ರಾಮನಗರ: ಗೌತಮ ಬುದ್ಧರು ಜಗತ್ತಿಗೆ ಸಾರಿದ ಅಹಿಂಸೆ, ಶಾಂತಿ, ಕರುಣೆ, ಮೈತ್ರಿ, ಪ್ರಜ್ಞೆ ಮತ್ತು ಸಮಾನತೆಯ ಸಂದೇಶಗಳು ಇಂದಿಗೂ ಪ್ರಸ್ತುತ. ಸಮಾಜದಲ್ಲಿನ ಅಶಾಂತಿ, ದ್ವೇಷ, ಅಸೂಯೆಗಳನ್ನು ತೊಡೆದುಹಾಕಲು ಬುದ್ಧರ ತತ್ವಗಳು ಇಂದಿಗೂ ದಾರಿದೀಪವಾಗಿವೆ ಎಂದು ಉಪವಿಭಾಗಾಧಿಕಾರಿ ಬಿನೋಯ್ ಹೇಳಿದರು.
ಯುವ ಪೀಳಿಗೆ ಹಾಗೂ ಸಾರ್ವಜನಿಕರು ಗೌತಮ ಬುದ್ಧರ ತತ್ವಗಳನ್ನು ಅಳವಡಿಸಿಕೊಂಡು ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳನ್ನು ಜೀವನದಲ್ಲಿ ಅನುಸರಿಸುವ ಮೂಲಕ ವೈಯಕ್ತಿಕ ಮತ್ತು ಸಾಮಾಜಿಕ ಶಾಂತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ರಾಮನಗರ ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ದುಃಖ ನಿವಾರಣೆಯಾಗಬೇಕಾದರೆ ಮಧ್ಯಮ ಜಾರಿಯಲ್ಲಿ ನೇರವಾಗಿ ನಡೆಯಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಅವರು ಮಾತನಾಡಿ, ವಿಧ್ಯಾರ್ಥಿಗಳು ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು. ಮುಖಂಡರಾದ ಲೋಕೇಶ್ ಮೌರ್ಯ ಅವರು ಉಪನ್ಯಾಸ ನೀಡಿದರು.
ಸಮುದಾಯದ ಮುಖಂಡರುಗಳಾದ ಹರೀಶ್ ಬಾಲು, ಕಿರಣ್, ರಾಣಿ, ಶಿವಶಂಕರ್, ಗುಡ್ಡೆ ವೆಂಕಟೇಶ್, ಕುಟಗಲ್ ಶ್ರೀನಿವಾಸ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸೃಷ್ಟಿ ಮತ್ತು ವಿಶ್ವಾಸ್ ಗೌಡ ಅವರನ್ನು ಸನ್ಮಾನಿಸಲಾಯಿತು.