ಹನೂರು ಬಸ್‌ ನಿಲ್ದಾಣದಲ್ಲಿ ಬಸ್‌ ಹರಿದು ಮಹಿಳೆ ಕಾಲು ಜಖಂ

KannadaprabhaNewsNetwork | Published : Feb 6, 2025 11:48 PM

ಹನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಸಾರಿಗೆ ವಾಹನ ಕಾಲಿನ ಮೇಲೆ ಹರಿದ ಪರಿಣಾಮ ಗಾಯಗೊಂಡಿರುವ ಸರೋಜಮ್ಮ ಅವರನ್ನು ನಾಗರಿಕರು ಆಸ್ಪತ್ರೆಗೆ ದಾಖಲು ಮಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಸಾರಿಗೆ ಹರಿದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ದ್ವಾರದಲ್ಲಿ ನಡೆದಿದೆ.

ಘಟನೆ ವಿವಿರ: ಸರೋಜಮ್ಮ ಕಾರ್ಯ ನಿಮಿತ್ತ ಬಸ್ ನಿಲ್ದಾಣದ ದ್ವಾರ ಪ್ರವೇಶಿಸಿದ್ದಾರೆ. ಇದೇ ಈ ವೇಳೆ ಕೊಳ್ಳೇಗಾಲದಿಂದ ಹನೂರು ಬಸ್ ನಿಲ್ದಾಣಕ್ಕೆ ಆಗಮಿಸಿದ ಬಸ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆಗಾಗಲೇ ಚಾಲಕನ ನಿಯಂತ್ರಣ ತಪ್ಪಿ ಬಸ್ ಚಕ್ರ ಕಾಲಿನ ಮಂಡಿ, ತೊಡೆ ಭಾಗಕ್ಕೆ ಹರಿದಿದೆ. ಇದರಿಂದ ತೀವ್ರವಾಗಿ ಮಹಿಳೆ ಗಾಯಗೊಂಡು ಗೋಳಾಡುತ್ತಿದ್ದರು. ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಹತ್ತಿರದಲ್ಲಿದ್ದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿದ್ದ ಆ್ಯಂಬುಲೆನ್ಸ್ ಕರೆಸಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್‌ಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಒತ್ತಾಯ:

ಬಹುತೇಕ ಬಸ್ ಚಾಲಕರು ಅತಿ ವೇಗವಾಗಿ ವಾಹನ ಚಾಲನೆ ಮಾಡುವ ಮೂಲಕ ಸಾವು ನೋವುಗಳಿಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿಧಾನ ಗತಿಯಿಂದ ವಾಹನ ಚಾಲನೆ ಮಾಡಲು ಸಂಬಂಧಪಟ್ಟ ರಾಜ್ಯ ಸಾರಿಗೆ ಇಲಾಖೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದು 2ನೇ ಪ್ರಕರಣ, ಹಂಪ್ಸ್ ನಿರ್ಮಾಣಕ್ಕೆ ಒತ್ತು:

ಸರೋಜಮ್ಮ ಗಾಯಗೊಂಡ ಸ್ಥಳದಲ್ಲಿಯೇ ಈಚೆಗೆ ವ್ಯಕ್ತಿಯೋರ್ವರು ಬಸ್ ಡಿಕ್ಕಿಯಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಆಗಮನ ಮತ್ತು ನಿರ್ಗಮನ ದ್ವಾರಗಳಲ್ಲಿ ಹಂಪ್ಸ್ ನಿರ್ಮಾಣ ಕಾರ್ಯ ಸಾರಿಗೆ ಇಲಾಖೆ ಸಾರ್ವಜನಿಕರ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕ್ರಮಗಳನ್ನು ಅನುಸರಿಸಬೇಕು. ಜೊತೆಗೆ ನಾಗರಿಕರ ಪ್ರಾಣ ಹಾನಿ ಆಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ನಾಗರಿಕರು ಒತ್ತಾಯಿಸಿದ್ದಾರೆ.ಹೆಚ್ಚಿನ ಪರಿಹಾರಕ್ಕೆ ಒತ್ತಾಯ:

ಬಸ್ ನಿಲ್ದಾಣ ಪ್ರಮುಖ ದ್ವಾರದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡ ಸರೋಜಮ್ಮ ಕುಟುಂಬದವರು ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದವರಾಗಿದ್ದು ಇಂತಹ ದುರ್ಘಟನೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಸರೋಜಮ್ಮ ಚಿಕಿತ್ಸಾ ವೆಚ್ಚಕ್ಕೆ ಸೂಕ್ತ ಪರಿಹಾರವನ್ನು ರಾಜ್ಯ ಸಾರಿಗೆ ಇಲಾಖೆ ನೀಡಬೇಕು ಎಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.