ಬೆಟ್ಟದಪುರ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ದೀಪಾವಳಿ ದೀವಟಿಗೆ ಉತ್ಸವದ ಅಂಗವಾಗಿ ಮಂಗಳವಾರ ಅಮಾವಾಸ್ಯೆಯಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಕ್ತಾದಿಗಳೊಂದಿಗೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು.
ಯದುವೀರ ಒಡೆಯರ್ ಅವರನ್ನು ಬೆಟ್ಟದ ತಪ್ಪಲಿನಲ್ಲಿ ನಟರಾಜ ಸ್ವಾಮೀಜಿ ಹಾಗೂ ಗ್ರಾಮಸ್ಥರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು
ನಂತರ ಸಂಸದ ಯದುವೀರ್ ಮಾತನಾಡಿ, ಪ್ರಾಚೀನ, ಐತಿಹಾಸಿಕ ಹಿನ್ನೆಲೆ ಇರುವ ದೇವಾಲಯಕ್ಕೆ ವಿವಿಧ ತಾಲೂಕಿನಿಂದ ಆಗಮಿಸಿದ ಭಕ್ತಾದಿಗಳೊಂದಿಗೆ ಮೆಟ್ಟಿಲನ್ನು ಹತ್ತಿ ದೇವರ ದರ್ಶನ ಪಡೆದಿದ್ದೇನೆ, ನಮ್ಮ ಪೂರ್ವಜರಾದ ಜಯಚಾಮರಾಜ ಒಡೆಯರ್ ಮಹಾರಾಜರು ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿ ಸಿಕ್ಕಿದಂತಹ ಎರಡು ಆನೆಗಳಲ್ಲಿ ಜಯಮಾರ್ತಾಂಡ ಆನೆಯು ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಈ ದೇವಾಲಯವು ಜೀರ್ಣೋದ್ಧಾರವಾಗಬೇಕು ಯಾವ ದೃಷ್ಟಿಯಲ್ಲಿ ಅಭಿವೃದ್ಧಿ ಮಾಡಬೇಕೆಂಬುದು ಮುಖ್ಯವಾದ ವಿಚಾರವಾಗಿದೆ, ಇದು ಧಾರ್ಮಿಕ ಸ್ಥಳ, ಪ್ರವಾಸೋದ್ಯಮ ಸ್ಥಳವಲ್ಲ, ಇದನ್ನು ಧಾರ್ಮಿಕ ಸ್ಥಳದ ದೃಷ್ಟಿಕೋನದಲ್ಲಿ ಅಭಿವೃದ್ಧಿಯಾಗಬೇಕಾಗಿದೆ, ಧರ್ಮದ ಆಧಾರದ ಮೇಲೆ ಪರಿಸರ ವಲಯವನ್ನು ಕಾಳಜಿಯಾಗಿಟ್ಟುಕೊಂಡು, ಆಧುನಿಕತೆಗೆ ಹೊಂದಿಕೊಂಡಂತೆ ಕೆಲಸ ಮಾಡಬೇಕು. ಪುರಾತತ್ವ ಇಲಾಖೆಯವರು ಸ್ಮಾರಕ, ದೇವಾಲಯಗಳನ್ನು ಪ್ರತಿಮೆಗಳನ್ನು ಸುರಕ್ಷತೆಯಿಂದ ಕಾಪಾಡುತ್ತಿದ್ದಾರೆ, ಇದರೊಂದಿಗೆ ಮುಜುರಾಯಿ ಇಲಾಖೆ ಸಹಕಾರ ನೀಡಿದೆ, ಬೆಟ್ಟಕ್ಕೆ ಒಳಪಡುವ ವಿವಿಧ ಇಲಾಖೆಯನ್ನು ಒಳಗೊಂಡಂತೆ ಚರ್ಚೆ ನಡೆಸಿ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು, ಪ್ರಾಚೀನ ಕಾಲದ ದೇವಾಲಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಯೋಜನೆ ಇದೆ ಎಂದರು.
ಇದೇ ವೇಳೆ ಬೆಟ್ಟದ ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು, ಇದನ್ನು ನಿಯಂತ್ರಿಸುವಂತೆ ಸಂಸದರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಲು ಗಣಿಗಾರಿಕೆಗೆ ನನ್ನ ಸಂಪೂರ್ಣ ವಿರೋಧವಿದೆ, ಅದನ್ನು ಪರಿಶೀಲಿಸಿ, ಪರಿಸರ ಸೂಕ್ಷ್ಮ ವಲಯವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡ ಭಕ್ತಾದಿಗಳು
ಸಂಸದರು ಬೆಟ್ಟ ಹತ್ತುವ ಸಂದರ್ಭದಲ್ಲಿ ಭಕ್ತಾದಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಂತರ ತಾಳು ಬೆಟ್ಟದಲ್ಲಿರುವ ಗೋಪುರದ ಭಾಗದಲ್ಲಿ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಏರ್ಪಡಿಸಿದ್ದ ಅನ್ನದಾಸೋಹ ಕಾರ್ಯಕ್ರಮವನ್ನು ಯದುವೀರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯದುವೀರ್ ಒಡೆಯರ್ ಅವರು ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಅವರು ನಡೆಸುತ್ತಿರುವ ಅನ್ನದಾಸೋಹ ಕಾರ್ಯಕ್ರಮ ನೂರಾರು ವರ್ಷಗಳು ಕಾಲ ಉಳಿಯಲಿ, ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಇಂತಹ ನೂರಾರು ಅನ್ನದಾಸೋಹ ಕಾರ್ಯಕ್ರಮಗಳು ನಡೆಯಬೇಕೆಂದರು.
ಬೆಟ್ಟದಪುರದ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ರಥೋತ್ಸವಕ್ಕೆ ಎರಡು ರಥಗಳನ್ನು ದಾನವಾಗಿ ನೀಡಿದ ಅರಕಲಗೂಡು ತಾಲೂಕಿನ ಬೆಮ್ಮೆತ್ತಿ ಗ್ರಾಮದ ಸುರೇಶ್ ಅವರನ್ನು ಯದುವಿರ ಒಡೆಯರ್ ಸನ್ಮಾನಿಸಿದರು.
ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ, ಮೈಮಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ, ಮುಖಂಡರಾದ ರಾಮು, ಕುಮಾರ್, ಗಾವಡಗೆರೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿಲ್ಪ, ಮಾನಸ ಗಂಗೋತ್ರಿ ಸಹ ಪ್ರಾಧ್ಯಾಪಕ ಕೆ.ಸಿ. ಬಸವರಾಜ್, ಎಂ.ಎಂ. ರಾಜೇಗೌಡ, ಲೋಕಪಾಲಯ್ಯ, ಎಂ.ಎನ್. ಚಂದ್ರಶೇಖರ್, ರಾಜು, ಶಿವಕುಮಾರಸ್ವಾಮಿ, ಶಾಂತಕುಮಾರ್, ಮಂಜುನಾಥ್, ಪತ್ರಕರ್ತ ಶಿವದೇವ್, ಬಿ.ಸಿ. ರಾಜೇಂದ್ರ ಬಿಎಸ್ ಮಹಾದೇವಪ್ಪ ಬಿ ವಿ ಮಂಜುನಾಥ್, ರುದ್ರೇಶ್, ಪಿರಿಯಾಪಟ್ಟಣ, ಅರಕಲಗೂಡು, ಕೆ.ಆರ್. ನಗರ ತಾಲೂಕು, ಹುಣಸೂರು ತಾಲೂಕಿನ ಸಾವಿರಾರು ಭಕ್ತರು ಬೆಟ್ಟವನ್ನು ಹತ್ತಿ ದೇವರ ದರ್ಶನ ಪಡೆದರು.