ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಧಾರಾಕಾರ ಮಳೆಗೆ ಮೈದುಂಬಿ ಹರಿಯುತ್ತಿರುವ ಹಳ್ಳ ಕೊಳ್ಳ

KannadaprabhaNewsNetwork | Published : Jun 12, 2025 1:09 AM

ಹಾಳಕುಸುಗಲ್‌ ಹತ್ತಿರವಿರುವ ಗೌರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಬಸ್‌ವೊಂದು ರಸ್ತೆ ಮಧ್ಯೆದಲ್ಲೇ ನಿಂತಿದ್ದು, ಪ್ರಯಾಣಿಕರು ಕಾಲ್ನಡಿಗೆಯ ಮೂಲಕ ಹಳ್ಳ ದಾಟಿ ದಡ ಸೇರಿದರು.

ನವಲಗುಂದ: ತಾಲೂಕಿನಾದ್ಯಂತ ಬುಧವಾರ ಮೃಗಶಿರ ಮಳೆ ಅರ್ಭಟ ಆರಂಭಿಸಿದ್ದು, ಸಂಜೆ 4.30ರಿಂದ ಶುರುವಾದ ಮಳೆಯ ಅಬ್ಬರ, ರಾತ್ರಿವರೆಗೂ ಮುಂದುವರಿದಿತ್ತು. ತಾಲೂಕಿನ ಹಳ್ಳ- ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಗೌರಿಹಳ್ಳ ಹಾಗೂ ಅಂಬಲಿ ಹಳ್ಳ ಮೈದುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹಾಳಕುಸುಗಲ್‌ ಹತ್ತಿರವಿರುವ ಗೌರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಬಸ್‌ವೊಂದು ರಸ್ತೆ ಮಧ್ಯೆದಲ್ಲೇ ನಿಂತಿದ್ದು, ಪ್ರಯಾಣಿಕರು ಕಾಲ್ನಡಿಗೆಯ ಮೂಲಕ ಹಳ್ಳ ದಾಟಿ ದಡ ಸೇರಿದರು.

ಹಾಳಕುಸುಗಲ್‌ ಗೌರಿ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಬಹುವರ್ಷಗಳದ್ದು. ಇದಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರತಿವರ್ಷ ನೀರನಲ್ಲಿ ಸಿಲುಕುವುದೇ ಆಗಿದೆ ಎಂದು ಸಣ್ಣಶೇಖಣ್ಣ ನೀಡವಣಿ ಆರೋಪಿಸಿದರು.

ನವಲಗುಂದ ಪಟ್ಟಣದ ಜಮಖಾನ ಓಣಿಯ ಹತ್ತಿರ ಹಾದು ಹೋಗುವ ಹುಬ್ಬಳ್ಳಿ- ಸೋಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಇಬ್ರಾಹಿಂಪೂರ- ನವಲಗುಂದ ಮಧ್ಯದಲ್ಲಿರುವ ಅಂಬಲಿ ಹಳ್ಳದ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದೆ.

ತಾಲೂಕಿನ ಗುಡಿಸಾಗರ ಹತ್ತಿರುವ ಹಳ್ಳ ತುಂಬಿ ಹರಿಯುತ್ತಿದ್ದು ನಾಗನೂರ್, ಅರಹಟ್ಟಿ, ಕಡದಳ್ಳಿ ತಡಹಾಳ, ಪಡೇಸೂರ್, ಶಾನವಾರ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತಾಲೂಕಿನ ಯಮನೂರು ಗ್ರಾಮದಲ್ಲಿ 15ಕ್ಕೂ ಅಧಿಕ ಮನೆಗಳಿಗೆ ಬುಧವಾರ ರಾತ್ರಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವಂತಾಯಿತು. ಗ್ರಾಮದಲ್ಲಿ ರಾಜಬಾಗ್‌ ಸವಾರ್‌ ದರ್ಗಾದ ಮುಂಭಾಗದ ಆವರಣದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಮಳೆಯಿಂದ ರೈತರಲ್ಲಿ ಬೆಳೆ ಕಳೆದುಕೊಳ್ಳುವ ಭೀತಿ ಆವರಿಸಿದೆ. ಒಂದುವರೆ ಗಂಟೆಯಲ್ಲಿ ತಾಲೂಕಿನಾದ್ಯಂತ 67 ಮಿ.ಮೀ ಮಳೆಯಾಗಿದ್ದು ರಾತ್ರಿಯಿಡೀ ಮಳೆ ಬೀಳುವ ಮುನ್ಸೂಚನೆಗಳಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಹಸೀಲ್ದಾರ್ ಸುಧೀರ ಸಾಹುಕಾರ ತಿಳಿಸಿದ್ದಾರೆ. ಮಳೆಯಂದಾಗಿ ವಿದ್ಯುತ್ ಸಂಚಾರ ವ್ಯತ್ಯಯವಾಗಿದ್ದು ನಾಗರಿಕರು ಕತ್ತಲಲ್ಲೇ ದಿನ ಕಳೆಯುವಂತಾಗಿದೆ. ಮೂವರ ಮೇಲೆ ಗುಂಪೊಂದು ಹಲ್ಲೆ

ಹುಬ್ಬಳ್ಳಿ: ಮನೆ ಎದುರು ಪಾರ್ಕಿಂಗ್ ಮಾಡಿದ ಬೈಕ್ ತೆಗೆಯುವಂತೆ ಹೇಳಿದ ವಿಚಾರಕ್ಕೆ ಇಬ್ಬರು ಮಹಿಳೆ ಸೇರಿದಂತೆ ಮೂವರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಇಲ್ಲಿಯ ಗಂಗಾಧರ ನಗರದ ಶಾಂತಿ ಕಾಲನಿಯಲ್ಲಿ ನಡೆದಿದೆ. ಶಾಂತಿ ಕಾಲನಿಯ ನೇತ್ರಾ, ಯಮನಕ್ಕಾ ಹಾಗೂ ಸ್ವಯಂ ಎಂಬುವರ ಮೇಲೆ ಹಲ್ಲೆಯಾಗಿದ್ದು, ಶ್ರೀನಿವಾಸ ಬಿಜವಾಡ, ಲೋಹಿತ, ಸಾಯಿ, ರವಿ, ಮುಕೇಶ ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ. ಮನೆ ಎದುರು ನಿಲ್ಲಿಸಿದ ಬೈಕ್ ಆ ಕಡೆ ಇಟ್ಟುಕೊಳ್ಳುವಂತೆ ಮುಕೇಶ ಅವರಿಗೆ ಹೇಳಿದ್ದಾರೆ. ಆಗ ಸಿಟ್ಟಾದ ಮುಕೇಶ್ ತಮ್ಮ ಸಂಬಂಧಿಗಳೊಂದಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಹಾಕಿ ಸ್ಟಿಕ್, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.ನಿವೃತ್ತ ನೌಕರರೊಬ್ಬರಿಗೆ ₹35 ಲಕ್ಷ ವಂಚನೆ

ಹುಬ್ಬಳ್ಳಿ: ಮಗನಿಗೆ ಉದ್ಯೋಗ ಕೊಡಿಸುವುದಾಗಿ ನಿವೃತ್ತ ಸರ್ಕಾರಿ ನೌಕರರೊಬ್ಬನ್ನು ನಂಬಿಸಿ ಹಂತ ಹಂತವಾಗಿ ₹35 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಕೇಶ್ವಾಪೂರದ ವೆಂಕನಗೌಡ ಹಟ್ಟಿ ಎಂಬುವರೇ ವಂಚನೆಗೊಳದವರು. ಕಂಪ್ಯೂಟರ್ ಸೆಂಟರ್‌ನಲ್ಲಿದ್ದಾಗ ಪ್ರವೀಣ ಮತ್ತು ಮುನೀರ ಎಂಬ ಪರಿಚಯ ಮಾಡಿಕೊಂಡ ಇಬ್ಬರು ಅನಾಮಧೇಯ ವ್ಯಕ್ತಿಗಳು, ತಮ್ಮ ಮಗ ಪ್ರಶಾಂತನಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿದ್ದರು. ನಂತರ ಹಂತ ಹಂತವಾಗಿ ₹35 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.