ಗದಗ: ಮಹದಾಯಿ ಯೋಜನೆ ವಿಷಯವಾಗಿ ಟೆಂಡರ್ ಕರೆಯಲಾಗಿದೆ. ಈ ಕುರಿತು ಪ್ರಧಾನ ಮಂತ್ರಿ, ಕೇಂದ್ರ ಸಚಿವ ಜೋಶಿ, ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.ಅವರು ರೋಣ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಬ್ಬರು ಈಗಾಗಲೇ ಬಂದಿದ್ದಾರೆ: ಡಿ.ಕೆ. ಶಿವಕುಮಾರ ಅವರು ಭಾಷಣ ಮಾಡುವ ಮುನ್ನ ಆಯೋಜಕರು ಅಳವಡಿಸಿದ್ದ ಮೈಕ್ ಸ್ಥಳವನ್ನೇ ಬದಲಾಯಿಸು ಸೂಚಿಸಿದರು. ಆಗ ನೆರೆದಿದ್ದ ಯುವಕರು ಡಿಕೆ.. ಡಿಕೆ.. ಎಂದು ಕೂಗಿದರು. ಏ ಸುಮ್ನೆ ಇರಪ್ಪಾ... ಎಂದು ಗದರಿಸಿದ ಡಿ.ಕೆ. ಶಿವಕುಮಾರ ಭಾಷಣ ಆರಂಭಿಸಿದರು. ಜಿ.ಎಸ್. ಪಾಟೀಲ ಇಂದು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಅಡಿಗಲ್ಲುಗಳಲ್ಲಿ ಒಂದು ಮನೆ ಕಟ್ಟಿಸಬಹುದು, ಅಷ್ಟೊಂದು ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರಕ್ಕೆ 140 ಶಾಸಕರ ಬೆಂಬಲವಿದೆ, ಇಬ್ಬರು ಈಗಾಗಲೇ ಬಂದಿದ್ದಾರೆ. ಇನ್ನುಳಿದವರು ನಮ್ಮೊಟ್ಟಿಗೆ ಇದ್ದಾರೆ, ಅದನ್ನು ಇಲ್ಲಿ ಹೇಳಲ್ಲ ಎಂದು ಹೇಳಿದರು.
ಅನ್ನಭಾಗ್ಯದಲ್ಲಿ ದಾಸೋಹ, ಗೃಹಲಕ್ಷ್ಮೀ ಸ್ತ್ರೀ ಸಮಾನತೆ, ಶಕ್ತಿ ಮೂಲಕ ಮಹಿಳೆಗೆ ಸ್ವಾತಂತ್ರ್ಯಯನ್ನು ನಮ್ಮ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಆದರೆ ಬಿಜೆಪಿ ಭಾವನೆಗಳ ಮೇಲೆ ಮಾತನಾಡಿದರೆ, ನಾವು ಬದುಕು ಸುಧಾರಣೆಯ ಬಗ್ಗೆ ಮಾತಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.