ಕಾಪು: ಇಲ್ಲಿನ ಬೆಳಪು ಗ್ರಾಮದಲ್ಲಿ ಗುಂಡಿಯಲ್ಲಿ ಈಜಲು ತೆರಳಿದ್ದ ಬಾಲಕ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಬಾಲಕನ ಜೊತೆಯಿದ್ದ ಇತರ ಮೂವರು ಬಾಲಕರನ್ನು ರಕ್ಷಿಸಲಾಗಿದೆ. ಮೃತಪಟ್ಟ ಬಾಲಕನನ್ನು ಬೆಳಪು ವಸತಿ ಬಡಾವಣೆಯ ನಿವಾಸಿ ವಿಶ್ವಾಸ್ (11) ಎಂದು ಗುರುತಿಸಲಾಗಿದೆ. ಈತ ಇನ್ನಂಜೆ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಒಟ್ಟು 4 ಮಂದಿ ಗೆಳೆಯರೊಂದಿಗೆ ಸಂಜೆ ಶಾಲೆಯಿಂದ ಬಂದು ಇಲ್ಲಿನ ಔದ್ಯಮಿಕ ನಗರದ ಗುಂಡಿಯಲ್ಲಿ ಈಜಲು ತೆರಳಿದ್ದರು. ಎಲ್ಲರೂ ಗುಂಡಿಗೆ ಇಳಿದು ಈಜಲಾರಂಭಿಸಿದರು, ಆದರೆ ಗುಂಡಿಯಲ್ಲಿ ಮಳೆಯ ನೀರು ತುಂಬಿದ್ದರಿಂದ ಮೇಲಕ್ಕೆ ಬರಲಾಗದೆ ಮುಳುಗಲಾರಂಭಿಸಿದಾಗ ಬೊಬ್ಬೆ ಹೊಡೆದರು. ತಕ್ಷಣ ಸ್ಥಳೀಯರಾದ ಅಹ್ಮದ್, ಜಲಾಲ್ ಅವರು ಓಡಿ ಬಂದು ನಾಲ್ವರನ್ನೂ ಮೇಲೆಕ್ಕೆ ತಂದರು. ಅವರಲ್ಲಿ ತೀವ್ರ ಅಸ್ವಸ್ಥನಾಗಿದ್ದ ವಿಶ್ವಾಸ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.