ಅವಕಾಶದಿಂದ ವಂಚಿತರಾದ ಅಲೆಮಾರಿ ಜನಾಂಗ: ಜಿ. ಪಲ್ಲವಿ

KannadaprabhaNewsNetwork | Published : Jun 16, 2025 3:15 AM

ಸುಡುಗಾಡು ಸಿದ್ದ ಮತ್ತು ಅಲೆಮಾರಿ ಜನಾಂಗಕ್ಕೆ ಭಾಷೆ, ಕಲೆ ಮತ್ತು ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಸುಡುಗಾಡು ಸಿದ್ದ ಮತ್ತು ಅಲೆಮಾರಿ ಜನಾಂಗಕ್ಕೆ ಭಾಷೆ, ಕಲೆ ಮತ್ತು ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ತಿಳಿಸಿದರು.

ಆನಂದಪುರ ಸಮೀಪದ ಸಿದ್ದೇಶ್ವರ ಕಾಲೋನಿಯ ಸುಡುಗಾಡು ಸಿದ್ದ ಅಲೆಮಾರಿ ಜನಾಂಗದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಅವರು ಮಾತನಾಡಿ, ರಾಜ್ಯದಲ್ಲಿ ಇರುವಂತಹ ಅಲೆಮಾರಿ ಜನಾಂಗಕ್ಕೆ ಶಾಶ್ವತ ಪರಿಹಾರವಿಲ್ಲದೆ ಅಲೆಮಾರಿಯಾಗಿ ಬದುಕುತ್ತಿದ್ದಾರೆ. ಇವರಿಗೆ ನಿರ್ದಿಷ್ಟವಾದ ಸ್ಥಳದಲ್ಲಿಯೇ ವಾಸಿಸುವಂತಹ ಶಾಶ್ವತ ಪರಿಹಾರ ದೊರೆಯಬೇಕಾಗಿದೆ.

ಅಲೆಮಾರಿ, ಸುಡುಗಾಡು ಸಿದ್ದ ಜನಾಂಗದ ಭಾಷೆ, ಕಲೆ ಮತ್ತು ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಶಿಕ್ಷಣ ಮತ್ತು ಶಾಶ್ವತವಾದ ನೆಲೆಯನ್ನು ಕಾಣದೆ ಇರುವುದಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ಆದ್ದರಿಂದ ಜನಗಣತಿಯ ಸಂದರ್ಭದಲ್ಲಿ ತಮ್ಮ ಜಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು ಇಲ್ಲವಾದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಎಂದರು. ಅಲೆಮಾರಿ ಜನಾಂಗಕ್ಕೆ ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಶಾಶ್ವತವಾಗಿ ವಾಸಿಸಲು ಅವಕಾಶ ಸಿಕ್ಕಾಗ ಮಾತ್ರ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ.

ಅಲೆಮಾರಿ ಜನಾಂಗಕ್ಕೆ ಸರ್ಕಾರಿ ಸೌಲಭ್ಯಗಳು ದೊರಕಬೇಕಾದರೆ ಅಧಿಕಾರಿಗಳು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಒಳ ಮೀಸಲಾತಿ ಪಡೆಯಲು ಜಾತಿ ಸಮೀಕ್ಷೆಯಲ್ಲಿ ಅಲೆಮಾರಿ ಜನಾಂಗವೆಂದು ಕಡ್ಡಾಯವಾಗಿ ನಮೂದಿಸುವಂತೆ ತಿಳಿಸಿದರು . ರಾಜ್ಯದಲ್ಲಿ ಇರುವಂತಹ ಅಲೆಮಾರಿ ಜನಾಂಗದ ವಾಸ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತೆರಳಿ ಸರ್ಕಾರದ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಇದುವರೆಗೂ ರಾಜಕೀಯ ಪ್ರಾತಿನಿದ್ಯ ಕಾಣದೆ ಇರುವಂತಹ ಅಲೆಮಾರಿ ಜನಾಂಗಕ್ಕೆ ಶಾಶ್ವತ ಪರಿಹಾರಬೇಕು. ಮುಂದಿನ ದಿನಗಳಲ್ಲಿ ಅಲೆಮಾರಿ ಜನಾಂಗದವರಿಗೆ ಮೂಲಭೂತ ಶಾಶ್ವತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿ ಅಲೆಮಾರಿ ಜನಾಂಗದ ಹೆಣ್ಣುಮಕ್ಕಳ ಸಮೂಹ ಸಂಘಕ್ಕೆ 2 ಲಕ್ಷಕ್ಕೂ ಅಧಿಕ ಸಾಲ ನೀಡಲಿದೆ. 10 ಜನರ ಗುಂಪು ಸಮೂಹವನ್ನು ನೋಂದಣಿ ಮಾಡಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡರೆ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲುು ಸಾಧ್ಯ ಎಂದು ತಿಳಿಸಿದರು.

ತಹಸೀಲ್ದಾರ್ ಚಂದ್ರಶೇಖರ್ ನಾಯಕ್, ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಸಹಾಯಕ ನಿರ್ದೇಶಕರಾದ ಸುರೇಶ್, ಪಂಚಾಯತ್ ಕಾರ್ಯದರ್ಶಿ ರವೀಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಕುಮಾರ್ ಕಾಲೋನಿ, ಶಂಕರ್, ನೇತ್ರಾವತಿ, ಕಂದಾಯ ಅಧಿಕಾರಿ ಕವಿರಾಜ್, ಅಲೆಮಾರಿ ಜನಾಂಗದ ಮುಖಂಡ ನಾಗರಾಜ್, ಸ್ಥಳೀಯರಾದ ಎನ್. ಉಮೇಶ್, ಗೋವಿಂದ್ ಮೂರ್ತಿ, ತುಕ್ಕೋಜಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.