ವಿವಿಧ ಅಧಿಕಾರಿಗಳ ಗೈರು: ಕೋಟೆಕಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಮುಂದೂಡಿಕೆ

KannadaprabhaNewsNetwork | Published : Jun 28, 2025 12:18 AM

ಕೋಟೆಕಾರು ಪಟ್ಟಣ ಪಂಚಾಯತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಸರಿಯಾದ ನಿರ್ಣಯ ತೆಗೆದು‌ಕೊಳ್ಳಲಾಗದೆ ಸದಸ್ಯರ ಸರ್ವಾನುಮತದಿಂದ ಅಧ್ಯಕ್ಷೆ ದಿವ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮುಂಡೂಡಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲಕೋಟೆಕಾರು ಪಟ್ಟಣ ಪಂಚಾಯತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮೆಸ್ಕಾಂ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಸರಿಯಾದ ನಿರ್ಣಯ ತೆಗೆದು‌ಕೊಳ್ಳಲಾಗದೆ ಸದಸ್ಯರ ಸರ್ವಾನುಮತದಿಂದ ಅಧ್ಯಕ್ಷೆ ದಿವ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮುಂಡೂಡಲಾಯಿತು.ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕಿತ್ತು. ಆದರೆ ಪ್ರತಿ ತಿಂಗಳು ನಡೆಯುವ ಸಾಮಾನ್ಯ ಸಭೆಯಲ್ಲಿ ಬಹುತೇಕ ಅಧಿಕಾರಿಗಳ ಗೈರು ಹಾಜರಾಗುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ನಡೆಯುವ ಸಭೆಯಲ್ಲಿ ಲೋಕೋಪಯೋಗಿ , ಆರೋಗ್ಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿ ಬಹುಮುಖ್ಯವಾಗಿ ಹಾಜರಿರಬೇಕು. ಪ್ರತಿಯೊಂದು ವಾರ್ಡಿನ ಸದಸ್ಯರಿಗೂ ಅವರದೇ ಆದ ಜವಾಬ್ದಾರಿ ಗಳು ಇರುತ್ತದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಯೋಜನೆಗಳನ್ನು ಜಾರಿಗೊಳಿಸಲು ಇರುವ ಸಾಮಾನ್ಯ ಸಭೆಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಗೈರು ಹಾಜರಾದರೆ ಸಮಸ್ಯೆಯ ಬಗ್ಗೆ ಚರ್ಚಿಸಲು ಹಾಗೂ ಅದನ್ನು ನಿರ್ಣಯಗೊಳಿಸಲು ಸಾಧ್ಯವಾಗುವುದಿಲ್ಲ. ಪ್ರತಿ ಸಭೆಗೂ ಸಂಬಂಧಪಟ್ಟ ಇಲಾಖೆಗೆ ಸಭೆಯ ಬಗ್ಗೆ ಪತ್ರವನ್ನು ಕಳಿಸಲಾಗುತ್ತದೆ. ಆದರೂ ಕೂಡ ಅಧಿಕಾರಿಗಳ ಗೈರು ಹಾಜರಿಯಿಂದ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಕಷ್ಟವಾಗುತ್ತಿದೆ ಎಂದು ಅಧ್ಯಕ್ಷೆ ದಿವ್ಯ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇನ್ನು ಮುಂದೆ ನಡೆಯುವ ಸಭೆಗೆ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಇಲ್ಲವಾದಲ್ಲಿ ಪ್ರತಿ ಸಲ ಸಭೆಯನ್ನು ರದ್ದುಗೊಳಿಸುವ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಮುಂದೂಡಿಕೆಗೂ ಮುನ್ನ ಮೆಸ್ಕಾಂ ಮತ್ತು ಅಮೃತ್ 2.0 ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಅವರು, ಅಧಿಕಾರಿಗಳು ಬಾರದೇ ಸಭೆ ನಡೆಸುವುದು ಬೇಡ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದಿವ್ಯ ಸತೀಶ್ ಈಗಾಗಲೇ ಬಂದಿರುವ ಅಧಿಕಾರಿಗಳ ಜತೆ ಚರ್ಚೆ ಮಾಡೋಣ ಎಂದರು.

ಅಮೃತ್ 2.0 ಕುಡಿಯುವ ನೀರು ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ, ‌ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ಹಾಗೂ ಬಾಕಿ ಉಳಿದಿರುವ ಕಾಮಗಾರಿ ಬಗೆ ಮಾಹಿತಿ ನೀಡಿದರು.ವಿರೋಧ ಪಕ್ಷದ ಸದಸ್ಯ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಕಾಮಗಾರಿ ಅರ್ಧಂಬರ್ಧ ಮಾಡುವುದು ಬೇಡ. ಅಜ್ಜಿನಡ್ಕ, ಮುಳ್ಳುಗುಡ್ಡೆ ಬಳಿ ಪೈಪ್ ಲೈನ್ ಗೆ ಅಗೆದ ಗುಂಡಿ ಹಾಗೆ ಇದೆ. ಇದನ್ನು ಪೂರ್ಣಗೊಳಿಸಿ ಎಂದರು.

ಮೆಸ್ಕಾಂ ಎ.ಇ. ಮಾರಪ್ಪ ಮಾತನಾಡಿ, ವಿದ್ಯುತ್ ಎಚ್ ಟಿ ಲೈನ್ ಹೋಗಿರುವ ಜಾಗದಲ್ಲಿ ಮರಗಳು ಬೆಳೆದು ನಿಂತಿದೆ.ಅದನ್ನು ಅರಣ್ಯ ಇಲಾಖೆ ತೆರವು ಮಾಡಿಲ್ಲ. ಮರ ತೆರವು ಮಾಡುವ ಕೆಲಸ ಆಗಬೇಕು ಎಂದರು.ಪ.ಪಂ.ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ , ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾಲಿನಿ ಇದ್ದರು