- ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಗ್ರಾಮದ ಸರ್ಕಾರಿ ಶಾಲೆಯ ಆಸ್ತಿಯಾದ ಎಚ್ಎಂ!
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೊರೋನಾ ಕಾಲಘಟ್ಟದಲ್ಲಿ ಶಾಲೆಗೆ ಇದ್ದ ಶಿಕ್ಷಕರು ಪ್ರತಿ ವರ್ಷ ನಡೆಯುವ ಬಡ್ತಿ ಮತ್ತು ವರ್ಗಾವಣೆ ಕಾರಣಕ್ಕೆ ಮಧ್ಯದಲ್ಲೇ ಶಾಲೆ ಬಿಟ್ಟಿದ್ದರಿಂದ ಮುಖ್ಯ ಶಿಕ್ಷಕನಾಗಿದ್ದರೂ ಆರೂ ವಿಷಯ ಬೋಧಿಸಿ, ಶಾಲೆ ಫಲಿತಾಂಶದಲ್ಲೂ ಸಾಕಷ್ಟು ಸುಧಾರಣೆ ತಂದ, ದಾಖಲಾತಿ ಹೆಚ್ಚಿಸಿ, ಮಕ್ಕಳಿಗೆ ಕಲೆ, ಕ್ರೀಡೆ, ಸಾಹಿತ್ಯಾಸಕ್ತಿ ಮೂಡಿಸುವ ಕೆಲಸವನ್ನು ಜಿಲ್ಲೆಯ ದೂರದ ಹಳ್ಳಿಯೊಂದರ ಶಾಲೆ ಶಿಕ್ಷಕ ಸದ್ದಿಲ್ಲದೇ ಮಾಡಿದ್ದಾರೆಂದರೆ ನಂಬಲೇಬೇಕು.ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಸುರೇಶ ಈ ಸಾಧನೆ ಹಿಂದಿನ ಶಕ್ತಿ. ಬಹುಮುಖ ಪ್ರತಿಭೆಯಾದ ಇವರು ತಮ್ಮ ಸಾಮರ್ಥ್ಯವನ್ನೇ ಧಾರೆ ಎರೆಯುವ ಮೂಲಕ ಸರಿಯಾಗಿ ಸಾರಿಗೆ ವ್ಯವಸ್ಥೆಯೂ ಇಲ್ಲದ ರಾಜ್ಯ ಮುಖ್ಯ ಹೆದ್ದಾರಿಯಿಂದ ನಾಲ್ಕೈದು ಕಿಮೀ ಒಳಗಿರುವ ಗ್ರಾಮವೊಂದರ ಕಡೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಕುತೂಹಲದಿಂದ ನೋಡುವಂತೆ ಮಾಡಿದ್ದಾರೆ. ಈ ಹೊಗಳಿಕೆಗೆ, ಅದರಲ್ಲೇನೂ ವಿಶೇಷವಿಲ್ಲ, ಅದು ತನ್ನ ಬದ್ಧತೆ ಅಂತಾರೆ ಟಿ.ಸುರೇಶ.
ಪಾಠ ಬೋಧನೆಗಷ್ಟೇ ಸೀಮಿತರಾಗದ ಮುಖ್ಯ ಶಿಕ್ಷಕ ಟಿ.ಸುರೇಶ ಯೋಗ, ಕಲೆ, ಕ್ರೀಡೆಯಲ್ಲೂ ಮಕ್ಕಳಿಗೆ ಆಸಕ್ತಿ ಮೂಡಿಸಿದರು. ಸ್ವತಃ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಇವರು ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡಬಲ್ಲರು. ಕನ್ನಡ, ಹಿಂದಿ, ತೆಲುಗು ಹಾಡುಗಳೆಂದರೆ ಸುರೇಶರ ಕಂಠದಲ್ಲೇ ಕೂತಿರುತ್ತವೆ.
2013ರಲ್ಲಿ ಆವಿಷ್ಕಾರ, 2015ರಲ್ಲಿ ಇಸ್ರೋ, ನಮ್ಮ ಹೆಮ್ಮೆ, 2015ರಲ್ಲಿ ನೀನೇಕೆ ಗೆಲ್ಲಲಾರೆ ಕೃತಿ, 2016ರಲ್ಲಿ ನೀನನ್ನನೇನನ್ನೂ ಎಂಬ ಕವನ ಸಂಕಲ ಬಿಡುಗಡೆ ಮಾಡಿದ್ದಾರೆ. ಸಾಹಿತ್ಯ ಚಟುವಟಿಕೆಗಳಲ್ಲೂ ಪಾಲ್ಗೊಂಡು, ಮಕ್ಕಳಿಗೂ ಅಂತಹ ಆಸಕ್ತಿ ಮೂಡಿಸುತ್ತಾರೆ. 365 ದಿನಗಳಲ್ಲಿನ ವಿಜ್ಞಾನಿಗಳ ವಿಶೇಷ ಪರಿಚಯ ಕೃತಿಗೆ ಐಐಎಸ್ಸಿ ಸಂಸ್ಥೆಯ ಪ್ರಸಿದ್ಧ ವಿಜ್ಞಾನಿ ಡಾ.ಹರಿಶ್ಚಂದ್ರ ಮುನ್ನುಡಿ ಬರೆದಿದ್ದಾರೆ. ದೇಶದ ಸರ್ವಶ್ರೇಷ್ಠ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ ಅವರಿಂದ ಅಭಿನಂದನಾ ಪತ್ರ, ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರಿಂದ ವಿಜ್ಞಾನಿಗಳ ಕುರಿತ ಪುಸ್ತಕ ರಾಜ್ಯದ ಪ್ರತಿ ಶಾಲೆಗೆ ತಲುಪುವಂತೆ ವ್ಯವಸ್ಥೆ ಆಗಿದ್ದು ಸುರೇಶ ಕಾಳಜಿ, ಬದ್ಧತೆಗೆ ಸಾಕ್ಷಿ.
- - -
-2ಕೆಡಿವಿಜಿ15: ಅಣಬೇರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಟಿ.ಸುರೇಶ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುತ್ತಿರುವುದು.