ರೋಣ: ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ ಪಶ್ಚಿಮ ಬಂಗಾಳ ಮೂಲದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೆರೆ ಸಿಕ್ಕಿರುವ ಯುವಕ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ನಾಲಗೋಲ ಗ್ರಾಮದ ಪ್ರಸಂಜಿತರಾಯ ಎಂದು ತಿಳಿದುಬಂದಿದೆ. ರೋಣದಲ್ಲಿ ಜೆಟಿಸಿಸಿ ಕಾಲೇಜಿನ ನಿರ್ಮಾಣ ಕಾಮಗಾರಿ ಸೆಂಟ್ರಿಂಗ್(ಬಾರ್ ಬೆಂಡಿಂಗ್) ಕೆಲಸಕ್ಕೆ ಬಂದಿದ್ದಾಗಿ ತಿಳಿದುಬಂದಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವೆಡೆ ಕಿಸೆಗಳ್ಳತನ: ಇತ್ತೀಚೆಗೆ ಜಿ.ಎಸ್. ಪಾಟೀಲ ಅವರು ವಿಧಾನಸಭಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರೋಣಕ್ಕೆ ಆಗಮಿಸಿದಾಗ ನಡೆದ ಮೆರವಣಿಗೆ ವೇಳೆ ನೈನಾಪುರ ಗ್ರಾಮದ ಬಸನಗೌಡ ಪೊಲೀಸಪಾಟೀಲ ಅವರ ₹30 ಸಾವಿರ, ರೋಣದ ಉಮೇಶ ಕಿರೇಸೂರ ಅವರ ₹34 ಸಾವಿರ, ಕೊತಬಾಳ ವ್ಯಕ್ತಿಯ ₹14 ಸಾವಿರ ಹೀಗೆ ಏಳೆಂಟು ಜನರ ಜೇಬುಗಳನ್ನು ಕತ್ತರಿಸಿ ಸುಮಾರು ₹1.50 ಲಕ್ಷಕ್ಕೂ ಹೆಚ್ಚು ಹಣ ಕಳ್ಳತನವಾಗಿತ್ತು. ಈ ಬಗ್ಗೆ ಹಣ ಕಳೆದುಕೊಂಡವರು ಪೊಲೀಸ ಗಮನಕ್ಕೂ ತಂದಿದ್ದರು.ತಾಲೂಕಿನ ಬೆಣ್ಣಿಹಳ್ಳದ ಸುತ್ತಮುತ್ತ ಜಮೀನುಗಳಿಗೆ ಅಳವಡಿಸಿರುವ ಪಂಪ್ಸೆಟ್ಗಳು ಕಳುವಾಗುತ್ತಿವೆ. ಯಾವಗಲ್ಲ ಗ್ರಾಮದ ರುದ್ರಗೌಡ ಮುಲ್ಕಿಪಾಟೀಲ, ಮರಿಯಪ್ಪ ಗುಜ್ಜಾಳ ಹಾಗೂ ನರಗುಂದ ತಾಲೂಕಿನ ಹದ್ಲಿಯಲ್ಲಿ ಮೋಟರ್ ಪಂಪ್ಸೆಟ್ಗಳು ಕಳ್ಳತನವಾದ ಬಗ್ಗೆ ರೋಣ ಪೊಲೀಸ್ ಠಾಣೆಗೆ ಆಗಮಿಸಿದ ಪಂಪ್ಸೆಟ್ ಮಾಲೀಕರು ದೂರು ನೀಡಿದ್ದಾರೆ.