ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪುರಸಭೆಯಲ್ಲಿ ಇ-ಸ್ವತ್ತು ಪಡೆಯಲು ಕಳೆದ 2 ವರ್ಷದಿಂದ ಅಲೆಯುತ್ತಿರುವ ಯುವಕನೋರ್ವ ತೀವ್ರ ಬೇಸತ್ತು ಪುರಸಭೆ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಘಟನೆಯಿಂದ ಭಯಭೀತರಾದ ಅಧಿಕಾರಿಗಳು, ಜನತೆ ತಡೆದು ಸಮಾಧಾನಿಸುವ ಮೂಲಕ ಪುರಸಭೆಯಲ್ಲಿ ಅಧಿಕಾರಿಗಳ ಶೋಷಣೆಗೆ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ.ಪಟ್ಟಣದ ಮುನಿರತ್ನ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಇ-ಸ್ವತ್ತು ಪಡೆಯಲು ಪಟ್ಟಣದ ಪುರಸಭೆಗೆ ಕಳೆದ 2 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಅಲೆದಾಡಿದ್ದರು. ಇದರಂದ ಬೇಸತ್ತಿದ್ದ ಪಟ್ಟಣದ ಮುನಿರತ್ನ ಇದುವರೆಗೂ ಅರ್ಜಿ ವಿಲೇವಾರಿಯಾಗಿಲ್ಲ, ಕಚೇರಿಗೆ ಅಲೆದು ಅಲೆದು ಸಾಕಾಗಿದೆ ಎಂದು ಸಹನೆ ಕಳೆದುಕೊಂಡಿದ್ದರು. ಅಲ್ಲದೆ, ಕಚೇರಿ ಮುಂಭಾಗ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತ, ಏಕಾಏಕಿ ಎಲ್ಲರ ಎದುರಿನಲ್ಲಿಯೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಪ್ರಯತ್ನ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅಧಿಕಾರಿಗಳು ಆತ್ಮಹತ್ಯೆ ಯತ್ನ ತಡೆಹಿಡಿದು ಸಮಾಧಾನ ಪಡಿಸಿದರು.
ಕೂಡಲೇ ಮುಖ್ಯಾಧಿಕಾರಿ ಭರತ್ ಅವರು ನೊಂದ ವ್ಯಕ್ತಿಯನ್ನು ಕರೆಯಿಸಿ ಕಡತದ ಕುರಿತು ಮಾಹಿತಿ ಪಡೆದರು. ಒಂದು ನಿವೇಶನವನ್ನು ವಿಭಜಿಸಿ, ಎರಡನ್ನಾಗಿಸಿದ್ದು ಆ ಸಂದರ್ಭದಲ್ಲಿ ಅನುಮತಿ ಪಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಕಡತ ವಿಲೇವಾರಿ ಆಗಿಲ್ಲ. 15 ದಿನದಲ್ಲಿ ಇ-ಸ್ವತ್ತು ಸಿದ್ಧಪಡಿಸಿ ಕೊಡುವುದಾಗಿ ಭರವಸೆ ನೀಡಿದರು.- - - ಕೋಟ್ಇ-ಸ್ವತ್ತಿಗಾಗಿ ಸಾರ್ವಜನಿಕರು ಕಚೇರಿಗೆ ಅಲೆದು ಅಲೆದು ತೀವ್ರ ಬೇಸತ್ತಿದ್ದಾರೆ ಎನ್ನುವುದಕ್ಕೆ ಆತ್ಮಹತ್ಯೆ ಯತ್ನ ಸಾಕ್ಷಿಯಾಗಿದೆ. ಲಂಚ ಇಲ್ಲದೇ ಪುರಸಭೆ ಕಚೇರಿಯಲ್ಲಿ ಕಡತಗಳನ್ನು ಸರಿ ಮಾಡುವುದಿಲ್ಲ ಎನ್ನುವ ಸ್ಥಿತಿ ಇಲ್ಲಿದೆ. ಹಣ ಕೊಟ್ಟರೆ ಯಾವುದೇ ದಾಖಲೆ ಇಲ್ಲದೆಯೂ ಕಡತ ವಿಲೇವಾರಿ ಆಗುತ್ತದೆ ಎನ್ನುವುದಕ್ಕೆ ಹಲವು ಉದಾಹರಣೆ ಇದೆ
- ನವೀನ್ಕುಮಾರ್, ಕುಂಬಾರಗುಂಡಿ- - - -31ಕೆ.ಎಸ್.ಕೆ.ಪಿ1:
ಶಿಕಾರಿಪುರದ ಪುರಸಭೆ ಎದುರು ಇ-ಸ್ವತ್ತು ಸಿಗದ ಕಾರಣಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ನಡೆಸಿದ ವ್ಯಕ್ತಿಗೆ ಮುಖ್ಯಾಧಿಕಾರಿ, ಸಾರ್ವಜನಿಕರು ಸಾಂತ್ವನ ಹೇಳಿದರು.