ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಧರ್ಮ ಎಂದರೆ ಆತ್ಮದ ಶುದ್ದೀಕರಣ. ಹೃದಯ ಶುದ್ಧವಾಗಿದ್ದರೆ ಮಾತ್ರ ಧನಾತ್ಮಕ ಚಿಂತನೆ ಸಾಧ್ಯ. ಎಲ್ಲ ಮನುಜರೂ ಸಮಾನರು ಎಂದು ಸಾರಿದ ಕನಕದಾಸರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಹೇಳಿದರು.ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ ಶಿವಮೊಗ್ಗ ಸಹಯೋಗದಲ್ಲಿ ಸೋಮವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಜನರ ಸಂಕಷ್ಟಗಳನ್ನು ನೋಡಿ, ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದು ತಮ್ಮ ಗೀತೆಗಳು, ಕೀರ್ತನೆಗಳ ಮೂಲಕ ಪರಿಹಾರ ತೋರಿದವರು.ಬಸವ ತತ್ವಗಳನ್ನು ಅಳವಡಿಕೊಂಡ ಅವರು ನುಡಿದಂತೆ ನಡೆದು, ಶೋಷಿತರ ಧ್ವನಿಯಾಗಿದ್ದರು. ನಾವೆಲ್ಲ ಸಮಾನರು ಎಂಬ ತತ್ವದೊಂದಿಗೆ ಬಡವರ ಸಂಕಷ್ಟಕ್ಕೆ ಮಿಡಿದವರು. ಅವರ ಜಯಂತಿ ಕೇವಲ ಸರ್ಕಾರದ ಜಯಂತಿ ಆಗಬಾರದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗಬೇಕು ಎಂದರು.
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಕನಕದಾಸರ ಕೊಡುಗೆ ಅಪಾರ. ಈಗಿನ ಮಕ್ಕಳಿಗೆ ಕನಕದಾಸರನ್ನು ಪರಿಚಯಿಸಬೇಕು ಎಂದು ಹೇಳಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, 15ನೇ ಶತಮಾನದಲ್ಲಿ 17 ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಜನರ ಮನೆ ಮನೆಗೆ ಹೋಗಿ ಸಮಸ್ಯೆ ತಿಳಿದು ಪರಿಹರಿಸುವ ಕೆಲಸ ಮಾಡಿದ ಕನಕದಾಸರ ಆದರ್ಶ, ಚಿಂತನೆ ಇಂದಿಗೂ ಪ್ರಸ್ತುತ. ಭಕ್ತಿಗೆ ಭಗವಂತ ಒಲಿಯುತ್ತಾನೆಂಬುದಕ್ಕೆ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಕನಕದಾಸರೇ ಸಾಕ್ಷಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ(ಪ್ರಭಾರ) ಡಾ.ಚಿದಾನಂದ ಎನ್.ಕೆ.ವಿಶೇಷ ಉಪನ್ಯಾಸ ನೀಡಿ, ಮಹಾನ್ ಮಾನವತಾವಾದಿ, ದಾರ್ಶನಿಕರಾದ ಕನಕದಾಸರು ಪಂಚಮವೇದದಲ್ಲಿ ಪ್ರಮುಖ ನಾಯಕರಾಗಿ ನೆಲೆಗೊಂಡಿದ್ದಾರೆ. ರಾಜಕಾರಣ, ದಾರ್ಶನಿಕತೆ ಮತ್ತು ಅಕ್ಷರಗಳನ್ನು ಶ್ರೇಷ್ಠರಾಗಿ ಅಪ್ಪಿಕೊಂಡು ಸಾಗಿದವರು ಕನಕರು. ಬಾಡಾ ನಗರ ವ್ಯಾಪಾರಿ ತಾಣವಾಗಿದ್ದು, ತಂದೆ ಬೀರಪ್ಪ ನಾಯಕರು ಅಲ್ಲಿನ ಮುಖ್ಯಸ್ಥರಾಗಿದ್ದರು. ತಂದೆಯಿಂದ ಸಕಲ ವಿದ್ಯೆಗಳನ್ನು ಕನಕರು ಪಡೆದಿದ್ದರು. ಏಕತಾರಿ, ಕಂಬಳಿ ಮತ್ತು ಕೀರ್ತನೆ ಮೂಲಕ ದಾರ್ಶನಿಕರಾಗಿ ಊರಿನಿಂದ ಊರಿಗೆ ಗೀತೆ-ಕೀರ್ತನೆಗಳ ಮೂಲಕ ಸಮಾನತೆಯ ತತ್ವಗಳನ್ನು ಸಾರಿದ್ದಾರು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕನಕರು ಪ್ರತಿಪಾದಿಸಿದಂತೆ ನೆಲ ಸಂಸ್ಕೃತಿ, ಕಲೆ ಮತ್ತು ಜ್ಞಾನದ ಆಧಾರದಲ್ಲಿ ನೆಲೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಶ್ರವಣ ಸಂಸ್ಕೃತಿಯ ದೊಡ್ಡ ದ್ಯೋತಕ ಕನಕ. ಇಂದಿನ ಮಕ್ಕಳು ದಾರ್ಶನಿಕರು ಹೇಳಿದ ಮಾತುಗಳನನ್ನು ಕೇಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಕನಕರ ಭಕ್ತಿಗೆ ಕೃಷ್ಣನೂ ದರ್ಶನ ನೀಡಿದ್ದರು. ಭಕ್ತಿ, ಶ್ರಮದಿಂದ ಬದುಕುವ ಸಮಾಜ ನಮ್ಮದು. ಯಾರೂ ಮೇಲು ಕೀಳಲ್ಲ. ನಾವೆಲ್ಲ ಒಂದೇ ಎಂದು ಕನಕರು ಶೋಷಿತ ವರ್ಗದ ಧ್ವನಿಯಾಗಿ ಸಾಹಿತ್ಯ ರಚಿಸಿದ್ದಾರೆ. ಅವರು ಕುರುಬ ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ವರ್ಗಕ್ಕೆ ಸೇರಿದವರು. ಸಹಬಾಳ್ವೆ, ಪ್ರೀತಿಯಿಂದ ಒಟ್ಟಾಗಿ ಹೋಗೋಣ ಎಂದು ಹೇಳಿದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ , ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸ್ವಾಗತಿಸಿದರು. ರೇಖಾ ರಂಗನಾಥ ವಂದಿಸಿದರು.