ಭಟ್ಕಳ: ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸನ್ನು ಕಾಣಬೇಕು ಹಾಗೂ ಅದನ್ನು ನನಸು ಮಾಡಿಕೊಳ್ಳಲು ಸೂಕ್ತ ಯೋಜನೆಯನ್ನು ರೂಪಿಸಿ ಪ್ರಯತ್ನಿಸಬೇಕು ಎಂದು ಉಡುಪಿಯ ಇಂಡಿವರ್ ಸಾಫ್ಟ್ಟೆಕ್ನ ಎಂಡಿ ದಿನೇಶ ಭಟ್ ತಿಳಿಸಿದರು.
ಇಲ್ಲಿನ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ವಿದ್ಯಾಂಜಲಿ ಪಬ್ಲಿಕ್ ಶಾಲೆ, ವಿದ್ಯಾಭಾರತಿ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾದ ೩ ರೊಬೋಟಿಕ್ಸ್ ಲ್ಯಾಬ್ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಗುರಿಗಳನ್ನು ಕಾಲಮಿತಿಯಲ್ಲಿ ಕಾರ್ಯಗತಗೊಳಿಸಿದರೆ ಯಶಸ್ಸು ಸಾಧ್ಯ ಎಂದರು.ಬೆಂಗಳೂರಿನ ನೈಸ್ ಅಟೋಮೇಶನ್ ಪ್ರೈ. ಲಿಮಿಟೆಡ್ ನ ಸಂಸ್ಥಾಪಕ ನಿರ್ದೇಶಕ ನಾಗರಾಜ ಪ್ರಭು ಮಾತನಾಡಿ, ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧರಿತ ಕೌಶಲ್ಯಯುತ ಶಿಕ್ಷಣ ನೀಡಲು ರೊಬೋಟಿಕ್ಸ್ ಲ್ಯಾಬ್ಗಳನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಬೆಂಗಳೂರಿನ ಸಿಸ್ಕೋ ಸಿಸ್ಟಮ್ಸ್ನ ಪ್ರೊಜೆಕ್ಟ್ ಮ್ಯಾನೇಜರ್ ರಾಹುಲ್ ಕೊಲ್ಲೆ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಕೌಶಲ್ಯವಂತರಾದಾಗ, ಉದ್ಯೋಗ ಸೃಷ್ಟಿಸುವಂತವರಾಗಬಹುದು. ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಪ್ರೀತಿ ಜನ್ನು, ಅಧ್ಯಕ್ಷ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹಾಗೂ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಂಗಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದಿ. ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ವಂದಿಸಿದರು. ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಕಿ ಬಿಬಿಯನಾ ಗೋಮ್ಸ್ ಹಾಗೂ ಪ್ರೀತಿ ಪ್ರಭು ನಿರೂಪಿಸಿದರು.