ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲೂ ಅವತರಿಸಿದ ಶ್ರೀಕೃಷ್ಣನ ಜನ್ಮದಿನ ಸ್ಮರಿಸಿದ ಭಕ್ತರು, ದೇವರ ನಾಮಸ್ಮರಣೆ ಹಾಗೂ ಭಜನೆಗಳಲ್ಲಿ ಪಾಲ್ಗೊಂಡರು

ಬಳ್ಳಾರಿ: ಬಳ್ಳಾರಿ ಜಿಲ್ಲಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ವಿವಿಧ ಕೃಷ್ಣ ದೇಗುಲ, ಭಕ್ತರ ಮನೆಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು. ಬಾಲಕೃಷ್ಣನ ಜನ್ಮೋತ್ಸವವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿ ಸಂಭ್ರಮಿಸಿದರು.

ನಗರದ ರಾಯಲ್ ಕಾಲನಿಯಲ್ಲಿರುವ ಶ್ರೀವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು. ಸುಪ್ರಭಾತದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮದಲ್ಲಿ ನಿರ್ಮಾಲ್ಯಾಭಿಷೇಕ, ಮಹಾಭಿಷೇಕ ಹಾಗೂ ಪಂಚಾಮೃತಾಭಿಷೇಕ ನೆರವೇರಿಸಲಾಯಿತು.

ಬಳಿಕ ಶ್ರೀಕೃಷ್ಣನ ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಆರತಿ ಬೆಳಗಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು.

ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲೂ ಅವತರಿಸಿದ ಶ್ರೀಕೃಷ್ಣನ ಜನ್ಮದಿನ ಸ್ಮರಿಸಿದ ಭಕ್ತರು, ದೇವರ ನಾಮಸ್ಮರಣೆ ಹಾಗೂ ಭಜನೆಗಳಲ್ಲಿ ಪಾಲ್ಗೊಂಡರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತರ ಸಂಚಾರ ಹೆಚ್ಚಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷ್ಣನ ದರ್ಶನ ಪಡೆದರು.

ಸುಮಂಗಲೆಯರು ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಕೂರಿಸಿ ತೂಗುತ್ತಾ ಲಾಲಿ ಹಾಡುವ ಮೂಲಕ ಸಂಭ್ರಮಿಸಿದರು. ಪುಟಾಣಿ ಮಕ್ಕಳು ಕೃಷ್ಣನ ವೇಷಭೂಷಣ ಧರಿಸಿ ವಿವಿಧ ಭಕ್ತಿಗೀತೆ ಹಾಗೂ ಕೀರ್ತನೆ ಹಾಡಿ ಗಮನ ಸೆಳೆದರು. ಬಾಲಕೃಷ್ಣನ ತುಂಟಾಟ, ಬೆಣ್ಣೆ ಕಳ್ಳತನ ಹಾಗೂ ಗೋಪಾಲಕನ ಜೀವನ ನೆನಪಿಸುವ ವಾತಾವರಣ ಕೃಷ್ಣನ ದೇವಸ್ಥಾನಗಳಲ್ಲಿ ನಿರ್ಮಾಣವಾಗಿತ್ತು.

ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣನ ಉತ್ಸವ ಮೂರ್ತಿ ನಗರ ಪ್ರದಕ್ಷಿಣೆ ಮೂಲಕ ಮನೆ ಮನೆಗೆ ಕರೆದೊಯ್ಯಲಾಯಿತು. ಉತ್ಸವ ಮೂರ್ತಿ ತಮ್ಮ ಮನೆಗಳ ಮುಂದೆ ಆಗಮಿಸುತ್ತಿದ್ದಂತೆ ಭಕ್ತರು ಭಕ್ತಿಯಿಂದ ಬರಮಾಡಿಕೊಂಡು ಹಾಲು, ಮೊಸರು ಸೇರಿದಂತೆ ವಿವಿಧ ನೈವೇದ್ಯ ಅರ್ಪಿಸಿ ಆರತಿ ಬೆಳಗಿದರು. ಮಹಿಳೆಯರು ಕೋಲಾಟ ಆಡುತ್ತಾ ಕೃಷ್ಣನ ಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ಜಿಲ್ಲೆಯ ವಿವಿಧೆಡೆ ಕೂಡ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮನೆಗಳಲ್ಲಿಯೂ ಮಕ್ಕಳನ್ನು ಬಾಲಕೃಷ್ಣನ ವೇಷದಲ್ಲಿ ಸಿಂಗರಿಸಿ ಪೋಷಕರು ಸಂಭ್ರಮಿಸುವ ದೃಶ್ಯಗಳು ಕಂಡು ಬಂದವು. ಕೆಲವೆಡೆ ಮಕ್ಕಳಿಗಾಗಿ ಕೃಷ್ಣ-ರಾಧೆ ವೇಷಭೂಷಣ ಸ್ಪರ್ಧೆ, ಭಜನೆ, ಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನಗಳು ವಿದ್ಯುತ್ ದೀಪ, ಹೂವು ಹಾಗೂ ವಿವಿಧ ಅಲಂಕಾರಗಳಿಂದ ಕಂಗೊಳಿಸಿದವು. ಗೋವಿಂದ, ಗೋಪಾಲ ಹಾಗೂ ಕೃಷ್ಣನ ನಾಮಸ್ಮರಣೆಯೊಂದಿಗೆ ಭಕ್ತರು ಜನ್ಮಾಷ್ಟಮಿಯ ಸಂಭ್ರಮದಲ್ಲಿ ಮಿಂದೆದ್ದರು.

ಶ್ರೀಕೃಷ್ಣನ ಸಂದೇಶವಾದ ಧರ್ಮ,ಸತ್ಯ, ಕರ್ತವ್ಯ ಹಾಗೂ ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಭಕ್ತರು ಜನ್ಮಾಷ್ಟಮಿ ಆಚರಿಸಿದರು. ಗ್ರಾಮೀಣ ಪ್ರದೇಶಗಳಲ್ಲೂ ಹಬ್ಬದ ಸಡಗರ ಕಂಡು ಬಂತು.