳು ಮತ್ತೆ ಜಗತ್ತು ನೋಡುವಂತೆ ಮಾಡಿದ್ದಾರೆ. ದಿ.ಸಿ.ಎಸ್.ಶಿವಳ್ಳಿಯವರೂ ಇದೇ ರೀತಿ ಜನಸೇವೆ ಮಾಡುತ್ತಿದ್ದರು. ಅಣ್ಣನ ದಾರಿಯಲ್ಲಿ ಷಣ್ಮುಖ ಶಿವಳ್ಳಿಯವರೂ ಸಾಗುತ್ತಿರುವುದು ನಮಗೆಲ್ಲ ಹೆಮ್ಮೆ " ಎನ್ನುತ್ತಾರೆ.ನನಗೆ ಹುಟ್ಟಿದಾಗಿನಿಂದ ಕಣ್ಣಿನ ದೃಷ್ಟಿದೋಷ ಇತ್ತು. ಅದು ಕ್ರಮೇಣ ಹೆಚ್ಚಿಗೆ ಆಗಿ ಓದಲು, ಬರೆಯಲು ತೊಂದರೆ ಆಯಿತು. ಷಣ್ಮುಖ ಶಿವಳ್ಳಿ ಅವರು ಬೆಂಗಳೂರ ಮಿಂಟು ಹಾಸ್ಪತ್ರೇಯಲ್ಲಿ ಉಚಿತವಾಗಿ ಆಪರೇಷನ್ ಮಾಡಿಸಿ ನನ್ನ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ ಎಂದು ವಿಜಯಲಕ್ಷ್ಮಿ ಗೌಡಪ್ಪಗೌಡ್ರ ಹೇಳಿದರು.
ವೆಂಕನಗೌಡರು ತಮ್ಮ ಮಗಳಿಗೆ ಕಣ್ಣಿನ ದೃಷ್ಟಿ ಸಮಸ್ಯೆಯ ಕುರಿತಂತೆ ದುಃಖತಪ್ತರಾಗಿ ಹೇಳಿಕೊಂಡರು. ಸ್ನೇಹಿತರ ಸಲಹೆಯಂತೆಗೆ ಬೆಂಗಳೂರಿಗೆ ಕರೆದೊಯ್ದು ಆಪರೇಷನ್ ಮಾಡಿಸಿದ್ದೇವೆ. ವಿಜಯಲಕ್ಷ್ಮಿ ಚನ್ನಾಗಿ ಓದಿ ಬದುಕು ಕಟ್ಟಿಕೊಂಡರೆ ಅದುವೇ ನಮಗೆ ತೃಪ್ತಿ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.