ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಿ: ಉಮಾಶಂಕರ್

KannadaprabhaNewsNetwork |  
Published : Dec 09, 2023, 01:15 AM IST
ಪೋಟೋ: 8ಎಸ್‌ಎಂಜಿಕೆಪಿ02ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತದಾರರ ಪಟ್ಟಿ ವೀಕ್ಷಕ ಎಸ್‌.ಆರ್‌.ಉಮಾಶಂಕರ್ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಮಾತನಾಡಿ, ಪ್ರಸಕ್ತ ಪರಿಷ್ಕರಣೆ ವೇಳೆ ಸುಮಾರು 27 ಸಾವಿರ ಯುವ ಮತದಾರರು ನೋಂದಣಿಯಾಗಿದ್ದು, ಇನ್ನು 3000 ದಿಂದ 3500 ಯುವ ಮತದಾರರು ನೋಂದಣಿಗೆ ಬಾಕಿ ಇದೆ. ಕಳೆದ ವಾರದಲ್ಲೇ 5527 ಯುವ ಮತದಾರರ ಸೇರ್ಪಡೆ ಆಗಿದೆ. 32 ಸಾವಿರ ಎಪಿಕ್ ಕಾರ್ಡ್‍ಗಳು ಅಂಚೆ ವಿಳಾಸಕ್ಕೆ ರವಾನೆಯಾಗಿದೆ. ಹೊಸದಾಗಿ ಅರ್ಜಿ ಹಾಕಿದವರದ್ದು ಜನೇವರಿ 1ರಿಂದ ರವಾನೆಯಾಗುತ್ತದೆ ಎಂದು ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರೆ । ಸುಮಾರು 3500 ಯುವ ಮತದಾರರು ನೋಂದಣಿಗೆ ಬಾಕಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಇನ್ನೂ ಬಾಕಿ ಇರುವ ಅರ್ಹ ಯುವ ಮತದಾರರ ನೋಂದಣಿಯನ್ನು ಮಾಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕ ಎಸ್‌.ಆರ್‌.ಉಮಾಶಂಕರ್ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2024ಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವಹಿಸುತ್ತವೆ. ರಾಜಕೀಯ ಪಕ್ಷಗಳ ತೊಡಗಿಕೊಳ್ಳುವಿಕೆ, ಅವರು ನೀಡುವ ಸಲಹೆ ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚೆನ್ನಾಗಿ ಆಗಿದೆ. ಸ್ವೀಪ್ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗಿದೆ. ಆದರೆ, 18, 19 ವರ್ಷದ ಯುವ ಮತದಾರರ ನೋಂದಣಿ ಸ್ವಲ್ಪ ಬಾಕಿ ಇದೆ. ಇನ್ನೂ 3 ರಿಂದ 4 ಸಾವಿರ ಯುವ ಮತದಾರರ ನೋಂದಣಿ ಬಾಕಿ ಇದ್ದು, ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನೋಂದಣಿ ಆಗಬೇಕು ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ ಆಗಿದ್ದು, ಯುವ ಮತದಾರರು ಸೇರಿದಂತೆ ಜನತೆ ಅರ್ಜಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ನಮೂನೆ 6, 7 ಮತ್ತು 8 ಅರ್ಜಿಗಳು ಆನ್‍ಲೈನ್, ಆಫ್‍ಲೈನ್‍ನಲ್ಲಿ ಬಂದಿದ್ದು, ಅಪ್‍ಡೇಟ್ ಆಗುತ್ತಿವೆ. ಹೆಚ್ಚು ಬಾಕಿ ಇರುವುದಿಲ್ಲ. 2-3 ಮತದಾರರ ಕಾರ್ಡನ್ನು ಹೊಂದುವುದು ಅಪರಾಧವಾಗುತ್ತದೆ. ಆದ್ದರಿಂದ ಹೆಚ್ಚು ಕಾರ್ಡ್ ಹೊಂದಿರುವವರು ಸ್ವತಃ ಅದನ್ನು ರದ್ದುಪಡಿಸಿ ಒಂದೇ ಕಾರ್ಡನ್ನು ಹೊಂದುವುದು, ಮರಣ ಹೊಂದಿದವರ ಹೆಸರನ್ನು ತೆಗೆಸಿಹಾಕುವುದು ಹಾಗೂ ವರ್ಗಾವಣೆ, ಸ್ಥಳ ಬದಲಾವಣೆ ಸೇರಿ ಇತರೆ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಮಾತನಾಡಿ, ಪ್ರಸಕ್ತ ಪರಿಷ್ಕರಣೆ ವೇಳೆ ಸುಮಾರು 27 ಸಾವಿರ ಯುವ ಮತದಾರರು ನೋಂದಣಿಯಾಗಿದ್ದು, ಇನ್ನು 3000 ದಿಂದ 3500 ಯುವ ಮತದಾರರು ನೋಂದಣಿಗೆ ಬಾಕಿ ಇದೆ. ಕಳೆದ ವಾರದಲ್ಲೇ 5527 ಯುವ ಮತದಾರರ ಸೇರ್ಪಡೆ ಆಗಿದೆ. 32 ಸಾವಿರ ಎಪಿಕ್ ಕಾರ್ಡ್‍ಗಳು ಅಂಚೆ ವಿಳಾಸಕ್ಕೆ ರವಾನೆಯಾಗಿದೆ. ಹೊಸದಾಗಿ ಅರ್ಜಿ ಹಾಕಿದವರದ್ದು ಜನೇವರಿ 1ರಿಂದ ರವಾನೆಯಾಗುತ್ತದೆ ಎಂದು ಹೇಳಿದರು.

ಶೇಕಡವಾರು ಮತದಾನ ಕಡಿಮೆ ಆಗಲು ಕಾರಣ ಎರಡೆರಡು ಕಡೆ ಹೆಸರು ಇರುವುದು ಹಾಗೂ ಮರಣ ಹೊಂದಿದವರ ಹೆಸರುಗಳು ಪಟ್ಟಿಯಲ್ಲಿ ಇರುವುದಾಗಿದೆ. ಎರಡು ಕಡೆ ಇರುವುದನ್ನು ರದ್ದುಪಡಿಸುವ ಅಭಿಯಾನ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ 19 ಸಾವಿರ ಮರಣ ಸಂಭವ ಆಗುತ್ತದೆ. ಇದಕ್ಕೆ ತಕ್ಕನಾಗಿ ಹೆಸರನ್ನು ತೆಗೆದು ಹಾಕುವ ಕೆಲಸ ಆಗಬೇಕು. ಕಳೆದ ಬಾರಿ 6 ಸಾವಿರ ಅಂತರವಿತ್ತು, ಈ ಬಾರಿ 3 ಸಾವಿರಕ್ಕೆ ಇಳಿದಿದ್ದು, ಮರಣ ಹೊಂದಿದವರನ್ನು ಗುರುತಿಸಿ, ಹೆಸರು ತೆಗೆದುಹಾಕಲು ರಾಜಕೀಯ ಪಕ್ಷಗಳ ಏಜೆಂಟರ್ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ 7 ಮತ ಕ್ಷೇತ್ರಗಳು, 1793 ಮತಗಟ್ಟೆಗಳಿದ್ದು, 2024ರ ಜನೇವರಿ 05ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪ್ರಸ್ತುತ ಮತದಾರರ ಪಟ್ಟಿಯಲ್ಲಿ 7,28,661 ಪುರುಷ, 7,44,779 ಮಹಿಳೆ ಸೇರಿದಂತೆ ಒಟ್ಟು 14,73,440 ಮತದಾರರು ಇದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ರಾಜಕೀಯ ಪಕ್ಷಗಳಾದ ಕಾಂಗ್ರೆಸ್‍ನ ಚಂದನ್, ಬಿಜೆಪಿ ಪಕ್ಷ ಕೆ.ಎಸ್. ದೇವರಾಜ್, ಬಿಎಸ್‍ಪಿ ಪಕ್ಷದ ಮಂಜುನಾಥ್, ಜೆಡಿಎಸ್‍ನ ಎಸ್‌.ನಿಖಿಲ್ ಸೇರಿದಂತೆ ಅಧಿಕಾರಿಗಳು ಇದ್ದರು.

- - -

8ಎಸ್‌ಎಂಜಿಕೆಪಿ02

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತದಾರರ ಪಟ್ಟಿ ವೀಕ್ಷಕ ಎಸ್‌.ಆರ್‌. ಉಮಾಶಂಕರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''