ರಾಮನಗರ: ಯಾವುದೇ ವ್ಯಕ್ತಿಯು ಹಿರಿಯ ನಾಗರಿಕರನ್ನು ತ್ಯಜಿಸುವುದು ಶಿಕ್ಷಾರ್ಹ ಅಪರಾಧ. ಜನ್ಮ ನೀಡಿದ ತಂದೆ, ತಾಯಿ, ಹಿರಿಯರ ಪಾಲನೆ, ಪೋಷಣೆ ಜತೆಗೆ ಗೌರವಿಸುವುದು ಎಲ್ಲರ ಕರ್ತವ್ಯ ವಕೀಲ ಮಹಮದ್ ಜೀಶಾನ್ ಉಲ್ಲಾ ತಿಳಿಸಿದರು.
ಹಿರಿಯ ನಾಗರಿಕರ ಜೀವನದ ಘನತೆ ಕಾಪಾಡಬೇಕು. ಮನೆಯಲ್ಲಿ ವಯಸ್ಸಾದವರ ರಕ್ಷಣೆ ಮಾಡುವುದು ಮಕ್ಕಳ ಜವಾಬ್ದಾರಿಯಾಗಿದೆ. ಹಿರಿಯ ನಾಗರಿಕರು ಮತ್ತು ಅವರ ಪೋಷಕರನ್ನು ರಕ್ಷಿಸಲು ಕಾನೂನು ಬದ್ಧ ರಕ್ಷಣೆ ಒದಗಿಸುತ್ತದೆ. ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯಿದೆ-2007ರ ಸೆಕ್ಷನ್ ಅನ್ವಯ ವೃದ್ಧಾಪ್ಯದಲ್ಲಿ ಘನತೆಯ ಜೀವನ ಖಾತರಿಯಾಗಿ ಉಳಿಯಬೇಕು ಎನ್ನುವುದು ಕಾಯಿದೆಯ ಮುಖ್ಯ ಉದ್ದೇಶ ಎಂದರು.
ವಕೀಲ ನವೀನ್ ಕುಮಾರ್ ಮಾತನಾಡಿ, ಕಾನೂನುಬದ್ಧ ವಾರಸುದಾರರು ಹಿರಿಯ ನಾಗರಿಕರಿಗೆ ನಿರ್ವಹಣೆ ನೀಡಬೇಕೆಂದು ಕಾನೂನು ಕಡ್ಡಾಯಗೊಳಿಸುತ್ತದೆ. ಈ ಉದ್ದೇಶಕ್ಕಾಗಿ ಹಿರಿಯ ನಾಗರಿಕರು ನಿರ್ವಹಣಾ ನ್ಯಾಯ ಮಂಡಳಿಗಳಿಗೆ ಅರ್ಜಿ ಸಲ್ಲಿಸಬಹುದು. ಆಸ್ತಿ ವರ್ಗಾಯಿಸಿದ ಹಿರಿಯ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸದಿದ್ದರೆ, ಅಂತಹ ವರ್ಗಾವಣೆಯನ್ನು ವಂಚನೆ ಅಥವಾ ಬಲವಂತದ ಮೂಲಕ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ರದ್ದುಗೊಳಿಸಬಹುದು ಎಂದು ತಿಳಿಸಿದರು.ವಂಚನೆಗೊಳಗಾದ ಹಿರಿಯ ಜೀವಿಗಳು ತಮಗೆ ದೂರು ನೀಡಿದರೆ ನಿರ್ವಹಣೆ ಸಂಬಂಧಿತ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಉಪವಿಭಾಗಗಳಲ್ಲಿ ಕಂದಾಯ ವಿಭಾಗಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ನಿರ್ವಹಣಾ ನ್ಯಾಯಮಂಡಳಿ ನ್ಯಾಯ ನೀಡಲಿದೆ ಎಂದು ತಿಳಿಸಿದರು.
ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತಾರಾವ್ ಮಾತನಾಡಿ 60 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. ಹಿರಿಯ ನಾಗರಿಕರ ಕಾಯಿದೆ ವಯಸ್ಸಾದ ನಾಗರಿಕರಿಗೆ ಆರ್ಥಿಕ ಮತ್ತು ಭಾವನಾತ್ಮಕ ಭದ್ರತೆ ಖಾತ್ರಿ ಪಡಿಸುವಲ್ಲಿ ಮೂಲಾಧಾರವಾಗಿದೆ ಎಂದು ಹೇಳಿದರು.23ಕೆಆರ್ ಎಂಎನ್ 7.ಜೆಪಿಜಿ
ರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ, ಪಾಲಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯಿದೆ-2007 ಕುರಿತ ಕಾರ್ಯಕ್ರಮದಲ್ಲಿ ವಕೀಲ ಮಹಮದ್ ಜೀಶಾನ್ ಉಲ್ಲಾ ಮಾತನಾಡಿದರು.