ಕನ್ನಡಪ್ರಭ ವಾರ್ತೆ ಬೆಂಗಳೂರು
ಬಡತನ ಇದ್ದರೂ ಸಾಧಿಸುವವರಿಗೆ ಅದು ಅಡ್ಡಿಯಾಗುವುದಿಲ್ಲ. ಅದಕ್ಕೆ ಸಾಕ್ಷಿ ಜಿಮ್ ರವಿ. ಕೋಲಾರದ ಕಠಾರಿಪಾಳ್ಯದಲ್ಲಿ ಹುಟ್ಟಿ ಪೋಲಿಯಾಗಬೇಕಾಗಿದ್ದ ರವಿ, ಅವರ ತಾಯಿಯ ಮಾತನ್ನು ಕೇಳಿ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡರು. ಅವರ ತಾಯಿಯು ಹೇಳಿದ ಒಳ್ಳೆಯ ಮಾತುಗಳಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರು. ಯುವಕರು ರವಿ ಅವರ ಜೀವನದ ಕುರಿತ ಈ ಪುಸ್ತಕವನ್ನು ಕೊಂಡು ಓದಬೇಕು, ರವಿ ಉತ್ತಮ ದೇಹದಾರ್ಢ್ಯಪಟುವಾದ್ದರಿಂದ 110ಕ್ಕೂ ಹೆಚ್ಚು ಚಿನ್ನದ ಪದಕ ಗೆದ್ದಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಶಿಫಾರಸು ಮಾಡಿ ಎಂದು ಪ್ರೇಕ್ಷಕರು ಒತ್ತಾಯಿಸಿದಾಗ, ನಾನು ಮುಖ್ಯಮಂತ್ರಿ ಅಲ್ಲ, ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದರೆ ಕೊಡಿಸುತ್ತಿದ್ದೆ. ಈಗ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿ ಶಿಫಾರಸು ಮಾಡುವೆ ಎಂದು ಹೇಳಿದರು.ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪುಸ್ತಕಗಳನ್ನು ಹೆಚ್ಚು ಪ್ರೀತಿಸುವವರು ಅಮೆರಿಕಾದವರು, ಅದನ್ನು ಹೊರತುಪಡಿಸಿದರೆ, ರಾಜ್ಯದಲ್ಲಿ ಮಾತ್ರ ಪುಸ್ತಕ ಬಿಡುಗಡೆಗೆ ಇಷ್ಟೊಂದು ಜನ ಸೇರುವುದು. ಹಾಗಾಗಿ ಪುಸ್ತಕ ಪ್ರೀತಿ ಇನ್ನೂ ನಿಮ್ಮಲ್ಲಿ ಉಳಿದಿರುವುದಕ್ಕೆ ಸಂತಸ ತಂದಿದೆ ಎಂದರು.
ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಪುಸ್ತಕದ ಬಗ್ಗೆ ಮಾತನಾಡಿ, ಇದು ರಮ್ಯವಾದ ಪುಸ್ತಕ ಪ್ರತಿಯೊಂದು ಪ್ರಸಂಗಗಳನ್ನು ಬಹಳ ರಸವತ್ತಾಗಿ ವಿವರಿಸಿ ಬರೆದಿದ್ದಾರೆ. ಮಸಾಲೆ ದೋಸೆ ಪ್ರಸಂಗವಂತೂ ಯಾವುದೇ ಸುಂದರ ಯುವತಿಯ ಸೌಂದರ್ಯವನ್ನು ವರ್ಣಿಸಿದಂತೆ ವಿವರಿಸಿರುವುದು ಸೊಗಸಾಗಿದೆ ಎಂದರು. ಲೇಖಕ ಡಾ.ಮಂಜನಾಥ ಮಾಗೋದಿ, ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ಸಾಹಿತಿ ಎಲ್.ಎನ್.ಮುಕುಂದರಾಜ್ ಹಾಗೂ ಜಿಮ್ ರವಿ ಅಭಿಮಾನಿಗಳಿದ್ದರು.