ಪೇಪರ್ ಲೆಸ್ ನೋಂದಣಿ ಕೈಬಿಡಿ: ಪತ್ರ ಬರಹಗಾರರ ಪ್ರತಿಭಟನೆ

KannadaprabhaNewsNetwork |  
Published : May 12, 2026, 01:30 AM IST
11ಕೆಡಿವಿಜಿ4, 5-ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಏಕಾಏಕಿ ಪೇಪರ್ ಲೆಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ಖಂಡಿಸಿ ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ಪತ್ರ ಬರಹಗಾರರ ಸಂಘ ಪ್ರತಿಭಟನೆ ನಡೆಸಿತು. | Kannada Prabha

ಸಾರಾಂಶ

ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಏಕಾಏಕಿ ಪೇಪರ್ ಲೆಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ಖಂಡಿಸಿ ಜಿಲ್ಲಾ ಪತ್ರ ಬರಹಗಾರರ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಲಾಯಿತು.

- ಕಂದಾಯ ಸಚಿವ, ನೋಂದಣಿ-ಮುದ್ರಾಂಕ ಇಲಾಖೆ ಕ್ರಮಕ್ಕೆ ವಿರೋಧ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಏಕಾಏಕಿ ಪೇಪರ್ ಲೆಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ಖಂಡಿಸಿ ಜಿಲ್ಲಾ ಪತ್ರ ಬರಹಗಾರರ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಪ್ರತಿಭಟನಾ ಬೈಕ್ ರ್ಯಾಲಿ ಆರಂಭಿಸಿದ ಸಂಘದ ಪದಾಧಿಕಾರಿಗಳು, ಪತ್ರ ಬರಹಗಾರರು ಕಂದಾಯ ಇಲಾಖೆ ಸಚಿವರು, ಇಲಾಖೆ ಅಧಿಕಾರಿಗಳ ಪೇಪರ್ ಲೆಸ್ ನೋಂದಣಿ ಕಾರ್ಯದ ಕ್ರಮವನ್ನು ಖಂಡಿಸಿದರು. ಘೋಷಣೆಗಳ ಕೂಗುತ್ತಾ ಡಿಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.

ಇದೇ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ ಮಾತನಾಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಈಚೆಗೆ ಚಾಮರಾಜನಗರ ಜಿಲ್ಲೆ ಯಳಂದೂರು ಗ್ರಾಮದಲ್ಲಿ ಪೇಪರ್ ಲೆಸ್ ಎಂಬ ನಾಮಾಂಕಿತದಡಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಪೇಪರ್ ಲೆಸ್ ನೋಂದಣಿಯಲ್ಲಿ ನೋಂದಣಿಯಾಗುವ ದಸ್ತಾವೇಜಿನಲ್ಲಿ ಮಾರಾಟಗಾರರು, ಖರೀದಿದಾರರ ಮತ್ತು ಸಾಕ್ಷಿದಾರರ ಸಹಿ ಹಾಕುವ ವ್ಯವಸ್ಥೆಯೇ ಇರುವುದಿಲ್ಲ. ಈ ಹಿಂದಿನಂತೆ ದಸ್ತಾವೇಜನ್ನು ತಯಾರಿಸಿ, ಕಾವೇರಿ-2.0ನಲ್ಲಿ ಅಪ್‌ಲೋಡು ಮಾಡಲೇಬೇಕು ಎಂದರು.

ದಸ್ತಾವೇಜಿನ ಮಾರಾಟಗಾರರು, ಖರೀದಿದಾರರು, ಸಾಕ್ಷಿದಾರರಿಂದ ಒಟಿಪಿಯನ್ನು ದಸ್ತಾವೇಜು ಬರಹಗಾರರು ಪಡೆದು, ಮಾರಾಟಗಾರರು, ಖರೀದಿದಾರರ ಮತ್ತು ಸಾಕ್ಷಿಗಳ ಸಹಿ ಇಲ್ಲದಂತೆ ಪಬ್ಲಿಕ್ ಲಾಗಿನ್‌ನಲ್ಲಿ ಅಪ್‌ಲೋಡು ಮಾಡಬೇಕಿರುತ್ತದೆ. ಅನಂತರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪುನಃ ಒಟಿಪಿ ಪಡೆದು, ಫೋಟೋ ಮತ್ತು ಹೆಬ್ಬೆಟ್ಟನ್ನು ಪಡೆದು ನಂತರ ದಸ್ತಾವೇಜು ನೋಂದಣಿಯಾಗುತ್ತದೆ. ಆದರೆ, ಪೇಪರ್ ಲೆಸ್ ಎನ್ನುವ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಸ್ತಾವೇಜು ತಯಾರಿಸಿದ ಪತ್ರ ಅಪ್‌ಲೋಡು ಮಾಡಿದ ನಂತರವೇ ರಿಜಿಸ್ಟರ್ ಆಗುತ್ತದೆ. ಹಾಗಾದರೆ ಪೇಪರ್ ಲೆಸ್ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ಮಾರಾಟಗಾರರು, ಖರೀದಿದಾರರು, ಸಾಕ್ಷಿದಾರರ, ಸಬ್ ರಿಜಿಸ್ಟ್ರಾರ್‌ರವರ ಡಿಎಸ್‌ಸಿ, ಇ-ಸೈನ್ ಇದ್ದರೆ ಅದರಲ್ಲಿ ದಸ್ತಾವೇಜು ಬರಹಗಾರರ ಡಿಎಸ್‌ಸಿ, ಇ-ಸೈನ್ ಇರುವುದಿಲ್ಲ. ಈ ರೀತಿ ಯಾರ ಸಹಿಯೂ ಇಲ್ಲದೇ ನೋಂದಣಿಯಾದ ಪತ್ರವನ್ನು ಮುಂದೆ ತೊಂದರೆಯಾಗಿ ಕೋರ್ಟಿನಲ್ಲಿ ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆಯಲ್ಲಿ ತೊಂದರೆಯಾಗುತ್ತದೆ. ಕೋರ್ಟಿನಲ್ಲಿ ಪತ್ರದ ಬಗ್ಗೆ ಹಲವಾರು ಪ್ರಶ್ನೆಗಳು ಎದುರಾಗುತ್ತವೆ. ಪೇಪರ್ ಲೆಸ್ ನೋಂದಣಿ ಕಾರ್ಯ ವಿರೋಧಿಸಿ ನಾವು ಇಂದು ಹೋರಾಟ ನಡೆಸಿದ್ದೇವೆ ಎಂದು ಹೇಳಿದರು.

ಪೇಪರ್ ಲೆಸ್ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಸುತ್ತೇವೆ. ಈಗಿರುವ ದಸ್ತಾವೇಜು ನೋಂದಣಿಯನ್ನು ಯಥಾ ಸ್ಥಿತಿಯಲ್ಲೇ ಖರೀದಿದಾರರಿಗೆ ದಸ್ತಾವೇಜು ಬರೆಯಿಸಿಕೊಂಡವರಿಗೆ ನೋಂದಣಿಯಾದ ದಸ್ತಾವೇಜು ದಾಖಲೆ ಸಿಗುವಂತಾಗಬೇಕು. ಕಂದಾಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಪೇಪರ್ ಲೆಸ್ ಅಂತೆಲ್ಲಾ ಮಾಡಲು ಹೋಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುವಂತಹ ಪರಿಸ್ಥಿತಿಯನ್ನು ತಂದೊಡ್ಡಬಾರದು ಎಂದು ಬಿ.ವಿ.ಶಿವಾನಂದ ಸೂಚ್ಯವಾಗಿ ಎಚ್ಚರಿಸಿದರು.

ಸಂಘದ ರಾಜ್ಯಾಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್, ಎಸ್.ರಾಜಶೇಖರ, ಡಿ.ಆರ್.ಗಿರಿರಾಜ, ವಿ.ಇ.ಧರ್ಮರಾಜ, ಕೆ.ಹನುಮಂತಪ್ಪ, ಬಿ.ಶಿವರಾಜ್, ವೀರಣ್ಣ, ರಾಜಶೇಖರ ಇತರರು ಇದ್ದರು.

- - -

(ಕೋಟ್‌)

* ತಮಿಳುನಾಡು, ಆಂಧ್ರದಲ್ಲಿ ವ್ಯವಸ್ಥಿತ ಜಾರಿ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಪೇಪರ್ ಲೆಸ್ ನೋಂದಣಿಯನ್ನು ತುಂಬಾ ವ್ಯವಸ್ಥಿತವಾಗಿ ಜಾರಿಗೊಳಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಮೂಲ ಪ್ರತಿ ಪಡೆಯಲಾಗದೇ, ಜೆರಾಕ್ಸ್ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಆಸ್ತಿ ವ್ಯಾಜ್ಯವು ನ್ಯಾಯಾಲಯಕ್ಕೆ ಹೋದಲ್ಲಿ, ಪತ್ರ ತಯಾರಿಸಿದವರು ಯಾರು, ಮಾರಾಟಗಾರರು ಸಹಿ ಹಾಕಿದ್ದಾರಾ, ಸಾಕ್ಷಿದಾರರು ಯಾರು ಎಂಬ ಹತ್ತಾರು ಪ್ರಶ್ನೆಗಳಿಗೆ ಉತ್ತರ ಇಲ್ಲವಾಗಿದೆ. ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಪೂರ್ವಾಪರ ಯೋಚಿಸದೇ, ಏಕಾಏಕಿ ಇಂತಹ ಅವೈಜ್ಞಾನಿಕ ವ್ಯವಸ್ಥೆ ಜಾರಿಗೊಳಿಸಿದ್ದು ಸರಿಯಲ್ಲ.

- ಡಿ.ಕೆ.ಸಂಗಮೇಶ ಎಲಿಗಾರ್, ರಾಜ್ಯಾಧ್ಯಕ್ಷ, ಜಿಲ್ಲಾ ಪತ್ರ ಬರಹಗಾರರ ಸಂಘ.

- - -

-11ಕೆಡಿವಿಜಿ4, 5:

ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಏಕಾಏಕಿ ಪೇಪರ್ ಲೆಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ಖಂಡಿಸಿ ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ಪತ್ರ ಬರಹಗಾರರ ಸಂಘ ಪ್ರತಿಭಟನೆ ನಡೆಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸಲು ರವೀಂದ್ರ ಶ್ರೀಕಂಠಯ್ಯ ಆಗ್ರಹ
ನೀರಿದ್ದಾಗ ತಾತ್ಸಾರ, ಬರವಿದ್ದಾಗ ಲೆಕ್ಕಾಚಾರ..!