ಮಕ್ಕಳ ಮನಸ್ಸಷ್ಟೇ ಅಲ್ಲ, ಕ್ಯಾನ್ಸರನ್ನೇ ಗೆಲ್ಲುತ್ತಿರುವ ಶಿಕ್ಷಕಿ!

KannadaprabhaNewsNetwork |  
Published : Sep 05, 2026, 02:00 AM IST
2ಕೆಡಿವಿಜಿ10-ದಾವಣಗೆರೆಯ ಸರ್ಕಾರಿ ಶಾಲೆ ಶಿಕ್ಷಕಿ ಎ.ಎಲ್.ನಾಗವೇಣಿ. .............2ಕೆಡಿವಿಜಿ11, 12, 13-ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬೋಧನೆಯಲ್ಲಿ ತೊಡಗಿರುವ ಶಿಕ್ಷಕಿ ಎ.ಎಲ್.ನಾಗವೇಣಿ. | Kannada Prabha

ಸಾರಾಂಶ

ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಬಂದರೂ ಎದೆಗುಂದದೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಲೇ, ಆಸ್ಪತ್ರೆಯಲ್ಲಿದ್ದರೆ ಆನ್‌ ಲೈನ್‌ನಲ್ಲಿ, ಚಿಕಿತ್ಸೆ ಪಡೆದು ಬಂದ ನಂತರ ಮತ್ತೆ ಎಂದಿನಂತೆ ಶಾಲೆಗೆ ಹೋಗಿ ನೋವಿನಲ್ಲೂ ಮಕ್ಕಳಲ್ಲೇ ದೇವರನ್ನು ಕಾಣುತ್ತಾ, ಬೋಧಿಸುವ ಮೂಲಕ ವೃತ್ತಿಗೆ ಮತ್ತಷ್ಟು ಮೆರಗು ತರುವ ಕೆಲಸವನ್ನು ದಾವಣಗೆರೆಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಾಡುತ್ತ ಶಿಕ್ಷಕ ವೃತ್ತಿಯ ಗೌರವ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

- ತಮ್ಮ ವೇತನದ ಶೇ.10 ಹಣ ಎಂದಿಗೂ ಬಡಮಕ್ಕಳ ಶಿಕ್ಷಣಕ್ಕೆ ಮುಡಿಪು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಬಂದರೂ ಎದೆಗುಂದದೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಲೇ, ಆಸ್ಪತ್ರೆಯಲ್ಲಿದ್ದರೆ ಆನ್‌ ಲೈನ್‌ನಲ್ಲಿ, ಚಿಕಿತ್ಸೆ ಪಡೆದು ಬಂದ ನಂತರ ಮತ್ತೆ ಎಂದಿನಂತೆ ಶಾಲೆಗೆ ಹೋಗಿ ನೋವಿನಲ್ಲೂ ಮಕ್ಕಳಲ್ಲೇ ದೇವರನ್ನು ಕಾಣುತ್ತಾ, ಬೋಧಿಸುವ ಮೂಲಕ ವೃತ್ತಿಗೆ ಮತ್ತಷ್ಟು ಮೆರಗು ತರುವ ಕೆಲಸವನ್ನು ದಾವಣಗೆರೆಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಾಡುತ್ತ ಶಿಕ್ಷಕ ವೃತ್ತಿಯ ಗೌರವ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

ದಾವಣಗೆರೆ ವಾಸಿಯಾದ ಎ.ಎಲ್.ನಾಗವೇಣಿ 2022ರಲ್ಲಿ ತಮಗೆ ಕ್ಯಾನ್ಸರ್ 2ನೇ ಹಂತದಲ್ಲಿ ಇರುವುದು ತಿಳಿದಿದ್ದಾರೆ. ಆದರೂ, ಎದೆಗುಂದಲಿಲ್ಲ. ಪತಿ ಎಸ್.ಕೆ.ಪ್ರಹ್ಲಾದ್‌ ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ. ತಂದೆ ಶಿಕ್ಷಕರಾಗಿದ್ದ ದಿವಂಗತ ಎ.ಲಿಂಗಪ್ಪ ಇಲ್ಲಿನ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ. ತಾಯಿಯೂ ಶಿಕ್ಷಕಿಯಾಗಿ ನಿವೃತ್ತಿ ಆದವರು.

ದಾವಣಗೆರೆ ವಿವಿಯಲ್ಲಿ 2015ರಲ್ಲಿ ಎಂ.ಎ. ಸ್ನಾತಕೋತ್ತರ ಇಂಗ್ಲಿಷ್ ಭಾಷೆಯಲ್ಲಿ ರ್ಯಾಂಕ್, 3 ಚಿನ್ನದ ಪದಕ ಪಡೆದು, ಶಿಕ್ಷಕ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎ.ಎಲ್. ನಾಗವೇಣಿ ಅವರು ಕೆಎಎಸ್‌ ಅಧಿಕಾರಿ ಆಗಬಹುದಿತ್ತು. ಆದರೆ, ಹೆತ್ತವರ ಆಸೆಯಂತೆ ಶಿಕ್ಷಕಿಯಾಗಿ ಆ ವೃತ್ತಿಗೆ ಮತ್ತಷ್ಟು ಮೆರಗು ತರುತ್ತಿದ್ದಾರೆ.

ದಾವಣಗೆರೆ ನಿಟುವಳ್ಳಿಯ ಶ್ರೀರಾಮ ಬಡಾವಣೆಯ ಶಾಲೆಯ ಇಂಗ್ಲಿಷ್ ಭಾಷಾ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ನಾಗವೇಣಿಯವರ ಮಕ್ಕಳಿಗೆ ಪಾಠದ ಜೊತೆಮೌಲ್ಯ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ವಿಜ್ಞಾನ ಪ್ರಯೋಗ, ದೈಹಿಕ ಶಿಕ್ಷಣ, ಇಲಾಖೆ ಪ್ರತಿ ಕಾರ್ಯಕ್ರಮಕ್ಕೂ ಮಕ್ಕಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಕೋವಿಡ್ ವೇಳೆ ಬಡ, ಶ್ರಮಿಕ ಪಾಲಕರ ಪಾಲಿಗೆ ಅನ್ನದಾತೆಯಾಗಿ, ಮಕ್ಕಳಿಗೆ ಅಕ್ಷರದಾತೆ ಆದವರು. ತಮ್ಮ ಮದುವೆ ವೇಳೆ ಪತಿಗೆ ತಮ್ಮ ವೇತನದ ಶೇ.10ರಷ್ಟನ್ನು ಬಡಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡುವ ಮಾತು ಕೊಟ್ಟಂತೆ ಇಂದಿಗೂ ನಾಗವೇಣಿ ನುಡಿದಂತೆ ನಡೆಯುತ್ತಿದ್ದಾರೆ.

ಕುಟುಂಬ, ಸ್ನೇಹಿತರು, ಬಂಧು-ಬಳಗದಿಂದ ವಿವಿಧ ಸರ್ಕಾರಿ ಶಾಲೆಗಳಿಗೆ, ಕೊಡುಗೆಗಳ ರೂಪದಲ್ಲಿ ₹4 ಲಕ್ಷ ಮೌಲ್ಯದ ದೇಣಿಗೆ, ಅವಶ್ಯಕ ಸಾಮಗ್ರಿ ಕೊಡಿಸಿದ್ದಾರೆ. ಬಡವರ ಮಕ್ಕಳು ಶಾಲೆಯಿಂದ ದೂರ ಉಳಿಯಬಾರದೆಂದು ನಿತ್ಯವೂ ಬೆಳಗ್ಗೆ 8.30ಕ್ಕೆ ಮನೆಯಿಂದ ಕಾರಿನಲ್ಲಿ ಹೊರಟು, ತಮ್ಮ ಶಾಲೆಯ ಏಳೆಂಟು ಮಕ್ಕಳನ್ನು ಅವರ ಗುಡಿಸಲು, ಶೆಡ್‌ ಬಳಿ ಹೋಗಿ, ಶಾಲೆಗೆ ಕರೆದೊಯ್ಯುತ್ತಾರೆ. ವಾಪಸ್‌ ಆ ಮಕ್ಕಳನ್ನು ಮನೆಗೆ ಬಿಟ್ಟು, ಸಂಜೆ 6 ಗಂಟೆ ಹೊತ್ತಿಗೆ ಮನೆಗೆ ಮರಳುತ್ತಾರೆ. ಮಕ್ಕಳಿಗೆ ಪಾಠ ಮಾಡುತ್ತಿದ್ದರೆ, ಮಕ್ಕಳೊಂದಿಗೆ ಇದ್ದರೆ ನನಗೆ ಕಾಯಿಲೆಯೇ ಬಾಧಿಸದು ಎನ್ನುತ್ತಾರೆ ನಾಗವೇಣಿಯವರು.

2022ರಲ್ಲಿ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಬಂದರೂ ಧೃತಿಗೆಡದೇ ಸೂಕ್ತ ಚಿಕಿತ್ಸೆ ಪಡೆದು ಶಿಕ್ಷಕ ವೃತ್ತಿ ಮುಂದುವರಿಸುತ್ತಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತಿರುವ ಪ್ರಸಿದ್ಧ ವೈದ್ಯರಿಗೆತೋರಿಸಲು ಬೆಂಗಳೂರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಮಾತನಾಡುತ್ತಾ ತಮ್ಮ ತಂದೆ ಎ.ಲಿಂಗಪ್ಪನವರು ಅಂದಾಗ ತಮ್ಮ ಗುರುಗಳ ಮಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ವೈದ್ಯರು ಧನ್ಯತಾಭಾವ ತೋರಿದ್ದು ಗುರು ವೃತ್ತಿ ಬಗ್ಗೆ ನಾಗವೇಣಿಯವರಲ್ಲಿ ಮತ್ತಷ್ಟು ಅಭಿಮಾನ ಮೂಡಿಸಿತು.

ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ನಾಗವೇಣಿಯವರು ಕ್ಯಾನ್ಸರ್ ಎದುರು ಹೋರಾಡುತ್ತಲೇ ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ವಿದ್ಯಾರ್ಥಿನಿಯರ ಪೈಕಿ ಯಾರದ್ದೇ ಮನೆಯಲ್ಲಿ ಮೊದಲ ಶುಭ ಕಾರ್ಯವಾದರೆ ಸೀರೆ, ಅರಿಷಿಣ, ಕುಂಕುಮ, ಬಳೆ ತಲುಪಿಸುವ ಮೂಲಕ ಮಾತೃಸ್ಥಾನದಲ್ಲಿ ನಾಗವೇಣಿ ನಿಲ್ಲುತ್ತಾರೆ.

ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿಯಾದ ಪತಿ ಎಸ್.ಕೆ. ಪ್ರಹ್ಲಾದ್ ಜೊತೆಗೆ ದಾವಣಗೆರೆಯಲ್ಲಿ ಶಿಕ್ಷಕಿ ನಾಗವೇಣಿ ಇದ್ದು, ಹೈಕೋರ್ಟ್ ಲಾಯರ್‌ ಆಗಿ ಮಗಳು ಪಿ.ಎನ್.ಪ್ರಾರ್ಥನಾ ಕೆಲಸ ಮಾಡುತ್ತಿದ್ದರೆ, ಮಗ ಪಿ.ಎನ್.ಕಾರ್ತಿಕೇಯನ್‌ ಬೆಂಗಳೂರಿನಲ್ಲಿ ಬಿಬಿಎ ಓದುತ್ತಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಯೊಬ್ಬನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದಾರೆ. 8ನೇ ತರಗತಿ ನಂತರ ಮುಂದೆ ಓದುವ ತಮ್ಮ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಪಿಯುಸಿವರೆಗೆ ತಾವೇ ಶಾಲಾ- ಕಾಲೇಜು ಶುಲ್ಕ ಕಟ್ಟಿ, ನೆರವಾಗುತ್ತಾರೆ. ಬೋಧನೆಯಲ್ಲೂ ವೈಶಿಷ್ಟ್ಯ ಹೊಂದಿರುವ ಎಲ್.ನಾಗವೇಣಿಯವರೆಂದರೆ ಮಕ್ಕಳಿಗೂ ಹೆತ್ತ ತಾಯಿಗಿಂತಲೂ ಹೆಚ್ಚು ಎಂಬಷ್ಟರ ಮಟ್ಟಿಗೆ ಪ್ರೀತಿ, ಸೆಳೆತ.

- - -

-2ಕೆಡಿವಿಜಿ10: ದಾವಣಗೆರೆಯ ಸರ್ಕಾರಿ ಶಾಲೆ ಶಿಕ್ಷಕಿ ಎ.ಎಲ್.ನಾಗವೇಣಿ.

-2ಕೆಡಿವಿಜಿ11, 12, 13: ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬೋಧನೆಯಲ್ಲಿ ತೊಡಗಿರುವ ಶಿಕ್ಷಕಿ ಎ.ಎಲ್.ನಾಗವೇಣಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಜಾನಪದ ಒಲವು ಹೆಚ್ಚಳ ಆಶಾದಾಯಕ
ಶ್ರದ್ಧಾ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ